ಉಡುಪಿ: ಕಲಾವಿದನ ಕೈಯಲ್ಲಿ ಮೂಡಿ ಬಂದ ಕೊರೊನಾ ಗಣಪ!
ಉಡುಪಿ, ಆಗಸ್ಟ್ 21: ಗಣೇಶ ಚತುರ್ಥಿಗೆ ಕೃಷ್ಣನಗರಿ ಉಡುಪಿಯಲ್ಲಿ ಭರ್ಜರಿ ತಯಾರಿ ನಡೆದಿದೆ. ಉಡುಪಿಯ ಕೃಷ್ಣಮಠದ ರಥಬೀದಿಯಲ್ಲಿ ಹೂವು ಹಣ್ಣು ಮತ್ತು ಕಬ್ಬು ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದ್ದು, ಹಬ್ಬಕ್ಕೆ ಕಳೆ ಬಂದಿದೆ.
Recommended Video
ಮಠದ ಪರಿಸರ, ರಥಬೀದಿ ಮತ್ತು ನಗರದ ಹಲವೆಡೆಗಳಲ್ಲಿ ದೂರದೂರುಗಳ ಕೃಷಿಕರು ಕಬ್ಬುಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಲಾಕ್ ಡೌನ್ ಬಹುತೇಕ ತೆರವುಗೊಳ್ಳುತ್ತಿರುವುದರಿಂದ ನಗರದಲ್ಲಿ ಜನಸಂದಣಿ ಕೂಡ ಹೆಚ್ಚುತ್ತಿದೆ.
ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಆಚರಿಸುವ ಮುನ್ನ ಈ ಸುದ್ದಿ ಓದಿ
ಕೊರೊನಾ ಸೋಂಕು ಬರುವ ಮುಂಚಿನಂತೆ ಜನಜೀವನ ಸಹಜಸ್ಥಿತಿಗೆ ಮರಳುತ್ತಿದ್ದು, ಒಟ್ಟಾರೆ ಕೋವಿಡ್ ನಿಯಮಾವಳಿ ಮಧ್ಯೆಯೂ ಜನರು ಹಬ್ಬಕ್ಕೆ ಬೇಕಾದ ಹೂವು-ಹಣ್ಣು, ಕಬ್ಬು ಮತ್ತಿತರ ವಸ್ತುಗಳನ್ನು ಆಸಕ್ತಿಯಿಂದ ಖರೀದಿಸುವ ದೃಶ್ಯ ಕಂಡು ಬಂತು.
ಉಡುಪಿ ಜಿಲ್ಲೆಯ ಕೋಟದ ಕಲಾವಿದರೊಬ್ಬರು ಈ ಬಾರಿ ಕೊರೊನಾ ಗಣಪ ಮಾಡಿದ್ದು ಸ್ಥಳೀಯರ ಆಸಕ್ತಿ ಕೆರಳಿಸುತ್ತಿದೆ. ಕಲಾವಿದ ಅನಂತಯ್ಯ ಆಚಾರ್ಯ ಸುಮಾರು 45 ವರ್ಷಗಳಿಂದ ಗಣೇಶನ ಹಬ್ಬದ ಸಂದರ್ಭ ಗಣಪತಿ ಮೂರ್ತಿ ರಚಿಸುತ್ತಾ ಬಂದಿದ್ದಾರೆ. ಅವರು ಪ್ರತೀ ವರ್ಷ ಏನಾದರೂ ವಿಶೇಷ ಗಣಪನ ಮೂರ್ತಿ ರಚಿಸುವುದು ವಾಡಿಕೆ.
ಗಣೇಶ ಚತುರ್ಥಿ 2020: ಗಣೇಶ ಮೂರ್ತಿ ಸ್ಥಾಪನೆ, ಪೂಜಾ ವಿಧಿ-ವಿಧಾನ
ಈ ಬಾರಿ ಅವರಿಗೆ ಬಂದ ಕಲ್ಪನೆ ಕೊರೊನಾಗೆ ಸಂಬಂಧಿಸಿದ್ದು. ಹೀಗಾಗಿ ಕಾಲ ಕೆಳಗೆ ಕೊರೊನಾ ವೈರಸ್ ನ್ನು ಒತ್ತಿ ಹಿಡಿದ ಗಣಪನ ಮೂರ್ತಿಯನ್ನು ಈ ಕಲಾವಿದ ರಚಿಸಿದ್ದಾರೆ. ಅನಂತಯ್ಯ ಅವರು ರಚಿಸಿರುವ ಕೊರೊನಾ ಗಣೇಶನ ವಿಗ್ರಹ ಈ ಬಾರಿಯ ವಿಶೇಷ ಆಕರ್ಷಣೆಯ ಕೇಂದ್ರಬಿಂದುವಾಗಿದೆ.