ಕೃಷ್ಣಾಪುರ ಮಠ ಪರ್ಯಾಯದ ಪೂರ್ವಭಾವಿ ಬಾಳೆ ಮುಹೂರ್ತ
ಉಡುಪಿ, ನವೆಂಬರ್ 30: ಒಂದು ವರ್ಷದ ಬಳಿಕ, ಅಂದರೆ 2022 ಜನವರಿಯಲ್ಲಿ ನಡೆಯಲಿರುವ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಸೋಮವಾರ ಮಠದ ಆವರಣದಲ್ಲಿ ಕೃಷ್ಣಾಪುರ ಮಠಾಧೀಶರ ನೇತೃತ್ವದಲ್ಲಿ ಬಾಳೆ ಮುಹೂರ್ತ ಸಂಪನ್ನಗೊಂಡಿತು.
ಶ್ರೀ ಕೃಷ್ಣಮಠದಲ್ಲಿ ಪರ್ಯಾಯ ಶ್ರೀಗಳಿಂದ ಭಕ್ತರಿಗೆ ತಪ್ತಮುದ್ರಾಧಾರಣೆ
ಬೆಳಿಗ್ಗೆ ರಥಬೀದಿಯಲ್ಲಿರುವ ಕೃಷ್ಣಾಪುರ ಮಠದಲ್ಲಿ ಬಾಳೆ ಮುಹೂರ್ತ ನಡೆಯಿತು. ಕೃಷ್ಣಾಪುರ ಮಠಾಧೀಶರು ಬಾಳೆ ಗಿಡಕ್ಕೆ ಪೂಜೆ ಸಲ್ಲಿಸಿ ನೆಡುವ ಮೂಲಕ ಮುಹೂರ್ತ ನಡೆಸಿದರು. ಇದಕ್ಕೂ ಮುನ್ನ ಬಾಳೆ ಗಿಡದೊಂದಿಗೆ ರಥಬೀದಿಯಲ್ಲಿ ಪ್ರದಕ್ಷಿಣೆ ಹಾಕಲಾಯಿತು. ಪರ್ಯಾಯಕ್ಕೆ ಮುನ್ನ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತ ಹಾಗೂ ಅಂತಿಮವಾಗಿ ಭತ್ತ ಮುಹೂರ್ತ ನಡೆಸುವುದು ಸಂಪ್ರದಾಯ. ಕೃಷ್ಣಮಠದಲ್ಲಿ ನಿತ್ಯ ಅನ್ನದಾಸೋಹ ನಡೆಯುತ್ತದೆ. ಹೀಗಾಗಿ ಅನ್ನಬ್ರಹ್ಮನ ಸೇವೆ ಮಾಡಲು ಪರ್ಯಾಯದ ಅವಧಿಯಲ್ಲಿ ನಿರ್ವಿಘ್ನವಾಗಿ ಭಕ್ತರಿಗೆ ಅನ್ನದಾಸೋಹ ಮಾಡಲು ಈ ಮುಹೂರ್ತಗಳನ್ನು ನಡೆಸಲಾಗುತ್ತದೆ.
ಸದ್ಯ ಅದಮಾರು ಮಠದ ಪರ್ಯಾಯ ನಡೆಯುತ್ತಿದೆ. ಅದಮಾರು ಪರ್ಯಾಯದ ಅವಧಿ ಮುಗಿಯುವವರೆಗೂ ಹಂತಹಂತವಾಗಿ ಮುಹೂರ್ತದ ವಿಧಿವಿಧಾನಗಳು ನಡೆಯಲಿವೆ. 2022 ಜನವರಿ ತಿಂಗಳಲ್ಲಿ ಅದಮಾರು ಶ್ರೀಗಳು ಕೃಷ್ಣಪೂಜಾ ಕೈಂಕರ್ಯವನ್ನು ಕೃಷ್ಣಾಪುರ ಶ್ರೀಗಳಿಗೆ ಹಸ್ತಾಂತರ ಮಾಡಲಿದ್ದಾರೆ.