ಉಡುಪಿ ಮಠದಲ್ಲಿ ಪಲಿಮಾರು ಶ್ರೀಗಳ ನೇತೃತ್ವದಲ್ಲಿ ಬಲೀಂದ್ರ ಪೂಜೆ
ಉಡುಪಿ, ಅಕ್ಟೋಬರ್ 28: ನಾಡಿನಾದ್ಯಂತ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿಯ ಪ್ರಯುಕ್ತ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಯತಿಗಳಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಪುರೋಹಿತರಾದ ಮಧುಸೂದನ ಆಚಾರ್ಯರು "ಬಲೀಂದ್ರ ಪೂಜೆ"ಯನ್ನು ನಡೆಸಿದರು.
ದೀಪಾವಳಿಯಲ್ಲಿ ಚಾಡಿಕೋರನಿಗೆ ಬೈಗುಳದ ಸೇವೆ, ಜೊತೆಗೆ ಸಗಣಿಯಲ್ಲಿ ಮಿಂದೇಳುವ ಜನ!
ಬಳಿಕ ಪಂಚ ದೀಪ ಪ್ರಜ್ವಲನೆಯೊಂದಿಗೆ ವಾದ್ಯ ಮೇಳ ಸಹಿತ ಕೃಷ್ಣ ಮಠದ ಎಲ್ಲಾ ಭಾಗಗಳಿಗೂ ಮತ್ತು ಪರ್ಯಾಯ ಪಲಿಮಾರು ಮಠಕ್ಕೂ ದೀಪವನ್ನು ಪ್ರದರ್ಶಿಸಿದರು. ಒಳ ಕೊಟ್ಟಾರದಲ್ಲಿ ದೀಪಗಳನ್ನು ಇಡಲಾಯಿತು.
ಇನ್ನು ಪೇಜಾವರ ಅಧೋಕ್ಷಜ ಮಠಾಧೀಶ ವಿಶ್ವೇಶತೀರ್ಥ ಶ್ರೀಗಳು ಬೆಂಗಳೂರಿನಲ್ಲಿ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. ನೆನ್ನೆ ಎಣ್ಣೆಶಾಸ್ತ್ರ ಮುಗಿಸಿದ್ದ ಸ್ವಾಮೀಜಿ, ಇಂದು ಗೋಪೂಜೆಯನ್ನು ನೆರವೇರಿಸಿದ್ದಾರೆ. ಕರಾವಳಿ ಭಾಗದಲ್ಲಿ ದೀಪಾವಳಿ ಸಂದರ್ಭ ನಡೆಯುವ ಗೋವು ಪೂಜೆಗೆ ವಿಶೇಷ ಮಹತ್ವವಿದೆ. ಹೀಗಾಗಿ ರಾಜಧಾನಿಯ ವಿದ್ಯಾಪೀಠದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿದ ಹಿರಿಯ ಯತಿಗಳು ಹತ್ತಾರು ಹಸುಗಳಿಗೆ ಆಹಾರ, ಹಣ್ಣು ಹಂಪಲುಗಳನ್ನು ನೀಡಿದ್ದಾರೆ. ಇತ್ತ ಕೃಷ್ಣಮಠದಲ್ಲಿ ಪರ್ಯಾಯ ಪಲಿಮಾರು ಶ್ರೀಗಳ ನೇತೃತ್ವದಲ್ಲಿ ಬಲೀಂದ್ರ ಪೂಜೆಯೂ ಸಂಪನ್ನಗೊಂಡಿತು. ರಜೆಯ ಕಾರಣ ಮತ್ತು ನಿರಂತರವಾಗಿ ಸುರಿದ ಮಳೆ ಬಿಡುವು ನೀಡಿದ ಕಾರಣದಿಂದ ಶ್ರೀಕೃಷ್ಣ ಮಠಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ.