ಬೈಂದೂರು ಆತ್ಮಹತ್ಯೆ ಪ್ರಕರಣ: ತಂದೆಯಿಂದಲೇ ವಿಷಪ್ರಾಶನ
ಕುಂದಾಪುರ, ಅಕ್ಟೋಬರ್, 20: ಅ.17ರಂದು ನಡೆದ ಒಂದೇ ಕುಟುಂಬದ ಆತ್ಮಹತ್ಯೆ ಪ್ರಕರಣದ ಹಿಂದೆ, ಮೃತಪಟ್ಟ ಮಕ್ಕಳ ತಂದೆಯೇ ಮಕ್ಕಳು ಮತ್ತು ಪತ್ನಿಗೆ ವಿಷಪ್ರಾಶನ ಮಾಡಿಸಿದ್ದ ಎಂದು ತಿಳಿದು ಬಂದಿದೆ.
ಅ.17ರಂದು ತಾಲ್ಲೂಕಿನ ಬೈಂದೂರು ಸಮೀಪದ ಗಂಗನಾಡಿನಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಆದರೆ ಘಟನೆಯಲ್ಲಿ ಮಕ್ಕಳಿಬ್ಬರೂ ಮೃತಪಟ್ಟು ಮಹಾಲಕ್ಷ್ಮಿ ಮತ್ತು ಶಂಕರನಾರಾಯಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಸ್ತುತ ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದರು. [ವಿಷ ಸೇವಿಸಿದ್ದು ಇಡೀ ಕುಟುಂಬ, ಹೋಗಿದ್ದು ಮಕ್ಕಳಿಬ್ಬರ ಪ್ರಾಣ]
ಶಂಕರನಾರಾಯಣ(45) ಹಾಗೂ ಮಹಾಲಕ್ಷ್ಮೀ(39) ದಂಪತಿ ತಮ್ಮ ಮಕ್ಕಳಾದ ಅಶ್ವಿನ್ ಕುಮಾರ್ (16), ಐಶ್ವರ್ಯಾ ಹೆಬ್ಬಾರ್(14) ಅವರೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಘಟನೆಯಲ್ಲಿ ಮೃತ ಪಟ್ಟ ಮಕ್ಕಳ ತಂದೆ ಶಂಕರನಾರಯಣ ಪತ್ನಿ ಮತ್ತು ಮಕ್ಕಳಿಬ್ಬರ ಊಟದಲ್ಲಿ ವಿಷ ಬೆರೆಸಿ. ಬಳಿಕ ತಾನೂ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಂಕರ್ ನಾರಯಣ ವಿರುದ್ಧ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಪೊಲೀಸ್ ಸುಪರ್ದಿಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಶಂಕರನಾರಾಯಣನಿಗೆ ಕೈಹಿಡಿದ ಪತ್ನಿಗಿಂತ ಅನ್ಯ ಮಹಿಳೆಯ ಮೇಲೆ ಪ್ರೇಮಾಂಕುರವಾಗಿ ಅನೈತಿಕ ಸಂಬಂಧ ಇರಿಸಿಕೊಂಡಿದ್ದ ಎಂದು ತಿಳಿದು ಬಂದಿದೆ. ಈ ಕಾರಣಕ್ಕಾಗಿಯೇ ತನ್ನ ಮಕ್ಕಳನ್ನು ಕೊಂದಿದ್ದಾನೆ ಎಂದು ತಿಳಿದು ಬಂದಿದೆ.
ಪ್ರಕರಣದ ದಾರಿ ತಪ್ಪಿಸುವ ಉದ್ದೇಶದಿಂದ ಡೆತ್ ನೋಟ್ ಬರೆದಿಟ್ಟು, ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ತಿಳಿದು ಬಂದಿದೆ.
ಮೃತಪಟ್ಟ ಮಕ್ಕಳ ಶವ ಪರೀಕ್ಷೆ ಮಂಗಳವಾರ ನಡೆಯಿತು. ಬಳಿಕ ಗಂಗನಾಡಿಗೆ ಒಯ್ದು ಅವರ ಮನೆಯ ಸಮೀಪ ಜೋಡಿ ಚಿತೆ ನಿರ್ಮಿಸಿ ಅಂತಿಮ ಸಂಸ್ಕಾರ ನೆರವೇರಿಸಿದರು.