ಕೃಷ್ಣ ನಗರಿ ಉಡುಪಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕ್ಷೀಣ
Recommended Video
ಉಡುಪಿ, ಜುಲೈ. 3: ಯಾವಾಗಲೂ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಉಡುಪಿ ಇದೀಗ ಬಣ ಬಣ ಎನ್ನುತ್ತಿದೆ. ಮುಂಗಾರು ಮಳೆಯ ಪರಿಣಾಮ ಕರಾವಳಿಯಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಉಡುಪಿ ಶ್ರೀ ಕೃಷ್ಣನ ದರ್ಶನಕ್ಕಾಗಿ ಸದಾ ಕ್ಯೂನಲ್ಲಿ ನಿಲ್ಲಬೇಕಾಗಿದ್ದ ಜನ ಇದೀಗ ಸಲೀಸಾಗಿ ದರ್ಶನ ಪಡೆಯುತ್ತಿದ್ದಾರೆ.
ಜಿಲ್ಲಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಕೆಲವೆಡೆ ಹಾನಿ ಉಂಟಾಗಿರುವುದರಿಂದ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಒಂದಾದ ಮಲ್ಪೆ ಬೀಚ್ ಗೆ ಇಳಿಯಲು ಜಿಲ್ಲಾಡಳಿತ ನಿಷೇಧ ಒಡ್ಡಿದೆ. ಇದರಿಂದ ಪ್ರವಾಸಿಗರು ಇತ್ತ ಕಡೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ದೇಗುಲಗಳಿಗೆ ನುಗ್ಗಿತು ಮಳೆ ನೀರು, ಮುಳುಗಿತು ಕಮಲಶಿಲೆ
ಹೆಚ್ಚಾಗಿ ರಾಜ್ಯದ ಉತ್ತರ ಭಾಗದಿಂದ ಜನ ಉಡುಪಿಗೆ ಆಗಮಿಸುತ್ತಿದ್ದರು. ಸಾಮಾನ್ಯವಾಗಿ ಶ್ರೀ ಕೃಷ್ಣನ ದರ್ಶನದ ಬಳಿಕ, ಮಲ್ಪೆ ಬೀಚ್ ನಲ್ಲಿ ಕೊಂಚ ವಿರಾಮ ಪಡೆದು ನಂತರ ತಮ್ಮ ಊರಿಗೆ ತೆರಳುತ್ತಿದ್ದರು.
ಮಲ್ಪೆ ಬೀಚ್ ಅಷ್ಟೇ ಅಲ್ಲ, ಪಡುಕೆರೆ, ಕಾಪು, ಹಾಗೂ ಡೆಲ್ಟಾ ಬೀಚ್ ಗಳು ಕೂಡ ಪ್ರವಾಸಿಗರ ಆಕರ್ಷಣೀಯ ಸ್ಥಳಗಳಾಗಿದ್ದು, ಒಟ್ಟಿನಲ್ಲಿ ಇಲ್ಲಿನ ಯಾವ ಸಮುದ್ರಕ್ಕೂ ಇಳಿಯದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿರುವುದರಿಂದ ಪ್ರವಾಸಿಗರ ಸಂಖ್ಯೆ ಕ್ರಮೇಣ ಇಳಿಮುಖವಾಗಿದೆ.
ಇತ್ತ ಮಳೆಯ ಭೀತಿಯಿಂದಲೂ ಜನ ಉಡುಪಿಯತ್ತ ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಸಮಯದಲ್ಲಿ ಸಾಮಾನ್ಯವಾಗಿ ಜನರು ಸ್ವಚ್ಛ ಹಾಗೂ ಪ್ರಶಾಂತವಾಗಿರುವ ಸೈಂಟ್ ಮೇರಿಸ್ ಐಲಾಂಡ್ ನೋಡದೆ ಹಿಂತಿರುಗುತ್ತಿರಲಿಲ್ಲ.
ಆದರೆ ಮಳೆ, ಪ್ರವಾಹದ ಭೀತಿ ಕಾಡುತ್ತಿದ್ದು, ಮುಂದಿನ ಒಂದು ತಿಂಗಳ ಕಾಲ ಐಲಾಂಡ್ ಗೆ ಬರದಂತೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಪ್ರಮುಖ ಪ್ರವಾಸಿ ತಾಣಗಳಲ್ಲಿಯೇ ಜಿಲ್ಲಾಡಳಿತ ನಿರ್ಬಂಧ ಹೇರಿರುವುದರಿಂದ ಪ್ರವಾಸಿಗರು ಉಡುಪಿಯತ್ತ ಮುಖ ಮಾಡುವುದನ್ನೇ ನಿಲ್ಲಿಸಿದ್ದಾರೆ.