ಉಡುಪಿ; ಕ್ರಿಸ್ಮಸ್ ಸಂಭ್ರಮಕ್ಕೆ ತಣ್ಣೀರೆರಚಿದ ಕೋವಿಡ್
ಮೈಸೂರು, ಡಿಸೆಂಬರ್ 25: ದೀಪಾವಳಿ ಮತ್ತು ಈದ್ ಹಬ್ಬದ ರೀತಿಯಲ್ಲಿ ಈ ವರ್ಷದ ಕ್ರಿಸ್ಮಸ್ ಹಬ್ಬ ಕೋವಿಡ್ ಕಾರಣದಿಂದಾಗಿ ಕಳೆಗುಂದಿದೆ. ಜೊತೆಗೆ ಗುರುವಾರ ರಾತ್ರಿಯ ಕಿಸ್ಮಸ್ ಸಂಭ್ರಮಕ್ಕೆ ರಾಜ್ಯ ಸರ್ಕಾರದ ನೈಟ್ ಕರ್ಪ್ಯೂ ಗೊಂದಲ ತಣ್ಣೀರೆರಚಿತು.
ರಾತ್ರಿ ಕರ್ಪ್ಯೂ ಇದೆ, ಇಲ್ಲ ಎಂಬ ಸರ್ಕಾರದ ಗೊಂದಲದ ಹೇಳಿಕೆಯ ನಡುವೆಯೇ ಚರ್ಚ್ಗಳಲ್ಲಿ ಪೂಜೆ, ಸಾಮೂಹಿಕ ಪ್ರಾರ್ಥನೆ ನಡೆಯಿತು. ಆದರೆ, ಕ್ರೈಸ್ತ ಬಾಂಧವರ ಸಂಖ್ಯೆ ವಿರಳವಾಗಿತ್ತು.
ಕಲ್ಯಾಣಪುರದ ಮಿಲಾಗ್ರಿಸ್ ಕೆಥೆಡ್ರಲ್ ಚರ್ಚ್ನಲ್ಲಿ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೋ ಬಲಿಪೂಜೆ ಅರ್ಪಿಸಿದರು. ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಲೇ ಪೂಜೆಗಳನ್ನು ನಡೆಸಲಾಯಿತು.

ಯೇಸುಕ್ರಿಸ್ತರ ಜನನದ ಹಬ್ಬ ಕ್ರಿಸ್ಮಸ್ ಅಂಗವಾಗಿ ಚರ್ಚ್ಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದವು. ಅಲ್ಲಲ್ಲಿ ಗೋದಳಿಗಳ ಪ್ರತಿಕೃತಿ ಮೈಮನಗಳಿಗೆ ಪುಳಕ ನೀಡುತ್ತಿವೆ.
ಕರಾವಳಿಯಲ್ಲಿ ಕ್ರೈಸ್ತ ಸಮುದಾಯದ ಮಂದಿ ಅಧಿಕವಿರುವುದರಿಂದ ಕ್ರಿಸ್ಮಸ್ ಸಡಗರ ಜೋರಾಗಿರುತ್ತದೆ. ಆದರೆ, ಈ ವರ್ಷ ಕೋವಿಡ್ ಮಹಾಮಾರಿ ಹಬ್ಬದ ಸಂಭ್ರಮಕ್ಕೆ ತಣ್ಣೀರೆರಚಿದೆ.

ಕ್ರಿಸ್ಮಸ್ ಸಂದೇಶ : ಕ್ರಿಸ್ಮಸ್ ಶಾಂತಿ ಸಹಬಾಳ್ವೆಯ ಹಬ್ಬವಾಗಲಿ ಎಂದು ಉಡುಪಿ ಬಿಷಪ್ ಡಾ. ಜೆರಾಲ್ಡ್ ಲೋಬೋ ಸಂದೇಶ ನೀಡಿದ್ದಾರೆ. ಏಸುಕ್ರಿಸ್ತ ದನದ ಕೊಟ್ಟಿಗೆಯಲ್ಲಿ ಹುಟ್ಟಿದರೂ ಜಗತ್ತಿಗೆ ಭರವಸೆಯ ಬೆಳಕಾಗಿ ಬಂದರು.
ಅಸ್ವಸ್ಥರಿಗೆ ಆರೋಗ್ಯವಾಗಿ ಬಂದರು. ಪ್ರೀತಿ ನೀಡಿ, ಪ್ರೀತಿಸಲು ಬಂದರು. ನಾವೆಲ್ಲ ಏಸು ಕ್ರಿಸ್ತರ ಪ್ರೀತಿಯ ದಾರಿಯಲ್ಲಿ ಸಾಗೋಣ. ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು ಎಂದು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.












Click it and Unblock the Notifications