ಸಚಿವ ಸ್ಥಾನವನ್ನು ನಾನೇಕೆ ತ್ಯಾಗ ಮಾಡಬೇಕು; ಸಚಿವೆ ಶಶಿಕಲಾ ಜೊಲ್ಲೆ
ತುಮಕೂರು, ನವೆಂಬರ್ 26: ಸಚಿವ ಸಂಪುಟದಲ್ಲಿ ನಾನೊಬ್ಬಳೇ ಮಹಿಳಾ ಮಂತ್ರಿಯಾಗಿದ್ದೇನೆ. ನನ್ನ ಕೆಲಸವನ್ನು ನಾನು ಸಮರ್ಪಕವಾಗಿ ನಿರ್ವಹಿಸುತ್ತಿದ್ದೇನೆ. ಹೈಕಮಾಂಡ್ ನಿಂದ ಯಾವುದೇ ಸೂಚನೆ ಬಂದರೂ ಅದಕ್ಕೆ ನಾನು ಸಿದ್ಧ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ತುಮಕೂರಿನಲ್ಲಿ ಗುರುವಾರ ಮಾತನಾಡಿದ ಅವರು, "ಸಚಿವ ಸ್ಥಾನವನ್ನು ನಾನು ಏಕೆ ತ್ಯಾಗ ಮಾಡಬೇಕು? ಸದ್ಯಕ್ಕೆ ನಾನೊಬ್ಬಳೇ ಮಹಿಳಾ ಮಂತ್ರಿಯಾಗಿದ್ದೇನೆ. ಸಂಘಟನೆಗಳ ಮೂಲಕ ಗುರುತಿಸಿಕೊಂಡು ಸಚಿವ ಸ್ಥಾನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ" ಎಂದು ತಿಳಿಸಿದರು.
ನೆಪ ಒಂದು, ಉದ್ದೇಶ ಮತ್ತೊಂದು: ದೆಹಲಿಗೆ ಮತ್ತಷ್ಟು ಸಚಿವ ಸ್ಥಾನದ ಆಕಾಂಕ್ಷಿಗಳ ದೌಡು?
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಸಚಿವ ಸಂಪುಟದಿಂದ ಕೈ ಬಿಡುವ ಮಾತುಗಳು ಕೇಳಿಬಂದಿದ್ದವು. ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವರಾಗಿರುವ ಶಶಿಕಲಾ ಜೊಲ್ಲೆ ಅಧಿಕಾರ ಸ್ವೀಕರಿಸಿ ಒಂದು ವರ್ಷ ಕಳೆದಿದ್ದು, ಯಾವುದೇ ಬದಲಾವಣೆ ಆಗಿಲ್ಲ. ನಿರೀಕ್ಷೆಗೆ ತಕ್ಕಂತೆ ಇಲಾಖೆಯಲ್ಲಿ ಪ್ರಗತಿ ಸಾಧಿಸಲು ವಿಫಲರಾಗಿದ್ದಾರೆ. ಹೀಗಾಗಿ ಸಚಿವ ಸಂಪುಟದಿಂದ ಶಶಿಕಲಾ ಜೊಲ್ಲೆಗೆ ಕೋಕ್ ಸಿಗುವ ಸಾಧ್ಯತೆ ಎನ್ನಲಾಗಿತ್ತು.
ಈ ಕುರಿತು ಶಶಿಕಲಾ ಜೊಲ್ಲೆ ಕೂಡಾ ದೆಹಲಿಗೆ ಹೋಗಿ ಬಂದಿದ್ದಾರೆ ಎನ್ನಲಾಗಿದೆ. "ಯಡಿಯೂರಪ್ಪನವರ ಸಂಪುಟದಲ್ಲಿರುವ ಏಕೈಕ ಮಹಿಳೆ ನಾನು. ನನ್ನನ್ನು ಕೈಬಿಡುವುದಿಲ್ಲ ಎನ್ನುವ ನಂಬಿಕೆಯಿದೆ. ಸ್ಥಾನ ಬಿಡಬೇಕು ಎನ್ನುವ ನಿರ್ದೇಶನವೂ ಪಕ್ಷದಿಂದ ನನಗೆ ಬಂದಿಲ್ಲ" ಎಂದು ಹೇಳಿಕೆ ನೀಡಿದ್ದಾರೆ.
ಇಲ್ಲಿಯವರೆಗೂ ಹೈಕಮಾಂಡ್ ನಿಂದ ಯಾವುದೇ ರೀತಿಯಲ್ಲಿಯೂ ಸಚಿವ ಸ್ಥಾನವನ್ನು ತ್ಯಾಗ ಮಾಡುವ ಬಗ್ಗೆ ಸೂಚನೆ ದೊರೆತಿಲ್ಲ. ಹೈಕಮಾಂಡ್ ನಿಂದ ಯಾವುದೇ ಸೂಚನೆ ಬಂದರೂ ಅದಕ್ಕೆ ನಾನು ಸಿದ್ಧಳಿದ್ದೇನೆ" ಎಂದು ತಿಳಿಸಿದ್ದಾರೆ.