ಬೈಂದೂರು ತಾಲೂಕು ಘೋಷಣೆ, ಸಿಹಿ ಹಂಚಿ ಸಂಭ್ರಮಾಚರಣೆ
ಬೈಂದೂರು, ಮಾರ್ಚ್. 15 : ಬೈಂದೂರು ತಾಲೂಕು ರಚನೆ ಆಗಬೇಕು ಎಂಬ ನಾಲ್ಕು ದಶಕಗಳ ಕೂಗಿಗೆ ಸರಕಾರ ಸ್ಪಂದಿಸಿದ್ದು, ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಬೈಂದೂರು ಸೇರಿದಂತೆ ಉಡುಪಿ ಜಿಲ್ಲೆಯ ಬ್ರಹ್ಮಾವರ, ಕಾಪು ತಾಲೂಕು ಎಂದು ಘೋಷಣೆ ಮಾಡಿದೆ.
ಇದರಿಂದ ಬೈಂದೂರಿನ ನಾಗರಿಕರು ಪಟಾಕಿ ಸಿಡಿಸಿ, ಸಿಹಿ ಹಂಚಿಕೊಂಡು ಸಂಭ್ರಮಿಸಿದರು. ಬೈಂದೂರು ತಾಲುಕಾಗಬೇಕೆಂದು ಈ ಭಾಗದ ವಿವಿಧ ಸಂಘಟನೆಗಳು ನಿರಂತರವಾಗಿ ಹೋರಾಟಗಳನ್ನು ಸಂಘಟಿಸಿ ಜನಪ್ರತಿನಿಧಿಗಳ ಗಮನ ಸೆಳೆದಿದ್ದರು.[21 ಜಿಲ್ಲೆಗಳಲ್ಲಿ 43 ಹೊಸ ತಾಲೂಕುಗಳ ರಚನೆ]

ಹಿಂದಿನ ಬಿಜೆಪಿ ಸರಕಾರ ಕೂಡಾ ಬಜೆಟ್ ನಲ್ಲಿ ತಾಲೂಕು ಘೋಷಣೆ ಮಾಡಿತ್ತಾದರೂ ಬಳಿಕ ಅದು ರದ್ದಾಗಿತ್ತು. ಆದರೆ, ಈ ಬಾರಿ ಸಿದ್ದರಾಮಯ್ಯ ಅವರ ಬಜೆಟ್ ನಲ್ಲಿ ತಾಲೂಕು ರಚನೆಗೆ ಹಸಿರು ನಿಶಾನೆ ದೊರೆತಿದೆ.
ಬೈಂದೂರು ಕ್ಷೇತ್ರದ ಶಾಸಕರಾದ ಕೆ. ಗೋಪಾಲ ಪೂಜಾರಿ ಅವರ ಶ್ರಮ ಇದರ ಹಿಂದೆ ದೊಡ್ಡ ಮಟ್ಟದಲ್ಲಿಯೇ ಇದೆ ಎಂಬುದನ್ನು ಮರೆಯುವಂತಿಲ್ಲ.
ಬೈಂದೂರು ತಾಲೂಕು ಹೋರಾಟ ಸಮಿತಿಯ ಪ್ರಮುಖರಾದ ಜಗನ್ನಾಥ ಶೆಟ್ಟಿ, ಎಸ್. ರಾಜು ಪೂಜಾರಿ , ವೆಂಕಟೇಶ ಕಿಣಿ, ಮದನ್ ಕುಮಾರ್, ನಾಗರಾಜ ಗಾಣಿಗ, ವಿಜಯ ಶೆಟ್ಟಿ ಸೇರಿದಂತೆ ಹಲವು ಪ್ರಮುಖರು ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications