ಪ್ರವಾಹದ ಬಳಿಕ ಉಡುಪಿಯಲ್ಲಿ ಭೂಕುಸಿತದ ಭೀತಿ: ಅಪಾರ್ಟ್ ಮೆಂಟ್ ತೆರವು ಮಾಡಲು ಸೂಚನೆ
ಉಡುಪಿ, ಸೆಪ್ಟೆಂಬರ್ 21: ಭಾರಿ ಮಳೆಯಿಂದ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪ್ರವಾಹಕ್ಕೆ ಜನರು ಸಿಕ್ಕು ನಲುಗಿದ್ದಾರೆ. ಪ್ರವಾಹದ ನಂತರ ಉಡುಪಿಯಲ್ಲಿ ಈಗ ಭೂ ಕುಸಿತದ ಭೀತಿ ಎದುರಾಗಿದೆ.
ಉಡುಪಿ ಮತ್ತು ಮಣಿಪಾಲ ಮಧ್ಯದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಭೂಕುಸಿತ ಸಂಭವಿಸಿದ್ದು, ಭೂ ಕುಸಿತಗೊಂಡ ಪಕ್ಕದಲ್ಲೇ ಅಪಾರ್ಟ್ಮೆಂಟ್ ಇರುವುದು ಆತಂಕಕ್ಕೆ ಕಾರಣವಾಯಿತು.
ಕೆಲವು ದಿನಗಳ ಹಿಂದೆಯಷ್ಟೇ ಉಡುಪಿ-ಮಣಿಪಾಲ ಚತುಷ್ಪತ ರಸ್ತೆ ನಿರ್ಮಾಣಗೊಂಡಿತ್ತು. ಬೇಕಾಬಿಟ್ಟಿ ಗುಡ್ಡ ಕೊರೆದು, ಹೆದ್ದಾರಿ ಕಾಮಗಾರಿ ನಡೆಸಲಾಗಿದ್ದು, ಈಗ ಅದರ ಒಂದೊಂದೇ ದುಷ್ಪರಿಣಾಮಗಳು ಗೋಚರಿಸುತ್ತಿವೆ.

ಈ ಹಿಂದೆ ಕೂಡಾ ಇದೇ ಪ್ರದೇಶದಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ಈಗ ಎರಡನೇ ಬಾರಿ ಮಳೆಗೆ ಭೂಮಿ ಕುಸಿದಿದೆ. ಸದ್ಯ ಭೂಕುಸಿತ ಜಾಗದಲ್ಲಿರುವ ಕಟ್ಟಡದಲ್ಲಿರುವ ಎಲ್ಲರಿಗೂ ಮನೆ ತೆರವು ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗವನ್ನು ಸಂಚಾರಕ್ಕೆ ನಿರ್ಬಂಧಿಸಲಾಯಿತು. ಸ್ಥಳಕ್ಕೆ ತಹಶೀಲ್ದಾರ್, ನಗರಸಭೆ ಆಯುಕ್ತ ಸೇರಿ ಹಲವಾರು ಅಧಿಕಾರಿಗಳು ಆಗಮಿಸಿ ಅಗತ್ಯ ಕ್ರಮ ಕೈಗೊಂಡರು.












Click it and Unblock the Notifications