ಉದ್ಯಮಿ ಭಾಸ್ಕರ್ ಶೆಟ್ಟಿ ಹತ್ಯೆ : ಸಿಕ್ಕಿದ್ದು ಮಾನವನ ಮೂಳೆ
ಉಡುಪಿ, ಸೆಪ್ಟೆಂಬರ್ 17 : ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯಲ್ಲಿ ಪೊಲೀಸರು ಸಂಗ್ರಹಿಸಿದ ಮೂಳೆಗಳು ಮಾನವ ಮೂಳೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಧೃಢಪಟ್ಟಿದೆ. ಆದರೆ ಅದು ಭಾಸ್ಕರ್ ಶೆಟ್ಟಿಯವರ ಮೂಳೆ ಹೌದೇ ಅಲ್ಲವೇ ಎಂದು ತಿಳಿಯಬೇಕಾದರೆ ಮತ್ತೆ ಮೂರು ದಿನಗಳು ಬೇಕಾಗುತ್ತದೆ.
ಜು.28ರಂದು ಇಂದ್ರಾಳಿಯ ತನ್ನ ಮನೆಯಿಂದ ಭಾಸ್ಕರ್ ಶೆಟ್ಟಿ ನಾಪತ್ತೆಯಾಗಿದ್ದು, ಒಂದು ವಾರದ ಬಳಿಕ ಪತ್ನಿ ರಾಜೇಶ್ವರಿ ಶೆಟ್ಟಿ, ಮಗ ನವನೀತ ಶೆಟ್ಟಿ, ಜ್ಯೋತಿಷಿ ನಿರಂಜನ ಭಟ್ ಸೇರಿ ಕೊಲೆ ಮಾಡಿ ಸುಟ್ಟು ಹಾಕಿರುವುದು ಬಹಿರಂಗಗೊಂಡಿತ್ತು.
ಭಾಸ್ಕರ ಶೆಟ್ಟಿಯವರನ್ನು ತಾವೇ ಕೊಲೆ ಮಾಡಿರುವುದಾಗಿ ಪತ್ನಿ ಮತ್ತು ಮಗ ತಪ್ಪೊಪ್ಪಿಕೊಂಡಿದ್ದರು. ಅಲ್ಲದೇ ಜ್ಯೋತಿಷಿ ನಿರಂಜನ ಭಟ್ಟ ಎಂಬಾತನ ಸಹಾಯದಿಂದ ಹೋಮಕುಂಡದ ಬಳಿ ಭಾಸ್ಕರ ಶೆಟ್ಟಿಯವರ ಶವವನ್ನು ಸುಟ್ಟುಹಾಕಿದ್ದೇವೆ ಎಂದು ಹೇಳಿದ್ದರು. ನಂತರ ಭಾಸ್ಕರ ಶೆಟ್ಟಿ ಅವರ ಮೂಳೆಗಳನ್ನು ನದಿಗೆ ಎಸೆದಿದ್ದರು. [ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣ, ನಿರಂಜನ್ ಭಟ್ ಸಿಐಡಿ ವಶಕ್ಕೆ]
ಕಲ್ಕಾರು ಹೊಳೆ ಬದಿಯಲ್ಲಿ ಸಿಕ್ಕಿರುವ ಮೂಳೆ ನಾಯಿ ಮೂಳೆ ಇರಬಹುದು ಎಂಬ ವದಂತಿ ಹಬ್ಬಿತ್ತು. ಆದರೆ ಪ್ರಕರಣದ ಸೂಕ್ಷ್ಮತೆ ಗಮನಿಸಿದ ಪೊಲೀಸರು ಸಾಕ್ಷ್ಯ ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಇದೀಗ ಮೂಳೆ ಮನುಷ್ಯನದ್ದು ಎಂಬುದು ದೃಢಪಟ್ಟಿದೆ.
ಇನ್ನು ಈ ಮೂಳೆ ಡಿಎನ್ಎ ಪರೀಕ್ಷೆಗೆ ಒಳಪಡಲಿದ್ದು, ಅದು ಭಾಸ್ಕರ್ ಶೆಟ್ಟಿಯವರ ಎಲುಬು ಹೌದೇ ಅಲ್ಲವೇ ಎಂಬುದು ತಿಳಿಯಬೇಕಿದೆ. ಈಗಾಗಲೇ ಡಿಎನ್ಎ ಪರೀಕ್ಷೆಗಾಗಿ ಭಾಸ್ಕರ್ ಶೆಟ್ಟಿಯವರ ತಾಯಿ ಗುಲಾಬಿ ಶೆಡ್ತಿ ಮತ್ತು ಸಹೋದರ ಸುರೇಶ ಶೆಟ್ಟಿಯವರ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ. ಮೂಳೆಗಳನ್ನು ಪರೀಕ್ಷೆಗೆ ಒಳಪಡಿಸಿದ ಬಳಿಕವಷ್ಟೇ ಫಲಿತಾಂಶ ಹೊರಬರಲಿದೆ. [ಭಾಸ್ಕರ್ ಶೆಟ್ಟಿ ಕೊಲೆಯಲ್ಲಿ ಸುಪಾರಿ ಹಂತಕರ ಕೈವಾಡ?]