ಕಾನ್ ಸ್ಟೇಬಲ್ ಅಮಾನತು ಪ್ರಕರಣ: ಮುಗಿಯದ ಜಂಗೀಕುಸ್ತಿ..!
ಸಚಿವ ಪ್ರಮೋದ್ ಮಧ್ವರಾಜ್ ತಮ್ಮ ಅಧಿಕಾರ ದುರ್ಬಳಕೆ ಮಾಡಿ ಪೇದೆಯನ್ನ ಅಮಾನತುಗೊಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ' ಇದೊಂದು ಮೆಡಿಕೋ ಲೀಗಲ್ ಕೇಸ್. ಹೀಗಾಗಿ ಅವರನ್ನ ಸಸ್ಪೆಂಡ್ ಮಾಡಲಾಗಿತ್ತು' ಎಂದು ಸ್ಪಷ್ಟನೆ ಮಧ್ವರಾಜ್ ನೀಡಿದ್ದಾರೆ
ಉಡುಪಿ, ಎಪ್ರಿಲ್ 10: ಮಲ್ಪೆ ಪೊಲೀಸ್ ಠಾಣಾ ಪೇದೆ ಪ್ರಕಾಶ್ ಅಮಾನತು ಪ್ರಕರಣ ದಿನಕ್ಕೊಂದು ರಾಜಕೀಯ ತಿರುವು ಪಡೆಯುತ್ತಿದೆ. ಸಚಿವ ಪ್ರಮೋದ್ ಮಧ್ವರಾಜ್ ತಮ್ಮ ಅಧಿಕಾರ ದುರ್ಬಳಕೆ ಮಾಡಿ ಪೇದೆಯನ್ನ ಅಮಾನತುಗೊಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಮಧ್ವರಾಜ್, ' ಇದೊಂದು ಮೆಡಿಕೋ ಲೀಗಲ್ ಕೇಸ್. ಹೀಗಾಗಿ ಅವರನ್ನ ಸಸ್ಪೆಂಡ್ ಮಾಡಲಾಗಿತ್ತು' ಎಂದು ಸ್ಪಷ್ಟನೆ ನೀಡಿದ್ದಾರೆ.[ಉಡುಪಿ: ತನ್ನ ಪತ್ನಿಗೆ ನ್ಯಾಯ ದೊರಕಿಸಿ ಎಂದಿದ್ದ ಪೇದೆ ಸಸ್ಪೆಂಡ್!]
ಇದಾದ ಬೆನ್ನಿಗೆ ಮಾಜಿ ಶಾಸಕ, ಬಿಜೆಪಿ ಮುಖಂಡ ರಘುಪತಿ ಭಟ್, ಮಧ್ವರಾಜ್ ಹಾಗೂ ಅವರ ಪತ್ನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಮಲ್ಪೆ ಕಾನ್ ಸ್ಟೇಬಲ್ ಪ್ರಕಾಶ್ ಅಮಾನತು ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತಾದ ಪೇದೆ ಪ್ರಕಾಶ್ ಮಡದಿ ದೂರು ಸಲ್ಲಿಸಿದಾಗ ಎಸ್ಸೈ ದಾಮೋದರ್ ದೂರು ಸ್ವೀಕರಿಸಿಲ್ಲ. ಕೂಡಲೇ ಇವರನ್ನ ಅಮಾನತು ಮಾಡಬೇಕೆಂದು," ಆಗ್ರಹಿಸಿದ್ದಾರೆ.
'ಸಚಿವ ಪ್ರಮೋದ್ ಮದ್ವರಾಜ್ ಪತ್ನಿಯ ಬಳಿ ಪ್ರಕಾಶ ನನ್ನು ಎಸ್ಸೈ ದಾಮೋದರ್ ಕರೆದುಕೊಂಡು ಹೋಗಿದ್ದರು. ಪೇದೆ ಪ್ರಕಾಶ್, ಚಾಲಕ ಕುಮಾರ್ ಮೇಲೆ ಯಾವುದೇ ಹಲ್ಲೆ ಮಾಡಿಲ್ಲ. ಕುಮಾರ್ ಘಟನೆ ವೇಳೆ ಪಾನಮತ್ತನಾಗಿದ್ದ. ಸರ್ಕಾರಿ ಆಸ್ಪತ್ರೆಯ ಪರೀಕ್ಷೆಯಲ್ಲಿ ಇದು ಸಾಬೀತಾಗಿದೆ. ಪೇದೆ ಪ್ರಕಾಶ್ ನಿಂದ ಕುಮಾರನ ಕಾಲು ಹಿಡಿಸಲಾಯ್ತು," ಎಂದು ಮಾಜಿ ಶಾಸಕರು ಗಂಭೀರ ಆರೋಪ ಮಾಡಿದ್ದಾರೆ.