ಪೆಂಡಾಲ್ ಕಿತ್ತುಹಾಕಿದ ಗೊಂದಲ, ಉಡುಪಿ ನಗರಸಭೆಯಲ್ಲಿ ಬಿಜೆಪಿ ಗದ್ದಲ
ಉಡುಪಿ, ಆಗಸ್ಟ್ 31: ಮರಳುಗಾರಿಕೆ ಆರಂಭಿಸಲು ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ಬುಧವಾರ ಹಾಕಿದ್ದ ಪೆಂಡಾಲನ್ನು ಇಲ್ಲಿನ ನಗರಸಭೆ ತೆರವುಗೊಳಿಸಿತ್ತು. ಪೆಂಡಾಲ್ ತೆರವುಗೊಳಿಸಿದ ಪೌರಾಯುಕ್ತರು ಕ್ಷಮೆ ಯಾಚಿಸುವಂತೆ ಆಗ್ರಹಿಸಿ ಗುರುವಾರ ಬಿಜೆಪಿ ಸದ್ಯಸರು ನಗರಸಭೆ ಸಾಮಾನ್ಯ ಸಭೆಯಲ್ಲಿ ಗದ್ದಲ ಎಬ್ಬಿಸಿದರು.
ಸಭೆ ಆರಂಭವಾಗುತ್ತಿದ್ದಂತೆ ಸರ್ವರನ್ನು ಸ್ವಾಗತಿಸಿದ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಪ್ರಶ್ನೋತ್ತರ ಅವಧಿಯ ಮೊದಲು ನನಗೆ ಕೆಲವೊಂದು ಮಾಹಿತಿ ನೀಡಲು ಇದೆ. ಬಳಿಕ ಪ್ರಶ್ನೋತ್ತರ ನಡೆಸಲಾಗುವುದು ಎಂದು ಹೇಳಿದರು. ಆ ಕೂಡಲೇ ಪ್ರತಿಪಕ್ಷ ಬಿಜೆಪಿ ಸದಸ್ಯರು ಗದ್ದಲವನ್ನು ಆರಂಭಿಸಿದರು.

ಬಿಜೆಪಿ ಮರಳುಗಾರಿಕೆ ಆರಂಭಿಸಲು ಪ್ರತಿಭಟನೆಗಾಗಿ ಬುಧವಾರ ನಗರದ ಕ್ಲಾಕ್ ಟವರ್ ಬಳಿ ಹಾಕಲಾಗಿದ್ದ ಪೆಂಡಾಲನ್ನು ಜೆಸಿಬಿ ಮೂಲಕ ತೆರವುಗೊಳಿಸಿರುವುದರ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಪ್ರತಿಪಕ್ಷದ ಸದಸ್ಯ ಯಶ್ ಪಾಲ್ ಸುವರ್ಣ ಆಗ್ರಹಿಸಿದರು. ಅಲ್ಲದೆ ಪೆಂಡಾಲ್ ತೆಗೆಯಲು ಕಾರಣರಾದ ಆಯುಕ್ತರು ಈ ಕುರಿತು ಕ್ಷಮೆ ಕೇಳಬೇಕು ಎಂದರು.
ಈ ವೇಳೆ ಅಧ್ಯಕ್ಷರು ಹಾಗೂ ಬಿಜೆಪಿ ಸದಸ್ಯರ ಮಧ್ಯೆ ಮಾತಿನ ಜಟಾಪಟಿ ನಡೆದು, ಇಡೀ ಸಭೆಯಲ್ಲಿ ಕೋಲಾಹಲ ಸೃಷ್ಟಿಯಾಯಿತು. ಆಗ ವಿರೋಧ ಪಕ್ಷದ ಸದಸ್ಯ ಯಶ್ ಪಾಲ್ ಸುವರ್ಣ ಅಧ್ಯಕ್ಷರ ಮೈಕ್ ಕಿತ್ತುಕೊಂಡರು ಮತ್ತು ಪೌರಾಯುಕ್ತರ ಮಾಹಿತಿ ಪತ್ರ ಹಾಗೂ ಅಜೆಂಡಾವನ್ನು ಕಿತ್ತುಕೊಂಡರು.

ಅಭಿವೃದ್ಧಿಯ ಬಗ್ಗೆ ಚಿಂತನೆ ಇಲ್ಲದ ಬಿಜೆಪಿಯವರು ಸುಮ್ಮನೆ ಗದ್ದಲ ಎಬ್ಬಿಸುತ್ತಿದ್ದಾರೆ ಎಂದು ಅಧ್ಯಕ್ಷರು ಆರೋಪಿಸಿದರು. ಬಳಿಕ ಆಡಳಿತ ಪಕ್ಷದ ಸದಸ್ಯರ ಒತ್ತಾಯದಂತೆ ಅಧ್ಯಕ್ಷರು ಅಜೆಂಡಾವನ್ನು ಓದಿ, ಸಭೆಯನ್ನು ಮುಂದೂಡಿ ಹೊರನಡೆದರು. ಈ ವೇಳೆ ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗಿದರು.
ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ಸದಸ್ಯರು ಪೆಂಡಾಲ್ ಕಿತ್ತುಹಾಕಿದ ಬಗ್ಗೆ ಸ್ಪಷ್ಟನೆ ಕೇಳಿದರು. ಈ ವೇಳೆ ವಾಗ್ವಾದಗಳು ನಡೆದವು. ಈ ಕುರಿತು ಪೌರಾಯುಕ್ತರು ಗುರುವಾರ ಸಂಜೆಯ ಒಳಗೆ ಕ್ಷಮೆ ಕೇಳದಿದ್ದರೆ ಸೆ.2ರಂದು ನಗರಸಭೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಯಶ್ ಪಾಲ್ ಸುವರ್ಣ ಎಚ್ಚರಿಕೆ ನೀಡಿದರು.

ಇದೇ ವೇಳೆ ಕಮೀಷನರ್ ಮಂಜುನಾಥಯ್ಯ ಅವರ ಅಜೆಂಡಾ ಪ್ರತಿ ಹಾಗೂ ಇತರ ಕಡತಗಳನ್ನು ಕಸಿದುಕೊಂಡ ನಗರಸಭಾ ಸದಸ್ಯ ಮಹೇಶ್ ಠಾಕೂರ್ ಮತ್ತು ಯಶ್ ಪಾಲ್ ಸುವರ್ಣ ಕ್ಷಮೆ ಕೋರುವಂತೆ ಆಗ್ರಹಿಸಿದರು. ಈ ನಡುವೆ ಅಧ್ಯಕ್ಷೆ ಸ್ವತಃ ಅಜೆಂಡಾವನ್ನು ಓದಿಕೊಂಡು ಹೋಗಿ ಬಹುಮತದಲ್ಲಿ ಅಂಗೀಕರಿಸುವುದರೊಂದಿಗೆ ಸಭೆಯಿಂದ ಹೊರ ನಡೆದರು.












Click it and Unblock the Notifications