ಪ್ರಚಾರಕ್ಕೆ ಅಡ್ಡಿ: 'ದೇವಿಮಹಾತ್ಮೆ' ಯಕ್ಷಗಾನ ನಿಲ್ಲಿಸಿದರೇ ಕಾಂಗ್ರೆಸ್ ಕಾರ್ಯಕರ್ತರು?
ಉಡುಪಿ, ಮೇ 11: ದಕ್ಷಿಣಕನ್ನಡ, ಉಡುಪಿ ಜಿಲ್ಲೆಯಲ್ಲಿ ಕಟೀಲು, ಮಂದರ್ತಿ ಮತ್ತು ಕಮಲಶಿಲೆ ದುರ್ಗಾಪರಮೇಶ್ವರಿ ದಶಾವತಾರ ಮಂಡಳಿಯ ಯಕ್ಷಗಾನ ಹರಕೆ ಬಯಲಾಟ ನಡೆಸಬೇಕೆಂದರೆ ಮುಂಗಡ ಬುಕ್ಕಿಂಗ್ ಮಾಡಿಸಬೇಕು. ಇಂದು ಬುಕ್ಕಿಂಗ್ ಮಾಡಿದರೆ ಮೂರ್ನಾಲ್ಕು ವರ್ಷಗಳ ನಂತರದ ದಿನಾಂಕ ಸಿಗುತ್ತದೆ.
ಕರಾವಳಿ ಭಾಗದಲ್ಲಿ ಜನರು ಅಪಾರವಾಗಿ ನಂಬುವ ಮತ್ತು ಹರಕೆ ಹೊರುವ ದೇವಿಮಹಾತ್ಮೆ ಬಯಲಾಟವನ್ನು ಉಡುಪಿ ಜಿಲ್ಲೆ, ಬೈಂದೂರು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಅರ್ಧದಲ್ಲೇ ನಿಲ್ಲಿಸಿ ಉದ್ದಟತನ ತೋರಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.
ಜಿಲ್ಲೆಯ ಅತ್ಯಂತ ಕಾರ್ಣಿಕ ಕ್ಷೇತ್ರಗಳಲ್ಲಿ ಒಂದಾದ ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ, ಯಕ್ಷಗಾನ ಮಂಡಳಿಯ ಹರಕೆಯ ಬಯಲಾಟ ಸಿದ್ದಾಪುರದ ಪೇಟೆಯಲ್ಲಿ ಬುಧವಾರ (ಮೇ 9) ನಡೆಯುತ್ತಿತ್ತು.

ಕಾಲಮಿತಿಯ ಯಕ್ಷಗಾನ ಆಗಿರುವುದರಿಂದ ರಾತ್ರಿ ಏಳು ಗಂಟೆಗೆ ಕಾರ್ಯಕ್ರಮ ಆರಂಭವಾಗಿತ್ತು. ಅದೇ ಸಮಯಕ್ಕೆ ಸರಿಯಾಗಿ ಕಾಂಗ್ರೆಸ್ ಪ್ರಚಾರ ಸಭೆ ಕೂಡಾ ನಡೆಯುತ್ತಿತ್ತು. ಪ್ರಚಾರ ಸಭೆಗೆ ಯಕ್ಷಗಾನ ತೊಂದರೆ ಆಗುತ್ತದೆ ಎಂದು ಹಾಲೀ ಕಾಂಗ್ರೆಸ್ ಶಾಸಕ ಮತ್ತು ಅಭ್ಯರ್ಥಿ ಗೋಪಾಲ ಪೂಜಾರಿ ಕಡೆಯ ಕಾರ್ಯಕರ್ತರು ಯಕ್ಷಗಾನ ನಿಲ್ಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ದೇವರ ಹರಕೆಯ ಆಟ, ಮಧ್ಯಕ್ಕೆ ನಿಲ್ಲಿಸಬಾರದೆಂದು ಕಲಾವಿದರು ಪರಿಪರಿಯಾಗಿ ಕೇಳಿಕೊಂಡರೂ, ಎಷ್ಟು ಕೊಡಬೇಕು ನಿನಗೆ, ನಿನ್ನ ಭಾಗವತಿಕೆ ನಿಲ್ಲಿಸಯ್ಯಾ ಎಂದು ಅಭ್ಯರ್ಥಿಯ ಕಡೆಯವರು ಯಕ್ಷಗಾನವನ್ನು ಒಂದೂವರೆ ಗಂಟೆಯ ಕಾಲ ನಿಲ್ಲಿಸಿದರು ಎಂದು ಸುದ್ದಿಯಾಗಿದೆ.
ಈ ಸಂಬಂಧ ಕಮಲಶಿಲೆ ಯಕ್ಷಗಾನ ಮೇಳದ ವ್ಯವಸ್ಥಾಪಕ, ನಾರಾಯಣ ಶೆಟ್ಟಿಯವರು ದೂರವಾಣಿ ಮೂಲಕ ಘಟನೆಯನ್ನು ವಿವರಿಸುವ ಆಡಿಯೋ ತುಣುಕು ವೈರಲ್ ಆಗಿದೆ. ದುರ್ಗಾ ಪರಮೇಶ್ವರಿಯನ್ನೇ ಬಿಡದ ಕಾಂಗ್ರೆಸ್ ಪಕ್ಷಕ್ಕೆ ಮತದಾರ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಲಿದ್ದಾನೆಂದು ಸಾಮಾಜಿಕ ತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.












Click it and Unblock the Notifications