ಬಂಟಕಲ್ ಕಾಲೇಜಿನ ವಿದ್ಯಾರ್ಥಿಗೆ 'ಉತ್ತಮ ವಿದ್ಯಾರ್ಥಿ ಪ್ರಶಸ್ತಿ'
ಉಡುಪಿ, ಸೆಪ್ಟೆಂಬರ್ 11: ಉಡುಪಿಯ 7ನೇ ಸೆಮಿಸ್ಟರ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಅಭಿನವ್ ಗೆ ಐಎಸ್ಟಿಇ ಕರ್ನಾಟಕ ರಾಜ್ಯ ವಿಭಾಗದ 2017 ನೇ ಸಾಲಿನ 'ಉತ್ತಮ ವಿದ್ಯಾರ್ಥಿ' ಪ್ರಶಸ್ತಿ ದೊರೆತಿದೆ. ಇವರು ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್ಮೆಂಟ್ - ಬಂಟಕಲ್ ನ ವಿದ್ಯಾರ್ಥಿಯಾಗಿದ್ದಾರೆ.
ದಾವಣಗೆರೆಯ ಜಿ.ಎಮ್. ತಾಂತ್ರಿಕ ಶಿಕ್ಷಣ ಅಕಾಡೆಮಿಯಲ್ಲಿ ಸೆಪ್ಟೆಂಬರ್ 08 ರಂದು ಆಯೋಜಿಸಲಾಗಿದ್ದ 14ನೇ ರಾಜ್ಯ ಮಟ್ಟದ ವಿದ್ಯಾರ್ಥಿ ಸಮಾವೇಶದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಲಾಯಿತು.
ಸತತವಾಗಿ ಮೂರನೇ ಬಾರಿಗೆ ಈ ಪ್ರಶಸ್ತಿಯು ತಮ್ಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗೆ ದೊರಕಿರುವುದಕ್ಕೆ ಸಂಸ್ಥಾಪಕರು, ಅಧ್ಯಕ್ಷರೂ ಆದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಕಾರ್ಯದರ್ಶಿಯವರಾದ ಶ್ರೀ ರತ್ನಕುಮಾರ್ ಮತ್ತು ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ರವರು ಹರ್ಷ ವ್ಯಕ್ತಪಡಿಸಿದ್ದಾರೆ.
"ಮೆಕ್ಯಾನಿಕಲ್ ವಿಭಾಗದಿಂದ ನಾನು ಆಯ್ಕೆ ಆಗುತ್ತೇನೆ ಎಂದು ಕನಸು ಮನಸ್ಸಿನಲ್ಲೂ ಕೂಡ ನಾನು ಅಂದುಕೊಂಡಿರಲಿಲ್ಲ. ಉತ್ತಮ ವಿದ್ಯಾರ್ಥಿ ಪ್ರಶಸ್ತಿಗೆ ನಾನು ಆಯ್ಕೆಯಾಗಿದ್ದೇನೆ ಎಂದು ತಿಳಿದು ಬಂದಾಗ ನನಗೆ ಎಲ್ಲಿಲ್ಲದ ಸಂತೋಷ ಉಂಟಾಯಿತು. ನನ್ನ ಶಿಕ್ಷಣದ ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ಸಹಕರಿಸಿ ಮಾರ್ಗದರ್ಶನ ನೀಡಿದ ಎಲ್ಲಾ ಶಿಕ್ಷಕರಿಗೆ ನಾನು ತುಂಬು ಹೃದಯದಿಂದ ಧನ್ಯವಾದಗಳನ್ನು ಸಲ್ಲಿಸುತ್ತೇನೆ," ಎಂದು ತಮ್ಮ ಸಂತಸವನ್ನು ಅಭಿನವ್ 'ಒನ್ಇಂಡಿಯಾ ಕನ್ನಡ'ದ ಜತೆ ಹಂಚಿಕೊಂಡಿದ್ದಾರೆ.