ಕುಂದಾಪುರ: ಕೇಸರಿ ಶಾಲು ತೊಟ್ಟು ಕಾಲೇಜಿನವರೆಗೆ ವಿದ್ಯಾರ್ಥಿಗಳಿಂದ ಮೆರವಣಿಗೆ
ಉಡುಪಿ, ಫೆಬ್ರವರಿ 5: ಕರಾವಳಿ ಹಾಗೂ ಮಲೆನಾಡಿನ ಕಾಲೇಜುಗಳಲ್ಲಿ ನಡೆಯುತ್ತಿರುವ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಈಗ ರಾಜಕೀಯ ಆರೋಪ- ಪ್ರತ್ಯಾರೋಪಗಳಿಗೆ ಸಾಕ್ಷಿಯಾಗಿದೆ.
ಈ ನಡುವೆ ಉಡುಪಿಯ ಕುಂದಾಪುರದಲ್ಲಿ ಕೇಸರಿ ಶಾಲು ತೊಟ್ಟು ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದ್ದಾರೆ. ಕುಂದಾಪುರದ ಭಂಡಾರ್ಕರ್ಸ್ ಕಾಲೇಜು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸಿದರು.
ಕುಂದಾಪುರದ ಪಾರಿಜಾತ ಸರ್ಕಲ್ನಿಂದ ಭಂಡಾರ್ಕರ್ಸ್ ಕಾಲೇಜ್ ಗೇಟ್ ತನಕ ಮೆರವಣಿಗೆ ನಡೆಸಿದ ನಂತರ ವಿದ್ಯಾರ್ಥಿಗಳು ಕೇಸರಿ ಶಾಲು ತೆಗೆದು, ಕಾಲೇಜ್ ಐಡಿ ಧರಿಸಿ ಕಾಲೇಜ್ ಒಳಗೆ ತೆರಳಿದರು. ಈ ವೇಳೆ ಕಾಲೇಜು ಉಪನ್ಯಾಸಕರು ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲನೆ ಮಾಡಿ ಪ್ರವೇಶಕ್ಕೆ ಅನುಮತಿ ನೀಡಿದರು.

ಕೇಸರಿ ಶಾಲು ಧರಿಸಿ ಮೆರವಣಿಗೆ ಮಾಡಿದ ವಿದ್ಯಾರ್ಥಿನಿಯರು
ಉಡುಪಿ ಜಿಲ್ಲೆ ಕುಂದಾಪುರದ ಹಿಜಾಬ್- ಕೇಸರಿ ಶಾಲು ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರಿದ್ದು, ಹಿಂದೂ ವಿದ್ಯಾರ್ಥಿನಿಯರೂ ಸಹ ಕೇಸರಿ ಶಾಲುಗಳನ್ನು ತೊಟ್ಟು ಕಾಲೇಜಿಗೆ ಬಂದರು. ಇದಕ್ಕೂ ಮುನ್ನ ಮೆರವಣಿಗೆಯಲ್ಲಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿನಿಯರೂ ಮೆರವಣಿಗೆ ನಡೆಸಿದರು. ಹಿಜಾಬ್ ಕಳಚುವ ತನಕ ಕೇಸರಿ ಶಾಲು ತೊಡುತ್ತೇವೆ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯ ಬೇಡ ಎಂದು ಜೈ ಶ್ರೀರಾಮ್, ಹರಹರ ಮಹಾದೇವ ಘೋಷಣೆ ಕೂಗಿದರು.

ಆರ್.ಎನ್. ಶೆಟ್ಟಿ ಕಾಲೇಜಿಗೆ ರಜೆ ಘೋಷಣೆ
ಉಡುಪಿ ಜಿಲ್ಲೆಯಲ್ಲಿ ಹಿಜಬ್ ಕೇಸರಿ ವಿವಾದ ರಾಜ್ಯದಾದ್ಯಂತ ವ್ಯಾಪಿಸುತ್ತಿದ್ದು, ಕುಂದಾಪುರದ ಮತ್ತೊಂದು ಕಾಲೇಜಿನಲ್ಲಿ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ಹುಟ್ಟಿಕೊಂಡಿದೆ.
ಕುಂದಾಪುರದ ಆರ್.ಎನ್. ಶೆಟ್ಟಿ ಖಾಸಗಿ ಕಾಲೇಜು ಮುಂದೆ ಕೇಸರಿ ಶಾಲು ಮತ್ತು ಬುರ್ಖಾ ತೊಟ್ಟ ವಿದ್ಯಾರ್ಥಿಗಳ ಜಮಾವಣೆಗೊಂಡಿದ್ದರು. ಈ ಹಿನ್ನೆಲೆ ಹೈಕೋರ್ಟ್ ತೀರ್ಪು ಬರುವ ತನಕ ಆರ್.ಎನ್. ಶೆಟ್ಟಿ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.
ಕೇಸರಿ ತೊಟ್ಟ ವಿದ್ಯಾರ್ಥಿಗಳಿಂದ ಜೈ ಶ್ರೀರಾಮ್, ಹರಹರ ಮಹಾದೇವ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು. ಪೊಲೀಸರು ಮತ್ತು ಕಾಲೇಜು ಆಗಮಿಸಿದ ಮಂಡಳಿ ಜೊತೆ ಸಭೆ ನಡೆಸಿದ್ದು, ಯಾವುದೇ ಗೊಂದಲಕಾರಿ ಘಟನೆ ನಡೆಯುವ ಮೊದಲು ರಜೆ ಘೋಷಣೆ ಮಾಡಲಾಗಿದೆ.

ತಲೆಗೆ ಸ್ಕಾರ್ಫ್ ತೊಡಲು ಅವಕಾಶ ಕೋರಿದ ಪೋಷಕರು
ಉಡುಪಿ ಜಿಲ್ಲೆಯಲ್ಲಿ ಹಿಜಾಬ್- ಕೇಸರಿ ಶಾಲು ವಿವಾದದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಹೊಡೆತ ಬೀಳುತ್ತಿದ್ದು, ಈ ಹಿನ್ನೆಲೆ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಪೋಷಕರ ಸಭೆ ನಡೆಸಲಾಯಿತು.
ಸಭೆ ಮುಗಿಸಿ ಹೊರಬಂದ ಮುಸ್ಲಿಂ ವಿದ್ಯಾರ್ಥಿನಿಯರು ಮತ್ತು ಪೋಷಕರು, ಪ್ರಾಂಶುಪಾಲರಿಗೆ ನಾವು ಮನವಿ ಪತ್ರ ಕೊಟ್ಟಿದ್ದು, ತಲೆಗೆ ಸ್ಕಾರ್ಫ್ ತೊಡಲು ಅವಕಾಶ ಕೋರಿದ್ದೇವೆ ಎಂದರು.
ಪ್ರಾಂಶುಪಾಲರಿಂದ ಉತ್ತಮ ಫಲಿತಾಂಶ ಬರಬಹುದು. ನಾವು ಕುಂದಾಪುರದಲ್ಲಿ ಹಲವು ವರ್ಷದಿಂದ ಅನ್ಯೋನ್ಯವಾಗಿ ಇದ್ದೆವು. ರಾಜಕೀಯ ಸಂಘಟನೆ ಈ ವಿಚಾರಕ್ಕೆ ಪ್ರವೇಶ ಆಗಬಾರದು. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿ ನಮಗೆ ಮುಖ್ಯ ಎಂದು ಸಭೆ ಮುಗಿಸಿ ಬಂದ ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದರು.












Click it and Unblock the Notifications