ಕೊರೊನಾವೈರಸ್ ಜೀವನದ ಒಂದು ಭಾಗವಾಗಲಿದೆ: ನಳಿನ್ ಕುಮಾರ್
ಉಡುಪಿ, ಮೇ 25: ಇನ್ನು ಮುಂದೆ ಕೊರೊನಾ ವೈರಸ್ ಸೋಂಕು ನಮ್ಮ ಜೀವನದ ಒಂದು ಭಾಗವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.
Recommended Video
ಉಡುಪಿಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಇನ್ನೊಂದಿಷ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಬಹುದು, ಸಮಸ್ಯೆ ಎದುರಿಸಲು ರಾಜ್ಯ ಸರಕಾರ ಸಂಪೂರ್ಣ ಸಜ್ಜಾಗಿದೆ ಎಂದರು.
ಹೊರರಾಜ್ಯದಿಂದ ಕರ್ನಾಟಕಕ್ಕೆ ಬಂದವರಿಗೆ ಕಡ್ಡಾಯವಾಗಿ 14 ದಿನ ಕ್ವಾರಂಟೈನ್ ಮಾಡಲಾಗುತ್ತದೆ, ಕ್ವಾರಂಟೈನ್ ಒಪ್ಪಿಕೊಂಡು ಬರುವವರು ಮಾತ್ರ ವಿಮಾನದಲ್ಲಿ ಬರುತ್ತಾರೆ ಎಂದು ತಿಳಿಸಿದರು.

ಮುಂಬೈ ಕನ್ನಡಿಗರ ಒತ್ತಡ ಸಹಜವಾಗಿಯೇ ಇರುತ್ತದೆ. ಊರಿಗೆ ಕರೆಸಲು ಒತ್ತಾಯ ಬರುವುದು ಸಹಜ. ರಾಜಕಾರಣಿಗಳಿಗೆ ಬಯ್ಯೋದು ಕೂಡ ಸಹಜವೇ. ಮುಂಬೈನಲ್ಲಿ ಇರುವವರು ನಮ್ಮ ಸಹೋದರರೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಹೇಳಿದರು.
ಪಂಚಾಯತ್ ಚುನಾವಣೆ ವಿಚಾರವಾಗಿ ಮಾತಾಡಿದ ಕಟೀಲ್, ಈಗ ಪಂಚಾಯತ್ ಚುನಾವಣೆ ಮಾಡುವ ಪರಿಸ್ಥಿತಿ ಇಲ್ಲ. ಸಮಿತಿ ರಚನೆ ಮಾಡುವ ಬಗ್ಗೆ ಕ್ಯಾಬಿನೆಟ್ ತೀರ್ಮಾನ ಕೈಗೊಂಡಿದೆ. ಸರಕಾರ ಎಲ್ಲವನ್ನೂ ಎಲ್ಲರಲ್ಲಿ ಕೇಳಿ ಮಾಡಲು ಆಗುವುದಿಲ್ಲ ಎಂದು ಕಾಂಗ್ರೆಸ್ ಪಕ್ಷವನ್ನು ಪರೋಕ್ಷವಾಗಿ ಟೀಕಿಸಿದರು.

ಕಾಂಗ್ರೆಸ್ ನವರು ಕೂಡಾ ಸರ್ಕಾರ ನಡೆಸಿದ್ದಾರೆ. ಜನರಿಗೆ ಸಮಸ್ಯೆಯಾಗದ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು ಅನ್ನೋದು ಅವರಿಗೂ ಗೊತ್ತಿದೆ. ಕೆಲವು ಪಂಚಾಯತಿಗೆ ಡಿಸೆಂಬರ್ ವರೆಗೆ ಅವಧಿ ಇದೆ. ಅವಧಿ ಮುಗಿದ ಪಂಚಾಯತಿಗೆ ಜಿಲ್ಲಾಧಿಕಾರಿಗಳು ಸಮಿತಿ ನೇಮಕ ಮಾಡುತ್ತಾರೆ ಎಂದು ವಿಪಕ್ಷ ಕಾಂಗ್ರೆಸ್ ಗೆ ನಳೀನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಸಾಮಾಜಿಕ ಅಂತರವಿಲ್ಲದೇ ನೂರಾರು ಕಾರ್ಯಕರ್ತರ ನಡುವೆ ಕಾರ್ಯಕ್ರಮ ಉದ್ಘಾಟಿಸಿದರು.
ಉಡುಪಿ ಬಸ್ ನಿಲ್ದಾಣ ದಲ್ಲಿ ಉಚಿತ ಬಸ್ ಸೇವೆ ಉದ್ಘಾಟಿಸಿ ಭಾಷಣ ಮಾಡಿದರು. ಉಡುಪಿ ಶಾಸಕ ರಘುಪತಿ ಭಟ್ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.












Click it and Unblock the Notifications