ಉಡುಪಿ ಪರ್ಯಾಯಕ್ಕೆ ಹರಿದುಬರುತ್ತಿದೆ ಹೊರೆ ಕಾಣಿಕೆಗಳ ಮಹಾಪೂರ
ಉಡುಪಿ, ಜನವರಿ 16: ಕೃಷ್ಣ ನಗರಿ ಮತ್ತೊಮ್ಮೆ ಪರ್ಯಾಯ ಮಹೋತ್ಸವಕ್ಕೆ ಸಜ್ಜಾಗಿದೆ. ಪಲಿಮಾರು ಮಠದ ಪರ್ಯಾಯದ ಬಳಿಕ ಇದೀಗ ಅದಮಾರು ಮಠದ ಪರ್ಯಾಯದ ಸರದಿ. ಪರ್ಯಾಯಕ್ಕೆ ಒಂದೇ ದಿನ ಬಾಕಿ ಇರುವಾಗಲೇ ಹೊರೆಕಾಣಿಕೆ ಕೃಷ್ಣಮಠಕ್ಕೆ ಹರಿದುಬರಲಾರಂಭಿಸಿದೆ.
ಮಹಿಳಾ ಮೀನುಗಾರ ಸಂಘ, ಮಟ್ಟು ಗುಳ್ಳ ಬೆಳೆಗಾರರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ದವಸ ಧಾನ್ಯಗಳನ್ನು ಹೊರೆಕಾಣಿಕೆ ರೂಪದಲ್ಲಿ ಸಮರ್ಪಿಸಿದವು. ಮುಖ್ಯವಾಗಿ ಮಟ್ಟುಗುಳ್ಳ ಬೆಳೆಗಾರರ ಸಂಘ 50ಕ್ಕೂ ಅಧಿಕ ವಾಹನದಲ್ಲಿ ಗುಳ್ಳ ಸಮರ್ಪಿಸಿದರೆ, ಮಲ್ಪೆಮೀನುಗಾರರ ಸಂಘ 10ಕ್ಕೂ ಅಧಿಕ ಟನ್ ಅಕ್ಕಿ ಸಮರ್ಪಿಸಿದೆ.

ಇನ್ನುಳಿದಂತೆ 3ಟನ್ ಬೆಲ್ಲ, 5 ಸಾವಿರ ತೆಂಗಿನ ಕಾಯಿ ಹೀಗೆ ವಿವಿಧ ದವಸ ಧಾನ್ಯಗಳು ಕೃಷ್ಣಮಠಕ್ಕೆ ಸಮರ್ಪಣೆಯಾದವು. ಈ ಹೊರೆಕಾಣಿಕೆ ಸಾಮಗ್ರಿಗಳನ್ನು ಪರ್ಯಾಯ ಸಂದರ್ಭ ಊಟೋಪಚಾರಗಳಿಗೆ ಬಳಸಲಾಗುತ್ತದೆ. ಉಳಿದ ದವಸ ಧಾನ್ಯಗಳನ್ನು ಪರ್ಯಾಯದ ಬಳಿಕ ಅನ್ನಪ್ರಸಾದಕ್ಕೆ ಬಳಸಲಾಗುತ್ತದೆ. ಅನ್ನಬ್ರಹ್ಮನ ಕ್ಷೇತ್ರದಲ್ಲಿ ಈ ಬಾರಿ ಐವತ್ತು ಸಾವಿರ ಭಕ್ತಾದಿಗಳಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿದ್ದು, ನುರಿತ ಪಾಕತಜ್ಞರು ಈ ಕೆಲಸಕ್ಕೆ ಸಜ್ಜಾಗಿದ್ದಾರೆ.

ನಾಳೆ ಸಂಜೆ ಹೊತ್ತಿಗೆ ಪರ್ಯಾಯ ಮಹೋತ್ಸವ ಅಧಿಕೃತವಾಗಿ ಪ್ರಾರಂಭವಾಗಲಿದ್ದು, ಮರುದಿನ ಸಂಜೆತನಕ ಪರ್ಯಾಯದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಕಳೆಗಟ್ಟಲಿವೆ.












Click it and Unblock the Notifications