ಅಯೋಧ್ಯೆ ರಾಮ ಮಂದಿರ ಭೂಮಿಪೂಜೆ: ಧಾರ್ಮಿಕ ಶಕ್ತಿ ಕೇಂದ್ರವಾಗಿದ್ದ ಉಡುಪಿ, ಪೇಜಾವರ ಶ್ರೀ
ವಾದಿರಾಜ ಗುರುಗಳು. ತಮ್ಮ ಪರ್ಯಾಯದ ಅವಧಿ ಮುಗಿದ ನಂತರ, ದೇಶ ಸಂಚಾರಕ್ಕೆ ಹೋಗಿ, ಅಯೋಧ್ಯೆಯಲ್ಲಿ ಉತ್ಖನನ ನಡೆಸಿ, ಹನುಮ ಮತ್ತು ಗರುಡನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುತ್ತಾರೆ ಎಂದು ನಿವೃತ್ತ ಪ್ರಾಧ್ಯಾಪಕಾರದ ಡಾ.ನಿಪ್ಪಾಣಿ ಬೆಟ್ಟು ತಮ್ಮ ಸಂಶೋಧನೆಯಲ್ಲಿ ಉಲ್ಲೇಖಿಸುತ್ತಾರೆ. ಇದು, ಶತಶತಮಾನಗಳ ಹಿಂದೆಯೇ, ಉಡುಪಿ ಮತ್ತು ಅಯೋಧ್ಯೆಗಿದ್ದ ನಂಟು ಎನ್ನುವುದಕ್ಕೆ ಕೊಡಬಹುದಾದ ಒಂದು ಉದಾಹರಣೆ ಎನ್ನಬಹುದು.
Recommended Video
ಕಳೆದ ಡಿಸೆಂಬರ್ ನಲ್ಲಿ ಸಿಜೆಐ ಗೊಗೋಯ್ ಐತಿಹಾಸಿಕ ತೀರ್ಪು ನೀಡಿದ ಸಂದರ್ಭದಲ್ಲಿ ಕೃಷ್ಣೈಕ್ಯರಾಗಿರುವ ಉಡುಪಿ ಪೇಜಾವರ ಅಧೋಕ್ಷಜ ಮಠದ ವಿಶ್ವೇಶ್ವತೀರ್ಥ ಶ್ರೀಗಳು, ಅಯೋಧ್ಯೆ ಚಳುವಳಿ ನಡೆದು ಬಂದ ರೀತಿ/ದಾರಿ, ಅಲ್ಲಿಗೂ, ಉಡುಪಿಗೂ ಯಾವ ರೀತಿಯ ಭಾವನಾತ್ಮಕ ಸಂಬಂಧವಿದೆ ಎನ್ನುವುದನ್ನು ವಿವರಿಸಿದ್ದರು.
ರಾಮಮಂದಿರದ ಎತ್ತರ, ಅಗಲ, ವಿನ್ಯಾಸ ಹಾಗೂ ವಿಶೇಷತೆಗಳು
ರಾಮ ಮಂದಿರದ ಭೂಮಿಪೂಜೆ ನಡೆಯುತ್ತಿರುವ ಈ ಐತಿಹಾಸಿಕ ಸಂದರ್ಭದಲ್ಲಿ, ರಾಮ ಜನ್ಮಭೂಮಿ ಹೋರಾಟಕ್ಕೆ ಪ್ರೇರಣೆಯಾಗಿದ್ದ ಪೇಜಾವರ ಹಿರಿಯ ಶ್ರೀಗಳು ದೈಹಿಕವಾಗಿ ನಮ್ಮೊಂದಿಗಿಲ್ಲ ಎನ್ನುವ ಕೊರಗು ಒಂದು ಕಡೆ.
ಇನ್ನೊಂದು, ಕಡೆ ಮಸೀದಿ ಕೆಡವಿದ ವಿಚಾರದಲ್ಲಿ ಇನ್ನೂ ವಿಚಾರಣೆ ಎದುರಿಸುತ್ತಿರುವ ಮತ್ತು ರಾಜಕೀಯವಾಗಿ ಈ ಹೋರಾಟಕ್ಕೆ ಬಲ ನೀಡಿದ್ದ ಲಾಲ್ ಕೃಷ್ಣ ಆಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಭೂಮಿಪೂಜೆಯಲ್ಲಿ ಭಾಗವಹಿಸುತ್ತಿದ್ದರೆ, ಉಮಾಭಾರತಿ, ಆರೋಗ್ಯದ ಕಾರಣಕ್ಕಾಗಿ ಅಯೋಧ್ಯೆಗೆ ಹೋಗುತ್ತಿಲ್ಲ. ಅಂದು ಪೇಜಾವರ ಶ್ರೀಗಳು ಹೇಳಿದ ಮೈನವಿರೇಳಿಸುವ ಕೆಲವೊಂದು ಫ್ಲ್ಯಾಷ್ ಬ್ಯಾಕ್ ಘಟನೆಗಳು ಹೀಗಿದೆ:
ರಾಮ ಮಂದಿರ ಭೂಮಿ ಪೂಜೆ: ಅಯೋಧ್ಯೆಯಲ್ಲಿ ಮೋದಿಯ ವೇಳಾಪಟ್ಟಿ
ಧರ್ಮ ಸಂಸತ್ ಸಭೆ
ರಾಮಜನ್ಮಭೂಮಿ ಗುಡಿಯಲ್ಲಿ ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕೆಂದು ನಾವು 1980ರಿಂದಲೂ ಒತ್ತಾಯಿಸಿಕೊಂಡು ಬರುತ್ತಿದ್ದೆವು. ಆದರೆ, ನಾವು ಎಷ್ಟೇ, ಕೇಂದ್ರ ಮತ್ತು ಉತ್ತರ ಪ್ರದೇಶ ಸರಕಾರಕ್ಕೆ ಒತ್ತಾಯ ಮಾಡಿದ್ದರೂ, ನಮಗೆ ಅವಕಾಶ ಸಿಕ್ಕಿರಲಿಲ್ಲ. ಗುಡಿಯ ಕೀಲಿಕೈ ಕೊಡಬೇಕೆಂದು, ನಮ್ಮ ಪರ್ಯಾಯದ ಅವಧಿಯಲ್ಲಿ ಅಂದರೆ 1985ರಲ್ಲಿ ನಡೆದ ಧರ್ಮ ಸಂಸತ್ತಿನಲ್ಲಿ ನಿರ್ಣಯಕ್ಕೆ ಬರಲಾಗಿತ್ತು - ಪೇಜಾವರ ಶ್ರೀ.
ಅಂದಿನ ಪ್ರಧಾನಿ ರಾಜೀವ್ ಗಾಂಧಿ
"ಅದಾದ ನಂತರ, ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಕೀಲಿಕೈ ನಮಗೆ ಕೊಡಲು ಒಪ್ಪಿದರು. ಇದಾದ ನಂತರ, ನಾವು, ವಿದ್ಯಾಮಾನ್ಯ ತೀರ್ಥರು, ವಿಭುದೇಶ ತೀರ್ಥರು, ಅಂದಿನ ಸುಬ್ರಮಣ್ಯ ಮಠದ ಯತಿಗಳಾಗಿದ್ದ ವಿದ್ಯಾಭೂಷಣ ತೀರ್ಥರು ಸೇರಿದಂತೆ ಹತ್ತು ಸಂತರು ಅಯೋಧ್ಯೆಗೆ ಹೊರಟೆವು. ಆದರೆ, ದಾರಿ ಮಧ್ಯೆಯೇ ನಮ್ಮನ್ನು ಬಂಧಿಸಲಾಯಿತು. ಪೊಲೀಸ್ ಠಾಣೆಯಲ್ಲೇ ನಾವು ಪೂಜೆ ಕರ್ಮಾದಿಗಳನ್ನು ಮಾಡಿದ್ದು ನನ್ನ ಮನಸ್ಸಿನಲ್ಲಿ ಇಂದೂ ಅಚ್ಚಳಿಯದೇ ಉಳಿಯುತ್ತದೆ" - ಪೇಜಾವರ ಶ್ರೀಗಳು.
ಆಡ್ವಾಣಿ ರಥಯಾತ್ರೆ ಭಾರೀ ಸಂಚಲನ ಮೂಡಿಸಿದ್ದ ಸಮಯವದು
ಆಗ, ನಾವು ನೇರವಾಗಿ ಅಂದಿನ ರಾಷ್ಟ್ರಪತಿಗಳಾದ ವೆಂಕಟರಾಮನ್ ಅವರಿಗೆ ಅರ್ಜಿ ಸಲ್ಲಿಸಿದೆವು, ನಮ್ಮನ್ನು ಬಿಡುಗಡೆಗೊಳಿಸಲು ರಾಷ್ಟ್ರಪತಿಗಳು ಸೂಚಿಸಿದ್ದರು. ನಾವು ಅಯೋಧ್ಯೆಯ ದರ್ಶನ ಮಾಡಿಕೊಂಡು ಬಂದೆವು. ಇದಾದ ನಂತರ ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದ ವೇಳೆ, ಎಷ್ಟು ಸಂಧಾನ ನಡೆಯಿತೋ ಗೊತ್ತಿಲ್ಲ, ಆದರೆ, ಯಾವುದೂ ಫಲಪ್ರದವಾಗಿರಲಿಲ್ಲ. ಇನ್ನೊಂದು ಕಡೆ, ಆಡ್ವಾಣಿಯವರ ರಥಯಾತ್ರೆ ಭಾರೀ ಸಂಚಲನ ಮೂಡಿಸಿದ್ದ ಸಮಯವದು.
ಕಲ್ಯಾಣ್ ಸಿಂಗ್ ಅವರ ಸರಕಾರ ಉತ್ತರ ಪ್ರದೇಶದಲ್ಲಿತ್ತು
ವಿ.ಪಿ.ಸಿಂಗ್ ನಂತರ ಪಿ.ವಿ. ನರಸಿಂಹ ರಾಯರ ಸರಕಾರದಲ್ಲಿ 1992ರಲ್ಲಿ ಸಾಂಕೇತಿಕವಾಗಿ ಕರಸೇವೆ ಮಾಡುತ್ತೇವೆ ,ಮಸೀದಿಯನ್ನು ಮುಟ್ಟುವುದಿಲ್ಲ ಎನ್ನುವ ವಾಗ್ದಾನವನ್ನು ನಾವು ನೀಡಿದ್ದೆವು. ಆದರೆ, ಕರಸೇವೆಗೆ ಬಂದವರು ಮಸೀದಿಯನ್ನು ಹತ್ತಿ ಕೆಡವಲು ಆರಂಭಿಸಿದರು. ಮೈಕ್ ನಲ್ಲಿ ಸಾರಿಸಾರಿ ಹೇಳುತ್ತಿದ್ದೆ, ಅವರನ್ನು ತಡೆಯಲೂ ಹೋದೆ. ಕಲ್ಯಾಣ್ ಸಿಂಗ್ ಅವರ ಸರಕಾರ ಉತ್ತರ ಪ್ರದೇಶದಲ್ಲಿತ್ತು. ತಡೆಯಲು ಹೋಗಬೇಡಿ, ಗುಂಡು ಬೀಳಬಹುದು ಎಂದು ನನ್ನನ್ನು ಎಳೆದು ವಾಪಸ್ ತಂದರು.
ನಾನೇ ಮೂರ್ತಿಯನ್ನು ಪ್ರತಿಷ್ಟಾಪಿಸಿ, ಪ್ರಥಮ ಪೂಜೆ ಮಾಡಿ ಬಂದೆ
ಅಷ್ಟೊತ್ತಿಗೆ ಮಸೀದಿ ನೆಲಕ್ಕುರುಳಿತ್ತು, ಬಹಳ ವಿಷಾದಗೊಂಡಿದ್ದೆ. ಆದರೆ, ಆಗ ಸಿಕ್ಕ ಕೆಲವು ಕುರುಹುಗಳು ಅಲ್ಲಿ ದೇವಾಲಯವಿದ್ದದ್ದು ಹೌದು ಎನ್ನುವುದನ್ನು ರುಜುವಾತು ಪಡಿಸಿತ್ತು. ಮರುದಿನ ನಾನೇ ಮೂರ್ತಿಯನ್ನು ಪ್ರತಿಷ್ಟಾಪಿಸಿ, ಪ್ರಥಮ ಪೂಜೆ ಮಾಡಿ ಬಂದೆ. ಅದಾದ ನಂತರ, ಅಲ್ಲಿ ರಾಮ ಮಂದಿರದ ಶಂಕು ಸ್ಥಾಪನೆ ನಡೆಯಿತು, ದಲಿತರೊಬ್ಬರಿಂದ ಶಂಕು ಸ್ಥಾಪನೆಯನ್ನು ನೆರವೇರಿಸಲಾಯಿತು.
ವಿಶ್ವಹಿಂದೂ ಪರಿಷತ್, ಧಾರ್ಮಿಕ ಸಂಘಟನೆಗಳು
ಇದಾದ ಮೇಲೆ, ಈ ವ್ಯಾಜ್ಯ ನ್ಯಾಯಾಲಯದ ಮೆಟ್ಟಲೇರಿದ್ದರಿಂದ, ಯಾವುದೇ ಹೋರಾಟಗಳು ನಡೆದಿಲ್ಲ. ಆದರೆ, ಸರಕಾರಕ್ಕೆ ಒತ್ತಡ ತರುವ ಕೆಲಸವನ್ನು ನಮ್ಮ ನೇತೃತ್ವದಲ್ಲಿ ವಿಶ್ವಹಿಂದೂ ಪರಿಷತ್, ಧಾರ್ಮಿಕ ಸಂಘಟನೆಗಳು ಮಾಡಿಕೊಂಡು ಬಂದವು. ಹಾಗಾಗಿ, ಅಯೋಧ್ಯೆಯ ವಿಚಾರದಲ್ಲಿ ಉಡುಪಿ ಮತ್ತು ಅಷ್ಠಮಠಗಳ ಪಾತ್ರ ಮಹತ್ವದ್ದು ಎಂದು ಪೇಜಾವರ ಶ್ರೀಗಳು ಅಂದಿನ ಘಟನೆಯನ್ನು, ಸುಪ್ರೀಂ ತೀರ್ಪು ಬಂದ ಸಂದರ್ಭದಲ್ಲಿ ಮೆಲುಕು ಹಾಕಿಕೊಂಡಿದ್ದರು.
ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು
"ನನ್ನ ವಯಸ್ಸಿನಲ್ಲಿ ಅಯೋಧ್ಯೆ ಮಂದಿರ ತೀರ್ಪು ಬರುತ್ತದೆ ಎಂದುಕೊಂಡಿರಲಿಲ್ಲ. ವೈಯಕ್ತಿಕವಾಗಿ ನನಗಿದು ಖುಷಿ ಕೊಟ್ಟಿದೆ. ಈ ಕ್ಷಣವನ್ನು ಸಂಭ್ರಮಿಸಲು ಮುಂದಾಗಬೇಡಿ. ಮುಸ್ಲಿಂ ಧರ್ಮದವರನ್ನೂ ಜೊತೆಯಾಗಿ ಕರೆದುಕೊಂಡು ಹೋಗಬೇಕು".
ಪೇಜಾವರ ಶ್ರೀಗಳನ್ನು ಭೂಮಿಪೂಜೆಯ ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳೋಣ
"ಹೀಗಾಗಿ ವಿಜಯೋತ್ಸವ, ಮೆರವಣಿಗೆಗಳು ಬೇಡ. ಪರಸ್ಪರ ಸಹಕಾರದಿಂದ ಮಂದಿರ, ಮಸೀದಿ ಎರಡೂ ನಿರ್ಮಾಣವಾಗಲಿ. ಮಂದಿರ ನಿರ್ಮಾಣಕ್ಕೆ ಮುಸಲ್ಮಾನರ ಸಹಕಾರ ಬೇಕು. ಮಸೀದಿ ನಿರ್ಮಾಣಕ್ಕೆ ಹಿಂದೂಗಳೂ ಸಹಕರಿಸಲಿ" ಎಂದು ಹೇಳುವ ಮೂಲಕ ಸಾಮಾಜಿಕ ಕಳಕಳಿಯನ್ನು ಪೇಜಾವರ ಶ್ರೀಗಳು ತೋರಿದ್ದನ್ನು, ಭೂಮಿಪೂಜೆಯ ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳೋಣ.