ಇನ್ಮುಂದೆ ಸಿನಿಮಾ ಸೆಟ್ನಲ್ಲಿ ಕುಚ್ಚಲಕ್ಕಿ ಗಂಜಿ ಊಟ; ನಟ ರಿಷಬ್ ಶೆಟ್ಟಿ
ಉಡುಪಿ, ಆಗಸ್ಟ್ 31: ಉಡುಪಿ ಜಿಲ್ಲೆಯಲ್ಲಿ ಕೃಷಿ ಕ್ರಾಂತಿ ಮಾಡುತ್ತಿರುವ ಹಡೀಲು ಭೂಮಿ ಕೃಷಿ ಅಭಿಯಾನಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬಳಿಕ, ಇದೀಗ ಸ್ಯಾಂಡಲ್ವುಡ್ ನಟ- ನಿರ್ದೇಶಕ ರಿಷಬ್ ಶೆಟ್ಟಿ ಕೂಡಾ ಕೈ ಜೋಡಿಸಿದ್ದಾರೆ.
ಉಡುಪಿಯ ಪಡು ತೋನ್ಸೆಯಲ್ಲಿ ರಿಷಬ್ ಶೆಟ್ಟಿ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೆ. ಹಡೀಲು ಭೂಮಿಯಲ್ಲಿ ಬೆಳೆದ ಭತ್ತದ ಕಳೆಯನ್ನು ರಿಷಬ್ ಶೆಟ್ಟಿ ತೆಗೆದು, ಕೃಷಿ ಜೀವನವನ್ನು ನೆನೆಪಿಸಿಕೊಂಡಿದ್ದಾರೆ. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ರಘಪತಿ ಭಟ್ ನೇತೃತ್ವದಲ್ಲಿ ಸುಮಾರು 1500 ಎಕರೆ ಹಡೀಲು ಭೂಮಿಯಲ್ಲಿ ಭತ್ತದ ಬೇಸಾಯ ಮಾಡಲಾಗುತ್ತಿದೆ.
ಇದಾದ ಬಳಿಕ ನೇಜಾರ್ನಲ್ಲಿ ಕೇದರೋತ್ಥಾನ ಟ್ರಸ್ಟ್ ವತಿಯಿಂದ ನಡೆಸಲಾದ ಕಾರ್ಯಕ್ರಮದಲ್ಲೂ ನಟ ರಿಷಬ್ ಶೆಟ್ಟಿ ಭಾಗವಹಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಉಡುಪಿಯಲ್ಲಿ ಆಗುತ್ತಿರುವ ಭತ್ತದ ಕೃಷಿ ಕ್ರಾಂತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

"ಅಲ್ಲದೇ ಮುಂದೆ ತಮ್ಮ ಸಿನಿಮಾ ಸೆಟ್ನಲ್ಲಿ ಕುಚ್ಚಲು ಅಕ್ಕಿ ಗಂಜಿ, ಉಪ್ಪಿನಕಾಯಿ, ಚಟ್ನಿ ನೀಡುವುದಾಗಿ ರಿಷಬ್ ಶೆಟ್ಟಿ ಹೇಳಿದರು. ಕುಚ್ಚಲಕ್ಕಿಯ ಗಂಜಿ ಮತ್ತು ಉಪ್ಪಿನಕಾಯಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ದೇಹಕ್ಕೂ ತುಂಬಾ ಶಕ್ತಿ ನೀಡುತ್ತದೆ. ಕುಚ್ಚಲಕ್ಕಿಯ ಗಂಜಿ ಉಂಡರೆ ಮನಸ್ಸಿಗೂ ತೃಪ್ತಿ ಇರುತ್ತದೆ. ಹೀಗಾಗಿ ಮುಂದೆ ನಮ್ಮ ಸಿನಿಮಾ ಸೆಟ್ನಲ್ಲಿ ಕುಚ್ಚಲಕ್ಕಿಯ ಗಂಜಿಯನ್ನೇ ಊಟ ಮಾಡುತ್ತೇವೆ," ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ.
ಇನ್ನು ಯುವಕರು ಹೆಚ್ಚೆಚ್ಚು ಕೃಷಿಯತ್ತ ಒಲವು ತೋರಿಸಬೇಕು ಎಂದು ಮನವಿ ಮಾಡಿದ ರಿಷಬ್ ಶೆಟ್ಟಿ, "ಸುಮ್ಮನೆ ಸಾಮಾಜಿಕ ಜಾಲತಾಣದಲ್ಲಿ ಸಮಯ ವ್ಯರ್ಥ ಮಾಡುವ ಬದಲು, ಊರಿನಲ್ಲೇ ಇರುವ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ರೈತನನ್ನು ದೇಶದ ಬೆನ್ನೆಲುಬು ಅಂತಾ ಹೇಳುತ್ತೇವೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ರೈತನ ಬೆನ್ನುಗಳೇ ನೋಯಲು ಆರಂಭಿಸಿದೆ."

"ವಿವಿಧ ಕಾರಣಗಳಿಂದ ರೈತ ಕೃಷಿಯಿಂದ ವಿಮುಖನಾಗುತ್ತಿದ್ದಾನೆ. ಇದರಿಂದ ಹಡೀಲು ಭೂಮಿ ಅಥವಾ ಗದ್ದೆಗಳೆಲ್ಲಾ ತೋಟಗಳಾಗಿ ಬದಲಾಗುತ್ತಿದೆ. ಹಿರಿಯರಿಗೆ ಕೃಷಿಯಲ್ಲಿ ಕಿರಿಯರು ನೆರವಾದರೆ ಹಳ್ಳಿಯಲ್ಲಿ ಭತ್ತ ನಳನಳಿಸುತ್ತದೆ," ಅಂತಾ ರಿಷಬ್ ಶೆಟ್ಟಿ ಹೇಳಿದ್ದಾರೆ.
"ಕೃಷಿಯನ್ನು ಉದ್ಯೋಗ ಅಂತಾ ಭಾವಿಸಬೇಡಿ. ಕೃಷಿ ಮಾಡೋದು ಸಂಸ್ಕೃತಿಯ ಉಳಿವಿಗಾಗಿ ಅಂತಾ ಭಾವಿಸಿ. ಅಂತರ್ಜಲ ವೃದ್ಧಿಗಾಗಿ ಕೃಷಿ ಮಾಡಿ. ಹಣಕ್ಕಾಗಿ ಕೃಷಿಯನ್ನು ಮಾಡಿದರೆ ಅದು ಕೃಷಿಯಾಗಲ್ಲ. ಕೃಷಿಯನ್ನು ಹಬ್ಬದ ರೀತಿ ಸಂಭ್ರಮಿಸುತ್ತಾ ಮಾಡಿದರೆ ಸಮಗ್ರ ಬೆಳವಣಿಗೆಯಾಗುತ್ತದೆ. ಇಂದಿನ ಕಾಲಘಟ್ಟದಲ್ಲಿ ಎಲ್ಲರೂ ಜಗತ್ತಿನ ವೇಗದ ಹಿಂದೆ ಓಡುತ್ತಿದ್ದಾರೆ. ಎಲ್ಲಾ ಕ್ಷೇತ್ರದ ತರ ಕೃಷಿಯೂ ಒಂದು ದಿನ ಮುನ್ನಲೆಗೆ ಬರುತ್ತದೆ. ಕೃಷಿಗೆ ವಿಶ್ವ ಮಾನ್ಯತೆ ದೊರಕಲಿದೆ," ಅಂತಾ ರಿಷಬ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹುಲಿವೇಷ ಹಾಕಿ ಭರ್ಜರಿ ಸ್ಟೆಪ್ ಹಾಕಿದ ರಕ್ಷಿತ್ ಶೆಟ್ಟಿ
ಚಿತ್ರ ನಟ ರಕ್ಷಿತ್ ಶೆಟ್ಟಿ ಈ ಬಾರಿ ಶ್ರೀಕೃಷ್ಣಜನ್ಮಾಷ್ಟಮಿ ಸಂದರ್ಭ ಹುಲಿವೇಷ ಹಾಕಿ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಉಡುಪಿಯ ಅಷ್ಟಮಿ ಅಂದರೆ ಹುಲಿವೇಷಗಳ ಕಲರವ ಇದ್ದೇ ಇರುತ್ತದೆ. ಆದರೆ ಈ ಬಾರಿ ವೇಷಗಳಿಗೆ ಜಿಲ್ಲಾಡಳಿತ ಅವಕಾಶ ಕೊಟ್ಟಿಲ್ಲ.

ಆದರೆ ದೇವಸ್ಥಾನಗಳಿಂದ, ದೈವಸ್ಥಾನಗಳಿಂದ ಹೊರಡುವ ಹುಲಿವೇಷ ತಂಡಗಳು ಸಾಂಪ್ರದಾಯಿಕ ಲೋಬಾನ ಹಾಕುವ ಆಚರಣೆಯನ್ನು ಮಾತ್ರ ಮಾಡಿದೆ. ಬೈಲೂರು ನೀಲಕಂಠ ಮಹಾಬಬ್ಬುಸ್ವಾಮಿ ದೈವಸ್ಥಾನದಲ್ಲಿ ಜ್ಯೂನಿಯರ್ ಫ್ರೆಂಡ್ಸ್ನ ಲೋಬಾನ ಹಾಕುವ ಸಂಪ್ರದಾಯದಲ್ಲಿ ನಟ ರಕ್ಷಿತ್ ಶೆಟ್ಟಿ ಭಾಗವಹಿಸಿದ್ದಾರೆ. ದೈವಸ್ಥಾನದ ಹುಲಿವೇಷ ತಂಡದ ಯುವಕರ ಜೊತೆ ರಕ್ಷಿತ್ ಶೆಟ್ಟಿ ಜಬರ್ದಸ್ತ್ ಸ್ಟೆಪ್ ಹಾಕಿ, ಪಕ್ಕಾ ವೇಷಧಾರಿಗಳಂತೆ ಕುಣಿದಿದ್ದಾರೆ.
ಉಳಿದವರು ಕಂಡಂತೆ ಚಿತ್ರಕ್ಕೂ ಮೊದಲು ಇದೇ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿ ಇಲ್ಲಿನ ತಂಡವನ್ನು ರಕ್ಷಿತ್ ಚಿತ್ರೀಕರಣಕ್ಕೆ ಕರೆದೊಯ್ದಿದ್ದರು. ಚಿತ್ರದ ಸಕ್ಸಸ್ ಹಿಂದೆ ಬಬ್ಬುಸ್ವಾಮಿ ಕೊರಗಜ್ಜ ದೈವದ ಆಶೀರ್ವಾದ ಕೂಡ ಇದೆ ಎಂದು ರಕ್ಷಿತ್ ಶೆಟ್ಟಿ ಬಲವಾಗಿ ನಂಬಿದ್ದಾರೆ.












Click it and Unblock the Notifications