ಚೈತ್ರಾ ಆತ್ಮಹತ್ಯೆ ಪ್ರಕರಣ ಪೋಕ್ಸೊ ಕಾಯ್ದೆ ಅಡಿ ದಾಖಲು
ಉಡುಪಿ ಚೈತ್ರಾ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಮೂವರ ವಿರುದ್ಧ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.
ಉಡುಪಿ, ಅಕ್ಟೋಬರ್ 21: ಉಪ್ಪೂರು ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಚೈತ್ರಾ ಪ್ರಕರಣ ತಿರುವನ್ನು ಪಡೆದುಕೊಂಡಿದೆ. ಉಡುಪಿಯ ಪುತ್ತೂರು ಲಿಂಗೋಟಿಗುಡ್ಡೆ ಚಂದ್ರಶೇಖರ ಎಂಬವರ ಮಗಳು ಚೈತ್ರಾ ಸೆಪ್ಟೆಂಬರ್ 28ರಂದು ಸೇತುವೆಯಿಂದ ತುಂಬಿ ಹರಿಯುತ್ತಿದ್ದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಮೂವರ ವಿರುದ್ಧ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಅಂಬಲಪಾಡಿ ಮಾಂಡವಿ ಟವರ್ಸ್ ನಲ್ಲಿರುವ ನೆಟ್ ಐ ಎಂಬ ಕಂಪ್ಯೂಟರ್ ಸೆಂಟರ್ನಲ್ಲಿ ಚೈತ್ರಾ ಕೆಲಸ ಮಾಡುತ್ತಿದ್ದಳು. ಆದರ್ಶ ಎಂಬ ಯುವಕನನ್ನು ಆಕೆ ಪ್ರೀತಿಸುತ್ತಿದ್ದು, ಆತ ಮನೆಗೂ ಬಂದು ಹೋಗುತ್ತಿದ್ದ. ಮನೆಯವರು ಆಕೆಗೆ ಮದುವೆ ಮಾಡುವ ಇರಾದೆ ಕೂಡ ಹೊಂದಿದ್ದರು.[ಚೈತ್ರಾ ಸಾವು ಪ್ರಕರಣ: ಪ್ರಿಯಕರ, ಮತ್ತಿಬ್ಬರು ಯುವಕರ ಮೇಲೆ ದೂರು]
ಆದರೆ ಸೆಪ್ಟೆಂಬರ್ 28ರಂದು ಪವನ್ ಮತ್ತು ಸಾಗರ್ ಎಂಬುವರು ಆಕೆಯನ್ನು ಎಲ್ಲೋ ಕರೆದುಕೊಂಡು ಹೋಗಿ ಮತ್ತೆ ಸಂಜೆ ತಂದು ಬಿಟ್ಟಿದ್ದರು. ಆದರ್ಶ, ಪವನ್ ಮತ್ತು ಸಾಗರ್ ಸೇರಿ ಆಕೆ ಮೇಲೆ ದುಷ್ಕೃತ್ಯ ಎಸಗಿರಬೇಕು. ಈ ಕಾರಣದಿಂದ ಆಕೆ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಚೈತ್ರಾ ತಂದೆ ಚಂದ್ರಶೇಖರ್ ದೂರು ನೀಡಿದ್ದರು.
ಆತ್ಮಹತ್ಯೆ ಮಾಡಿಕೊಳ್ಳುವಾಗ ದಿನಕ್ಕೆ ಆಕೆಗೆ 18 ವರ್ಷ ತುಂಬಿರಲಿಲ್ಲ. ಆದ್ದರಿಂದ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಎಸ್ ಪಿಗೆ ಮನವಿ ಮಾಡಲಾಗಿತ್ತು. ಅದಕ್ಕೆ ದಾಖಲೆ ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚಿಸಿದ್ದರು.[ಮೊಬೈಲಲ್ಲಿ ಮಾತಾಡುತ್ತ, ಅಳುತ್ತ ನದಿಗೆ ಜಿಗಿದ ಯುವತಿ]
ಚೈತ್ರಾಳ ತಾಯಿ ಜ್ಯೋತಿ ಅವರು ಮಗಳ ಜನನ ಪ್ರಮಾಣ ಪತ್ರ ಸಲ್ಲಿಸಿದ್ದು, ಅದರ ಪ್ರಕಾರ ಆಕೆಗೆ 17ವರ್ಷ 10 ತಿಂಗಳಾಗಿತ್ತು. ಇದೀಗ ಫೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆಗೆ ಎರಡು ತಂಡ ರಚಿಸಲಾಗಿದ್ದು, ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಎಸ್ ಪಿ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.