ಶಿರಾ ಉಪಚುನಾವಣೆ; ಮಾಜಿ ಶಾಸಕ ಬಿ.ಸುರೇಶ್ ಗೌಡ ಅವರಿಗೆ ತರಾಟೆ
ತುಮಕೂರು, ಸೆಪ್ಟೆಂಬರ್ 23: ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರಂಗೇರುತ್ತಿದ್ದು, ಬೂತ್ ಮಟ್ಟದ ಸಭೆಯಲ್ಲಿ ಮತ ಕೇಳಲು ಬಂದ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್ ಗೌಡ ಅವರಿಗೆ ಮತದಾರರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಶಿರಾ ತಾಲೂಕಿನ ಬಂದಗುಂಟೆ ಗ್ರಾಮಕ್ಕೆ ಬಂದ ಮಾಜಿ ಶಾಸಕ ಹಾಗೂ ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ ಅವರಿಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡ ಘಟನೆ ಸಂಭವಿಸಿದೆ.
ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ಬಂದಗುಂಟೆ ಗ್ರಾಮದಲ್ಲಿ ಜನಾಭಿಪ್ರಾಯ ಸಂಗ್ರಹಿಸಲು ಬೂತ್ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳಲು ಸುರೇಶ್ ಗೌಡ ಬಂದಿದ್ದರು. ಈ ವೇಳೆ ಆಕ್ರೋಶಗೊಂಡ ಕೆಲವು ಸ್ಥಳೀಯರು, ಮದಲೂರು ಕೆರೆಗೆ ಮೊದಲು ನೀರು ಹರಿಸಿ. ಆನಂತರ ಮಾತನಾಡಿ ಎಂದಿದ್ದಾರೆ. ಇದಲ್ಲದೆ ಗ್ಯಾಸ್ ಸಬ್ಸಿಡಿ ಯಾಕೆ ವಾಪಸ್ ತೆಗೆದುಕೊಂಡಿದ್ದೀರಾ? ರೈತರಿಗೆ ನಿಮ್ಮ ಸರ್ಕಾರದಿಂದ ಅನುಕೂಲ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮ ಸರ್ಕಾರ ಇದ್ದರೂ ನಮ್ಮೂರಿನ ಕೆರೆಗೆ ನೀರು ಹರಿಸಿಲ್ಲ. ಮೊದಲು ಕೆರೆಗೆ ನೀರು ಬಿಡಿಸಿ ಎಂದು ಮಾಜಿ ಶಾಸಕರಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.

ಇತ್ತ ಮಾಜಿ ಶಾಸಕ ಸುರೇಶ್ ಗೌಡ ತಾಳ್ಮೆಯಿಂದಲೇ ಜನರ ಆಕ್ರೋಶದ ಮಾತುಗಳನ್ನು ಆಲಿಸಿದರು. ಬಳಿಕ, ನಿಮಗೆ ನೀರು ಬಿಡಿಸಬೇಕು ಅಷ್ಟೇ ಅಲ್ವ, ಎನ್ನುವ ಮೂಲಕ ನಿಮ್ಮ ಬೇಡಿಕೆ ಶೀಘ್ರದಲ್ಲೇ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು. ಈ ದೃಶ್ಯವನ್ನು ಅಲ್ಲೇ ಇದ್ದ ಕೆಲವರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.












Click it and Unblock the Notifications