ಅಸಹಾಯಕ ಸ್ಥಿತಿಯಲ್ಲಿದ್ದ ಶ್ವಾನಕ್ಕೆ ಶಸ್ತ್ರಚಿಕಿತ್ಸೆ; ಮಾನವೀಯತೆ ಮೆರೆದ ಪ್ರಾಣಿಪ್ರಿಯರು
ಉಡುಪಿ, ಜೂನ್ 19: ಕೊರೊನಾ ಲಾಕ್ಡೌನ್ ಮನುಷ್ಯರಿಗಷ್ಟೇ ಅಲ್ಲ, ಬೀದಿ ನಾಯಿಗಳಿಗೂ ಸಾಕಷ್ಟು ಸಂಕಷ್ಟವನ್ನು ತಂದೊಡ್ಡಿದೆ. ಕಡೆ ಪಕ್ಷ ಮನುಷ್ಯ ತನ್ನ ಕಷ್ಟವನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳಬಲ್ಲ. ಆದರೆ, ಮಾತು ಬಾರದ ಬೀದಿ ನಾಯಿಗಳು ಏನು ಮಾಡಬೇಕು ಪಾಪ?
ಬೀದಿ ಶ್ವಾನವೊಂದು ಕಾಲಿಗೆ ದೊಡ್ಡ ಗಾಯ ಮಾಡಿಕೊಂಡು ಕೆಲವು ದಿನಗಳಿಂದ ಉಡುಪಿ ನಗರದ ಮಿತ್ರ ಆಸ್ಪತ್ರೆ ಬಳಿ ಅಸಹಾಯಕ ಸ್ಥಿತಿಯಲ್ಲಿ ದಿನಗಳನ್ನು ಕಳೆಯುತಿತ್ತು. ಈ ಶ್ವಾನದ ಅಸಹಾಯಕ ಪರಿಸ್ಥಿತಿ ಕಂಡು ಮರುಗಿದ ಪ್ರಾಣಿ ಪ್ರಿಯರಾದ ಅನೀಶ್, ಭರತ್, ಸುಮನಾ, ನಿಖಿತಾ ಪೂಜಾರಿ, ಮಂಜುಳ ಕರ್ಕೆರಾ ಅವರು ಶ್ವಾನವನ್ನು ಖಾಸಗಿ ಪಶು ಚಿಕಿತ್ಸಾಲಯಕ್ಕೆ ಕೊಂಡೊಯ್ದು ಶಸ್ತ್ರ ಚಿಕಿತ್ಸೆಗೆ ಒಳಪಡಿಸಿ ಪ್ರಾಣಿದಯೆ ಮೆರೆದಿದ್ದಾರೆ.
ಶಸ್ತ್ರಕ್ರಿಯೆ ಆ ಬಳಿಕ ಮಣಿಪಾಲದ ಶ್ವಾನ ಪುರ್ವಸತಿ ಕೇಂದ್ರದಲ್ಲಿ ಆಶ್ರಯ ಒದಗಿಸಿದ್ದಾರೆ. ಮಲ್ಪೆಯ ಬಬಿತಾ ಮಧ್ವರಾಜ್ ಶ್ವಾನದ ಚಿಕಿತ್ಸಾ ವೆಚ್ಚವನ್ನು ಭರಿಸಿ ಮಾನವೀಯತೆ ಮೆರೆದಿದ್ದಾರೆ. ಪ್ರಾಣಿಪ್ರಿಯರ ಈ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.

ಇವರ ಜೊತೆಗೆ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಕೂಡ ಈ ಶ್ವಾನದ ಸೇವೆಯಲ್ಲಿ ತಮ್ಮ ಎಂದಿನ ಕಳಕಳಿ ಮೆರೆದು ಅದಕ್ಕೆ ಪುನರ್ಜನ್ಮ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಂತೂ ಈ ಶ್ವಾನ ಬಹಳ ಸಮಯದಿಂದ ಅನುಭವಿಸುತ್ತಿದ್ದ ನೋವೊಂದಕ್ಕೆ ಸಹೃದಯರು ಮಿಡಿಯುವ ಮೂಲಕ ಶ್ವಾನ ಚೇತರಿಕೆಯಾಗುವಂತೆ ಮಾಡಿದ್ದಾರೆ.












Click it and Unblock the Notifications