ಭೂಗತ ಪಾತಕಿ ಬನ್ನಂಜೆ ರಾಜನಿಗೆ ಹಿಂಡಲಗಾ ಜೈಲೇ ಗತಿ
ಉಡುಪಿ, ಸೆ. 15: ಭೂಗತ ಪಾತಕಿ ಬನ್ನಂಜೆ ರಾಜನಿಗೆ ಎರಡು ಕೇಸುಗಳಲ್ಲೂ ಜಾಮೀನು ಸಿಗದ ಕಾರಣ ಇನ್ನೊಂದು ತಿಂಗಳು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಕಾಲ ಕಳೆಯುವುದು ಅನಿವಾರ್ಯವಾಗಿದೆ. ಉಡುಪಿ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಸಿಜೆಎಂ ನ್ಯಾಯಾಲಯವು ರಾಜನಿಗೆ ಒಂದು ತಿಂಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಉಡುಪಿಯ ಸಂತೆಕಟ್ಟೆ ಲಕ್ಷ್ಮೀನಗರದ ಉದ್ಯಮಿ ಆನಂದ ಶೆಟ್ಟಿ ದರೋಡೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬನ್ನಂಜೆ ರಾಜನ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿ ಸೋಮವಾರಕ್ಕೆ ಮುಕ್ತಾಯವಾಗಿತು. ಅವಧಿ ಮುಗಿದ ಹಿನ್ನೆಲೆಯಲ್ಲಿ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. [ರಾಜೇಂದ್ರ ಅಲಿಯಾಸ್ ಬನ್ನಂಜೆ ರಾಜಾ ಬಂಧನ]
2011ರಲ್ಲಿ ಉಡುಪಿಯ ಐರೋಡಿ ಜ್ಯುವೆಲ್ಲರಿ ಶೂಟೌಟ್ ಪ್ರಕರಣ ಮತ್ತು 2013ರಲ್ಲಿ ಆನಂದ ಶೆಟ್ಟಿ ದರೋಡೆ ಯತ್ನ ಪ್ರಕರಣಗಳಲ್ಲಿ ಬನ್ನಂಜೆ ರಾಜನಿಗೆ ಅಕ್ಟೋಬರ್ 14ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾ. ನಾಗಜ್ಯೋತಿ ಕೆ.ಎಸ್. ಆದೇಶ ನೀಡಿದರು.

ಬನ್ನಂಜೆ ರಾಜನನ್ನು ಅ.14ರಂದು ಮತ್ತೆ ಉಡುಪಿ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಾಗಿದೆ. ಪ್ರಕರಣದ ತನಿಖಾಧಿಕಾರಿಯಾಗಿರುವ ಉಡುಪಿ ನಗರ ಠಾಣಾಧಿಕಾರಿ ಗಿರೀಶ್ಕುಮಾರ್, ಹಿರಿಯ ಸಹಾಯಕ ಅಭಿಯೋಜಕಿ ಶಾಂತಿಬಾಯಿ ಹಾಜರಿದ್ದರು. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ರಾಜನನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಮತ್ತೊಮ್ಮೆ ಬೆಳಗಾವಿಯ ಹಿಂಡಲಗಾ ಜೈಲಿಗೆ ಕರೆದೊಯ್ಯಲಾಗಿದೆ.
ಬನ್ನಂಜೆ ರಾಜಾ ಯಾರು? : ಉಡುಪಿ ಜಿಲ್ಲೆಯ ಬನ್ನಂಜೆ ಗ್ರಾಮದ ಸುಂದರ್ ಶೆಟ್ಟಿಗಾರ್ ಮತ್ತು ವಿಲಾಸಿನಿ ದಂಪತಿಯ ಪುತ್ರನಾದ ಬನ್ನಂಜೆ ರಾಜಾ ಬಿಎ ಪದವೀಧರ. 1990ರಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪಿಯುಸಿ ಓದುವಾಗ ತನ್ನ ವಿರೋಧಿ ಬಣದ ಸಹಪಾಠಿಯನ್ನು ಮೊದಲ ಮಹಡಿಯಿಂದ ಕೆಳಗೆ ತಳ್ಳುವ ಮೂಲಕ ಅಪರಾಧ ಕೃತ್ಯಕ್ಕೆ ರಾಜಾ ಕಾಲಿಟ್ಟಿದ್ದ.
ಮೊದಲಿಗೆ ಛೋಟಾರಾಜನ್ ಗ್ಯಾಂಗಿನಲ್ಲಿ ಗುರುತಿಸಿಕೊಂಡಿದ್ದ. ಮುಂಬೈನ ಭೂಗತ ಪಾತಕಿಗಳಿಂದ ಪಳಗಿದ ಈತ ಈಗ ಅಂತಾರಾಷ್ಟ್ರೀಯ ಮಟ್ಟದ ಕುಖ್ಯಾತ ಡಾನ್. ಬನ್ನಂಜೆ ರಾಜನ ವಿರುದ್ಧ ಕೊಲೆ, ಸುಲಿಗೆ, ಬೆದರಿಕೆ ಸೇರಿದಂತೆ ರಾಜ್ಯದಲ್ಲಿ 44ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.
ಬೆಂಗಳೂರು ಮತ್ತು ಮಂಗಳೂರು ನಗರದಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿದೆ. ಮುಂಬೈ, ನವದೆಹಲಿಯಲ್ಲೂ ಉದ್ಯಮಿಗಳು, ಬಿಲ್ಡರ್ಗಳು ಹಾಗೂ ಚಿತ್ರರಂಗದವರನ್ನು ಬೆದರಿಸಿ ಹಣ ವಸೂಲಿ ಮಾಡಿರುವ ಆರೋಪ ಬನ್ನಂಜೆ ರಾಜಾನ ಮೇಲೆ ಇದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications