ಭಾಸ್ಕರ್ ಶೆಟ್ಟಿ ಕೊಲೆ, ಡಿಎನ್ಎ ಪರೀಕ್ಷೆಗೆ ಪೊಲೀಸರ ಮನವಿ
ಉಡುಪಿ, ಆಗಸ್ಟ್ 18 : ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಡಿಎನ್ಎ ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಭಾಸ್ಕರ್ ಶೆಟ್ಟಿ ತಾಯಿ ಮತ್ತು ಸಹೋದರನ ಡಿಎನ್ಎ ಪರೀಕ್ಷೆಗೆ ಅವಕಾಶ ನೀಡುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಡಿಎನ್ಎ ಪರೀಕ್ಷೆಯಿಂದ ಮಹತ್ವದ ಸಾಕ್ಷಿಗಳು ಲಭ್ಯವಾಗಲಿವೆ ಎಂಬುದು ಪೊಲೀಸರ ವಾದ. ಆದ್ದರಿಂದ, ಗುಲಾಬಿ ಶೆಟ್ಟಿ ಮತ್ತು ಭಾಸ್ಕರ ಶೆಟ್ಟಿ ಅವರ ಸಹೋದರನ ಡಿಎನ್ಎ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ.[ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ ಸಿಐಡಿ ತನಿಖೆಗೆ]
ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಭಾಸ್ಕರ್ ಶೆಟ್ಟಿ ಅವರ ಮೂಳೆಗಳನ್ನು ಪಳ್ಳಿ ಸಮೀಪದ ಕಲ್ಕಾರು ನದಿಯಲ್ಲಿ ವಶಪಡಿಸಿಕೊಂಡಿದ್ದಾರೆ. ಈ ಮೂಳೆಗಳ ಜೊತೆ ಗುಲಾಬಿ ಶೆಟ್ಟಿ ಮತ್ತು ಅವರ ಪುತ್ರನ ಡಿಎನ್ಎ ಹೊಂದಾಣಿಕೆಯಾಗುತ್ತದೆಯೇ? ಎಂದು ಪರೀಕ್ಷೆ ನಡೆಸಬೇಕಾಗಿದೆ.[ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಹೊಸ ತಿರುವು]
ನದಿಯಲ್ಲಿ ಸಿಕ್ಕ ಮೂಳೆಗಳನ್ನು ಪೊಲೀಸರು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, 15 ದಿನಗಳಲ್ಲಿ ವರದಿ ಬರುವ ನಿರೀಕ್ಷೆ ಇದೆ. ಕೊಲೆ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದ್ದು, ಅಧಿಕೃತವಾಗಿ ಸಿಐಡಿ ಇನ್ನೂ ತನಿಖೆ ಆರಂಭಿಸಿಲ್ಲ.[ಭಾಸ್ಕರ್ ಶೆಟ್ಟಿ ಹತ್ಯೆ, 2 ಕೋಟಿ ಹಣ ವರ್ಗಾವಣೆ ಬಗ್ಗೆ ತನಿಖೆ]