ಚೈತ್ರಾ ಸಾವು ಪ್ರಕರಣ: ಪ್ರಿಯಕರ, ಮತ್ತಿಬ್ಬರು ಯುವಕರ ಮೇಲೆ ದೂರು
ಉಡುಪಿ, ಅಕ್ಟೋಬರ್ 5: ಉಪ್ಪೂರು ಸೇತುವೆಯಿಂದ ನದಿಗೆ ಹಾರಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಪ್ರಿಯಕರ ಮತ್ತು ಇತರ ಇಬ್ಬರು ಯುವಕರು ಕಾರಣ ಎಂದು ಯುವತಿಯ ತಂದೆ ದೂರು ನೀಡಿದ್ದಾರೆ. ಉಡುಪಿಯ ಪುತ್ತೂರು ಗ್ರಾಮ ಸುಬ್ರಹ್ಮಣ್ಯ ನಗರ ಲಿಂಗೋಟಿಗುಡ್ಡೆ ಚಂದ್ರಶೇಖರ್ ದೂರು ನೀಡಿದವರು.
ಅವರ ಮಗಳು ಚೈತ್ರಾ ಸೆಪ್ಟೆಂಬರ್ 28ರಂದು ಸಂಜೆ ನದಿಗೆ ಹಾರಿದ್ದು, ಎರಡು ದಿನಗಳ ಬಳಿಕ ಮೃತದೇಹ ಪತ್ತೆಯಾಗಿತ್ತು. ಅಂಬಲಪಾಡಿ ಮಾಂಡವಿ ಟವರ್ಸ್ ನಲ್ಲಿರುವ ನೆಟ್ ಐ ಎಂಬ ಕಂಪ್ಯೂಟರ್ ಸೆಂಟರ್ನಲ್ಲಿ ಚೈತ್ರಾ ಕೆಲಸ ಮಾಡುತ್ತಿದ್ದಳು. ಆದರ್ಶ ಎಂಬ ಯುವಕನನ್ನು ಆಕೆ ಪ್ರೀತಿಸುತ್ತಿದ್ದು, ಆತ ಮನೆಗೂ ಬಂದು ಹೋಗುತ್ತಿದ್ದ.[ಮೊಬೈಲಲ್ಲಿ ಮಾತಾಡುತ್ತ, ಅಳುತ್ತ ನದಿಗೆ ಜಿಗಿದ ಯುವತಿ]
ಮನೆಯವರು ಆಕೆಗೆ ಮದುವೆ ಮಾಡುವ ಇರಾದೆ ಕೂಡ ಹೊಂದಿದ್ದರು. ಆದರೆ ಸೆಪ್ಟೆಂಬರ್ 28ರಂದು ಪವನ್ ಮತ್ತು ಸಾಗರ್ ಎಂಬವರು ಆಕೆಯನ್ನು ಎಲ್ಲೋ ಕರೆದುಕೊಂಡು ಹೋಗಿ ಮತ್ತೆ ಸಂಜೆ ತಂದು ಬಿಟ್ಟಿದ್ದರು.[ಭಾಸ್ಕರ್ ಶೆಟ್ಟಿ ಕೊಲೆ: ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ]
ಆದರ್ಶ, ಪವನ್ ಮತ್ತು ಸಾಗರ್ ಸೇರಿಕೊಂಡು ಆಕೆ ಮೇಲೆ ಯಾವುದೋ ದುಷ್ಕೃತ್ಯ ಎಸಗಿರಬೇಕು. ಈ ಕಾರಣದಿಂದ ಆಕೆ ಸಂಜೆ ಉಪ್ಪೂರು ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಚಂದ್ರಶೇಖರ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.