ಅಣ್ಣಾಮಲೈ ಇನ್ನೂ ಹತ್ತು ವರ್ಷ ಸೇವೆಯಲ್ಲಿರಲಿ- ಪಲಿಮಾರುಶ್ರೀ
ಉಡುಪಿ ಮೇ 28: ದಕ್ಷ ಅಧಿಕಾರಿ ಎಂದೇ ಗುರುತಿಸಲಾಗುವ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರ ರಾಜೀನಾಮೆ ಕುರಿತು ಗಂಭೀರ ಚರ್ಚೆಗಳು ಆರಂಭವಾಗಿವೆ. ಅಣ್ಣಾ ಮಲೈ ಬಗ್ಗೆ ಪರ್ಯಾಯ ಪಲಿಮಾರು ಮಠದ ಯತಿ ಶ್ರೀ ವಿದ್ಯಾಧೀಶ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಣ್ಣಾಮಲೈ ಕಾನೂನು ಸುವ್ಯವಸ್ಥೆ ನಿಭಾಯಿಸುವ ತಜ್ಞರು. ಹೀಗಾಗಿ ಅವರು ಇನ್ನೂ ಹತ್ತು ವರ್ಷ ಪೊಲೀಸ್ ಸೇವೆ ಮಾಡುವಂತಾಗಲಿ ಎಂದು ಹೇಳಿದ್ದಾರೆ.
ಅಣ್ಣಾಮಲೈ ರಾಜಕೀಯಕ್ಕೆ ಹೋಗುತ್ತಾರೆಂಬ ಚರ್ಚೆ ನಡೆಯುತ್ತಿದೆ. ಅವರ ರಾಜಕೀಯ ಪ್ರವೇಶಕ್ಕೆ ನನ್ನ ವಿರೋಧ ಇಲ್ಲ. ಆದರೆ ಅವರು ಇನ್ನೂ ಹತ್ತು ವರ್ಷ ಪೊಲೀಸ್ ಸೇವೆಯಲ್ಲಿ ಮುಂದುವರೆಯಬೇಕು ಎಂದು ಅವರು ಹೇಳಿದರು.
ರಾಜಕೀಯದಲ್ಲಿ ಸೋಲು ಗೆಲುವಿಗೆ ಸಿದ್ಧವಾಗಿರಬೇಕು. ಪೊಲೀಸ್ ಅಧಿಕಾರಿಯಾಗಿ ಅಣ್ಣಾಮಲೈ ಸೋಲು ಕಾಣದ ವ್ಯಕ್ತಿಯಾಗಿದ್ದಾರೆ. ರಾಜಕೀಯದಲ್ಲಿ ಎಲ್ಲರ ಪ್ರೀತಿ ಗಳಿಸಲು ಸಾಧ್ಯವಿಲ್ಲ. 10 ವರ್ಷ ತಡವಾಗಿ ರಾಜಕೀಯಕ್ಕೆ ಸೇರಿ. ರಾಜಕೀಯಕ್ಕೆ ವಯಸ್ಸಿನ ಮಿತಿ ಇಲ್ಲ. ಆದರೆ ರಾಜಕೀಯ ಸೇರ್ಪಡೆಗೆ ನಿರ್ಧರಿಸಿದ್ದರೆ ಅದಕ್ಕೂ ಪ್ರಾರ್ಥಿಸುತ್ತೇನೆ ಎಂದರು.

ಅಣ್ಣಾಮಲೈಗೆ ಎಲ್ಲಿ ಹೋದರೂ ಒಳ್ಳೆದಾಗಲಿ. ರಾಜಕೀಯ ಕ್ಷೇತ್ರ ಶುದ್ಧಿ ಮಾಡಲು ಅವರು ಸಮರ್ಥರಾಗಿದ್ದಾರೆ. ಪೊಲೀಸ್ ಇಲಾಖೆ ಬಿಡಬಾರದು ಎನ್ನುವುದು ನಮ್ಮ ಚಿಕ್ಕ ಆಸೆ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.












Click it and Unblock the Notifications