ಒಂದೇ ಕುಟುಂಬದ 19 ಜನರಿಂದ ಸಾಮೂಹಿಕ ಆತ್ಮಹತ್ಯೆ ಬೆದರಿಕೆ
ಉಡುಪಿ, ಜನವರಿ 20 : ನಿವೇಶನ ಕಳೆದುಕೊಂಡು ಸಂಕಷ್ಟಕ್ಕೀಡಾಗಿರುವ ಅವಿಭಕ್ತ ಕುಟುಂಬದ 19 ಸದಸ್ಯರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಮತ್ತಿತರರಿಗೆ ಪತ್ರ ಬರೆದಿದ್ದಾರೆ.
ಕಾರ್ಕಳ ತಾಲೂಕಿನ ಹೆಬ್ರಿ ನಾಡ್ಪಾಲು ಗ್ರಾಮದ ಸೋಮೇಶ್ವರ ಪೇಟೆ ನಿವಾಸಿ ಜಲಜ ಶೆಟ್ಟಿ, ರಾಮಣ್ಣ ಶೆಟ್ಟಿ ಮತ್ತು ಅವರ ಮಗ ವೆಂಕಟೇಶ ಶೆಟ್ಟಿ ಕುಟುಂಬದ ಒಟ್ಟು 19 ಮಂದಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಉಡುಪಿ ಜಿಲ್ಲಾಧಿಕಾರಿ ಸಹಿತ ಜನಪ್ರತಿನಿಧಿಗಳು, ಗೃಹ ಸಚಿವರು, ಕಂದಾಯ ಸಚಿವರು ಮತ್ತು ಮುಖ್ಯಮಂತ್ರಿ ಅವರಿಗೆ ಪತ್ರ ರವಾನಿಸಿದ್ದಾರೆ.

ಪತ್ರದಲ್ಲಿ ಏನಿದೆ..?
ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳಿರುವ ಮಂದಿ ಬರೆದ ಪತ್ರ ಹೀಗಿದೆ:
"19 ಮಂದಿ ಇರುವ ಅವಿಭಕ್ತ ಕುಟುಂಬ ನಮ್ಮದು. ಡಿಕ್ಲೆರೇಶನ್ ಮತ್ತು ಸರ್ಕಾರಿ ನಿವೇಶನವನ್ನು ಪಡೆದುಕೊಂಡು ಜೀವನ ಸಾಗಿಸುತ್ತಿದ್ದೇವೆ. ಇದೀಗ ನಮ್ಮ ಜಾಗವನ್ನು ಬೇರೆಯವರು ಒತ್ತುವರಿ ಮಾಡಿಕೊಂಡು ನಮಗೆ ಪ್ರಯೋಜನವಿಲ್ಲದ ಜಾಗ ನೀಡಿದ್ದಾರೆ. ಅಲ್ಲದೇ ನಮ್ಮ ಕುಟುಂಬದ ವಿರುದ್ಧ ದೂರನ್ನ ದಾಖಲಿಸಿದ್ದಾರೆ. ಈ ಎಲ್ಲ ಘಟನೆಗಳಿಂದ ನೊಂದಿದ್ದ ನಮ್ಮ ತಾಯಿಗೆ ಈಗ ಹೃದಯಾಘಾತವಾಗಿದೆ. ಯಾವುದೇ ಇಲಾಖೆಗೆ ತೆರಳಿ ನ್ಯಾಯ ಕೇಳಿದರೂ ನಮಗೆ ನ್ಯಾಯ ಸಿಕ್ಕಿಲ್ಲ. ನಮ್ಮ ಕಷ್ಟವನ್ನು ಅರಿಯುವವರು ಇಲ್ಲದ ಕಾರಣ ಅವಿಭಕ್ತ ಕುಟುಂಬದಲ್ಲಿರುವ ನಾವೆಲ್ಲರೂ ಸಾಮೂಹಿಕ ಆತ್ಮಹತ್ಯೆಗೆ ಮುಂದಾಗಿದ್ದೇವೆ."
ಹೀಗಂತ ಕುಟುಂಬ ಸದಸ್ಯ ವೆಂಕಟೇಶ ಶೆಟ್ಟಿ ಆತ್ಮಹತ್ಯೆ ಪತ್ರ ಬರೆದಿದ್ದಾರೆ. ಇದರ ಜೊತೆಗೆ ವಾಟ್ಸಾಪ್ ಮೂಲಕ ಈ ಪತ್ರವನ್ನು ಎಲ್ಲರೂ ಶೇರ್ ಮಾಡುವಂತೆಯೂ ಅವರು ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ. ಈ ವಿಷಯ ತಿಳಿದ ಬಂಟ ಸಮಾಜದ ಮುಖಂಡರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಸಂತ್ರಸ್ತ ಕುಟುಂಬವನ್ನು ಶುಕ್ರವಾರ ಕಾರ್ಕಳ ತಹಶೀಲ್ದಾರ್ ಕರೆಯಿಸಿಕೊಂಡು ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿದ್ದಾರೆ.












Click it and Unblock the Notifications