ಉಡುಪಿ ಜಿಲ್ಲೆಯಲ್ಲಿ ಅಂಗವಿಕಲರ ಕಷ್ಟಗಳನ್ನು ಕೇಳೋರೇ ಇಲ್ಲವಾ?
ಉಡುಪಿ, ಮಾರ್ಚ್ 30: ಸರ್ಕಾರ ವಿಕಲಚೇತನರಿಗಾಗಿಯೇ ವಿಶೇಷ ಸೌಲಭ್ಯಗಳನ್ನು ಘೋಷಣೆ ಮಾಡಿದ್ದರೂ, ಯಾರೋ ಈ ಲಾಭವನ್ನ ಪಡೆದಿರುತ್ತಾರೆ. ಇದಕ್ಕೆ ಸಾಕ್ಷಿ ತ್ರಿಚಕ್ರ ಗಾಡಿ ವಿತರಣೆಯಲ್ಲಾಗಿರುವ ಲೋಪ. ಮೂರು ವರ್ಷ ಕಳೆದರೂ ಉಡುಪಿ ಜಿಲ್ಲೆಯ ವಿಕಲಚೇತನರಿಗೆ ಸರ್ಕಾರದ ವತಿಯಿಂದ ನೀಡಲಾಗುವ ತ್ರಿಚಕ್ರ ವಾಹನ ಸಿಕ್ಕಿಲ್ಲ.
ಇವತ್ತು , ನಾಳೆ ವಾಹನ ಸಿಗುತ್ತೆ ಎಂದು ಅಲೆದು ಅಲೆದು ವಿಕಲಚೇತನರು ರೋಸಿ ಹೋಗಿದ್ದಾರೆ. ಹುಟ್ಟುತ್ತಲೆ ಅಂಗವಿಕಲರು, ಇನ್ನುಳಿದವರು ಯಾವುದೋ ದುರ್ಘಟನೆಯಿಂದ ಅಂಗ ವೈಕಲ್ಯಕ್ಕೆ ತುತ್ತಾದವರು ಗಾಡಿ ಇಲ್ಲದೇ ನಡೆದಾಡಲು ಪರದಾಡುವಂತಾಗಿದೆ.[ಉಡುಪಿ ಜಿಲ್ಲಾಸ್ಪತ್ರೆಯ ಮಾನಸಿಕ ಅಸ್ವಸ್ಥ ಘಟಕಕ್ಕೆ ಬೇಕಿದೆ ಕಾಯಕಲ್ಪ]
ಸರ್ಕಾರ ವಿಶೇಷ ತ್ರಿಚಕ್ರ ಗಾಡಿಯನ್ನು ಉಚಿತವಾಗಿ ನೀಡುತ್ತೆ. ಇದು ಎಲ್ಲರಿಗೂ ಗೊತ್ತು. ಉಡುಪಿ ಜಿಲ್ಲೆಯ 200 ವಿಕಲಚೇತನರು ಮೂರು ವರ್ಷದ ಹಿಂದೆ ಗಾಡಿಗಾಗಿ ಅರ್ಜಿ ಸಲ್ಲಿಸಿದ್ದರು. 8 ತಿಂಗಳ ಹಿಂದೆ 48 ಮಂದಿಗೆ ಗಾಡಿ ಮಂಜೂರಾಗಿದೆ. ಆದ್ರೆ ಮೂರು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ, ನಿಜವಾಗಿಯೂ ಅದರ ಅವಶ್ಯಕತೆಯಿರುವವರಿಗೆ ಈ ವಾಹನ ಸಿಕ್ಕಿಲ್ಲ ಎಂಬುದು ವಿಪರ್ಯಾಸ.
ಮೂರು ವರ್ಷದಲ್ಲಿ ಒಟ್ಟು ಮೂವತ್ತು ಗಾಡಿ ಮಾತ್ರ ಬಂದಿದೆ. ಈ ಬಗ್ಗೆ ಇಲಾಖೆಯಿಂದ ಇಲಾಖೆಗೆ ಅಲೆದು ವಿಕಲಚೇತನರು ಸುಸ್ತಾಗಿ ಹೋಗಿದ್ದಾರೆ. ಗಾಡಿ ಬರುತ್ತದೆ ಎಂದು ವಿಕಲಚೇತನರು ಮೊದಲೇ ಮಾಡಿಸಿರುವ ಎಲ್.ಎಲ್.ಆರ್ ಕೂಡಾ ಲ್ಯಾಪ್ಸ್ ಆಗಿ ಹೋಗಿದೆ. ಸ್ವಂತ ಗಾಡಿ ಇಲ್ಲದೇ ಲೈಸನ್ಸ್ನ್ನು ಇವರಿಗೆ ನೀಡಲಾಗುತ್ತಿಲ್ಲ.
ವಾಹನ ಪಡೆದವರಿಗೂ ತೊಂದರೆ: ಈ ತ್ರಿಚಕ್ರ ವಾಹನದ ಟೆಂಡರ್ನ್ನು ಹಾವೇರಿ ಜಿಲ್ಲೆಯವರಿಗೆ ನೀಡಲಾಗಿದೆ. ಆದರೆ ಆ ವಾಹನದಲ್ಲಿ ಗುಣಮಟ್ಟವಿಲ್ಲ. ಉಡುಪಿ ಜಿಲ್ಲೆಯಲ್ಲಿ ಅದರ ಒಂದು ಸಹ ಸರ್ವೀಸ್ ಸೆಂಟರ್ ಇಲ್ಲ. ಈ ಬಗ್ಗೆ ವಿಕಲಚೇತನರ ಇಲಾಖೆಯಾಗಲಿ, ಸರ್ಕಾರವಾಗಲಿ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬುದು ವಿಕಲಚೇತನರ ಆರೋಪ.
ಬೇರೆ ಜಿಲ್ಲೆಯಲ್ಲಿ ತ್ರಿಚಕ್ರ ವಾಹನ ನೀಡುತ್ತಿದ್ದಾರೆ. ಆದರೆ ನಮಗೆ ಯಾಕೆ ನೀಡುತ್ತಿಲ್ಲ ಎಂದು ಉಡುಪಿ ಜಿಲ್ಲೆಯ ವಿಕಲಚೇತನರು ಪ್ರಶ್ನಿಸುತ್ತಿದ್ದಾರೆ. ಇವರಿಗೆ ಬಸ್ ಹಾಗೂ ಇತರೇ ಸಾರ್ವಜನಿಕ ಸಾರಿಗೆಯಲ್ಲಿ ಹೋಗಿ ಬರುವುದಕ್ಕೆ ಕಷ್ಟ. ಇದಕ್ಕಾಗಿ ಸ್ವಂತ ವಾಹನ ಮಾಡಿ ಹೋಗಬೇಕಾಗಿದೆ. ಅಂಗವಿಕಲರಿಗೆ ವಿಶೇಷ ಸೌಲಭ್ಯವನ್ನು ಒದಗಿಸುವ ವಿಕಲಚೇತನ ಇಲಾಖೆ ಈ ಬಗ್ಗೆ ಕ್ರಮಕೈಗೊಳ್ಳಬೇಕಾಗಿದೆ.
ಪ್ರತಿಭಟನೆ ಎಚ್ಚರಿಕೆ: ಸಮಸ್ಯೆ ಬಗೆಹರಿಯದೇ ಇದ್ದರೆ ಜಿಲ್ಲಾಧಿಕಾರಿ ಕಛೇರಿ ಮುಂದೆ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿಯೂ ವಿಕಲಚೇತನರೂ ಎಚ್ಚರಿಕೆಯನ್ನು ನೀಡಿದ್ದಾರೆ.