'ಸೂಟ್ ಕೇಸ್ ಆರೋಪದ ಬಗ್ಗೆ ಸಿಬಿಐ ತನಿಖೆಗೆ ಎಚ್ ಡಿಕೆ ಒಪ್ತಾರಾ?'
ತುಮಕೂರು, ಜುಲೈ 24: ನಾನು ಕಾಂಗ್ರೆಸ್ ನವನು. ಡಿಸೆಂಬರ್ ನಲ್ಲಿ ಅಧಿಕೃತವಾಗಿ ಪಕ್ಷ ಸೇರಲಿದ್ದೇನೆ. ರಾಹುಲ್ ಗಾಂಧಿ ಅವರ ಜತೆಗೆ ಈಗಾಗಲೇ ಮಾತುಕತೆಯಾಗಿದೆ. ಪಕ್ಷ ಸೇರುವುದಕ್ಕೆ ಅವರು ಹಸಿರು ನಿಶಾನೆ ನೀಡಿದ್ದಾರೆ ಎಂದು ಜೆಡಿಎಸ್ ನ ಭಿನ್ನಮತೀಯ ಶಾಸಕ ಜಮೀರ್ ಅಹಮದ್ ತುಮಕೂರಿನಲ್ಲಿ ಹೇಳಿದ್ದಾರೆ.
'ಚಾಮರಾಜಪೇಟೇಲಿ JDS ಗೆದ್ದರೆ ನನ್ನ ರುಂಡ ಕತ್ತರಿಸಿ ಇಡುತ್ತೇನೆ'
ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ನಿಂಗಪ್ಪ ಅವರ ಮನೆಗೆ ಭೇಟಿ ನೀಡಿದ್ದ ಅವರು, ನಾವು ಏಳು ಮಂದಿ ಭಿನ್ನಮತೀಯ ಶಾಸಕರು ಕಾಂಗ್ರೆಸ್ ಸೇರಲಿದ್ದೇವೆ ಎಂದು ಹೇಳಿದರು.
ಜೆ.ಡಿ.ಎಸ್ ನಲ್ಲಿ ಸೂಟ್ ಕೇಸ್ ಸಂಸ್ಕೃತಿ ಇರುವುದು ನಿಜ. ಪ್ರಜ್ವಲ್ ರೇವಣ್ಣ ಅವರ ಬಾಯಿಂದ ದೇವರೇ ನಿಜ ಹೇಳಿಸಿದ್ದಾನೆ. ಸೂಟ್ ಕೇಸ್ ತೆಗೆದುಕೊಳುತ್ತಿದ್ದರು ಎಂದು ಅತೃಪ್ತರ ಮೇಲೆ ಕುಮಾರಸ್ವಾಮಿ ಗೂಬೆ ಕೂರಿಸುತ್ತಿದ್ದಾರೆ ಎಂದು ಹೇಳಿದರು.
2006ರಿಂದ ಜೆಡಿಎಸ್ ನಲ್ಲಿ ಸೂಟ್ ಕೇಸ್ ಸಂಸ್ಕೃತಿ ಹೆಚ್ಚಾಗಿದೆ. ರಾಜೀವ್ ಚಂದ್ರಶೇಖರ್, ಎಂ.ಎಂ.ರಾಮಸ್ವಾಮಿ, ವಿಜಯ ಮಲ್ಯ, ಕುಪೇಂದ್ರ ರೆಡ್ಡಿ ಇವರನ್ನು ರಾಜ್ಯಸಭಾ ಸದಸ್ಯರಾಗಿ ಮಾಡಲು ಯಾರು ಸೂಟ್ ಕೇಸ್ ಪಡೆದರು ಅಂತ ಹೇಳಿ ಎಂದು ಸವಾಲೆಸೆದರು.
ಏ ಕ್ಯಾ ಜಮೀರ್ ಭಾಯ್, ನಿಮ್ಮನ್ನು ಬೆಳೆಸಿದ ದೇವೇಗೌಡರಿಗೇ ಚಾಲೆಂಜಾ!
ಈ ಬಗ್ಗೆ ಸಿಬಿಐ ತನಿಖೆಗೆ ಕುಮಾರಸ್ವಾಮಿ ಅವರು ಒಪ್ಪಿಕೊಳ್ಳುತ್ತಾರಾ? ನಾನು ಸೂಟ್ ಕೇಸ್ ಕೊಟ್ಟಿಲ್ಲ. ಪಕ್ಷದಲ್ಲಿ ದೇವೇಗೌಡರ ಮಾತು ನಡೆಯುತ್ತಿಲ್ಲ ಎಂದು ಅವರು ಹೇಳಿದರು.
ನಿಂಗಪ್ಪ ಅವರಿಗೆ ಬೆಂಬಲ ನೀಡಲು ಮನೆಗೆ ಭೇಟಿ ನೀಡಿದ್ದೇನೆ. ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸುತ್ತೇನೆ. ಜೆಡಿಎಸ್ ನ ಗೌರಿಶಂಕರ್ ನ ಸೋಲಿಸಲು ರಾಜಕೀಯ ತಂತ್ರ ಹೆಣೆಯುತ್ತೇವೆ ಎಂದು ಹೇಳಿದರು.