ಸಿದ್ದರಾಮಯ್ಯ ಸಂಧಾನ ಫಲ: ಮುದ್ದಹನುಮೇಗೌಡ ನಾಮಪತ್ರ ವಾಪಸ್ಗೆ ಒಪ್ಪಿಗೆ ?
Recommended Video

ತುಮಕೂರು, ಮಾರ್ಚ್ 28: ಕಾಂಗ್ರೆಸ್ನಲ್ಲಿ ಬಂಡಾಯವೆದ್ದು, ಮೈತ್ರಿ ಪಕ್ಷದ ಅಭ್ಯರ್ಥಿ ಎಚ್.ಡಿ. ದೇವೇಗೌಡ ವಿರುದ್ಧ ಸ್ಪರ್ಧಿಸಿಯೇ ಸಿದ್ಧ ಎಂದು ತೊಡೆತಟ್ಟಿದ್ದ ಸಂಸದ ಮುದ್ದಹನುಮೇಗೌಡ, ಅಖಾಡದಿಂದ ಹಿಂದಕ್ಕೆ ಸರಿದಿದ್ದಾರೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳಯದಲ್ಲಿ ನಡುಕ ಹುಟ್ಟಿಸಿದ್ದ ಮುದ್ದಹನುಮೇಗೌಡ ಅವರ ಮನವೊಲಿಸುವುದರಲ್ಲಿ ಸಿಎಲ್ಪಿ ನಾಯಕ ಸಿದ್ದರಾಮಯ್ಯ ಕೊನೆಗೂ ಯಶಸ್ವಿಯಾಗಿದ್ದಾರೆ. ಇದರಿಂದ ಮೈತ್ರಿಪಕ್ಷಗಳು ನೆಮ್ಮದಿಯ ಉಸಿರುಬಿಡುವಂತಾಗಿದೆ.
ಗ್ರೆಸ್ನ ಬಂಡಾಯ ಅಭ್ಯರ್ಥಿಗಳಾದ ಮುದ್ದಹನುಮೇಗೌಡ ಮತ್ತು ಕೆ.ಎನ್. ರಾಜಣ್ಣ ಅವರಿಬ್ಬರೊಂದಿಗೂ ಸಿದ್ದರಾಮಯ್ಯ ಅವರು ತಮ್ಮ ನಿವಾಸ ಕಾವೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜತೆಗೂಡಿ ಸತತ ಸಭೆ ನಡೆಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಪಕ್ಷದ ಮೈತ್ರಿ ಅಭ್ಯರ್ಥಿಯ ಎದುರು ಸ್ಪರ್ಧಿಸುವುದರಿಂದ ಪಕ್ಷಕ್ಕೆ ಆಗುವ ಹಾನಿ ಮತ್ತು ಫಲಿತಾಂಶದ ಮೇಲಿನ ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿದ್ದಾರೆ. ಕೊನೆಗೂ ಸಿದ್ದರಾಮಯ್ಯ ಅವರ ಒತ್ತಡಕ್ಕೆ ಮಣಿದು ಮುದ್ದಹನುಮೇಗೌಡ ನಾಮಪತ್ರ ಹಿಂದಕ್ಕೆ ಪಡೆಯಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದರಿಂದ ತೀವ್ರ ಇಕ್ಕಟ್ಟಿಗೆ ಸಿಲುಕಿದ್ದ ಕಾಂಗ್ರೆಸ್ ಸಮಾಧಾನಪಡುವಂತಾಗಿದೆ. ತನ್ನ ಹಿಡಿತದಲ್ಲಿದ್ದ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡುವ ಅನಿವಾರ್ಯತೆಗೆ ಸಿಲುಕಿದ್ದ ಕಾಂಗ್ರೆಸ್, ತನ್ನದೇ ಪಕ್ಷದ ಬಂಡಾಯ ಅಭ್ಯರ್ಥಿಯ ಸವಾಲಿನಿಂದ ಸಂಕಷ್ಟಕ್ಕೆ ಒಳಗಾಗಿತ್ತು. ಯಾರ ಮಾತಿಗೂ ಜಗ್ಗುವುದಿಲ್ಲ ಎಂದಿದ್ದ ಮುದ್ದಹನುಮೇಗೌಡ ಅವರನ್ನು ಸಿದ್ದರಾಮಯ್ಯ ಮನವೊಲಿಸುವಲ್ಲಿ ಸಫಲರಾಗಿದ್ದಾರೆ.

ನಾಮಪತ್ರ ತಿರಸ್ಕೃತವಾಗಿತ್ತು
ಇದಕ್ಕೂ ಮೊದಲು ಕಾಂಗ್ರೆಸ್ ಅಭ್ಯರ್ಥಿಯಾಗಿ ಮುದ್ದಹನುಮೇಗೌಡ ಅವರು ಸಲ್ಲಿಸಿದ್ದ ನಾಮಪತ್ರ ತಿರಸ್ಕೃತವಾಗಿತ್ತು. ಕಾಂಗ್ರೆಸ್ ಪಕ್ಷದ ಬಿಫಾರಂ ಸಲ್ಲಿಸಲು ವಿಫಲರಾಗಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅವರು ಸಲ್ಲಿಸಿದ್ದ ನಾಮಪತ್ರ ತಿರಸ್ಕಾರಗೊಂಡಿತ್ತು. ಆದರೆ, ಅದರ ಜತೆಗೆ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾ ಅಧಿಕಾರಿಗಳು ಅಂಗೀಕರಿಸಿದ್ದರು.

ದೇವೇಗೌಡರ ಹಾದಿ ಸುಗಮ
ಮುದ್ದ ಹನುಮೇಗೌಡ ಅವರೊಂದಿಗೆ ಸಿದ್ದರಾಮಯ್ಯ ನಡೆಸಿದ ಸಂಧಾನ ಮಾತುಕತೆ ಯಶಸ್ವಿಯಾಗಿರುವುದು ಮುಖ್ಯವಾಗಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರಲ್ಲಿ ನಿರಾಳತೆ ಮೂಡಿಸಿದೆ. ಹಾಲಿ ಸಂಸದರಾದ ಮುದ್ದಹನುಮೇಗೌಡ ಅವರು ಸಾಕಷ್ಟು ಬೆಂಬಲ ಹೊಂದಿದ್ದರು. ಅವರ ಸ್ಪರ್ಧೆಯಿಂದ ಮತಗಳು ಒಡೆದು ಬಿಜೆಪಿ ಅಭ್ಯರ್ಥಿಗೆ ಲಾಭವಾಗುವ ಸಾಧ್ಯತೆ ಇತ್ತು. ಇದು ತುಮಕೂರು ಅಭ್ಯರ್ಥಿಯಾಗಿರುವ ದೇವೇಗೌಡರಿಗೆ ದೊಡ್ಡ ತಲೆನೋವಾಗಿತ್ತು.

ನಾಳೆ ಕೊನೆಯ ದಿನ
ಚುನಾವಣಾ ಆಯೋಗದ ವೇಳಾಪಟ್ಟಿಯ ಪ್ರಕಾರ ಅಭ್ಯರ್ಥಿಗಳು ನಾಮಪತ್ರವನ್ನು ಹಿಂದಕ್ಕೆ ಪಡೆದುಕೊಳ್ಳಲು ಮಾರ್ಚ್ 29 (ಶುಕ್ರವಾರ) ಕೊನೆಯ ದಿನವಾಗಿದೆ. ಮುದ್ದಹನುಮೇಗೌಡ ಅವರು ಇಂದು ಅಥವಾ ನಾಳೆ ನಾಮಪತ್ರ ಹಿಂದಕ್ಕೆ ಪಡೆದುಕೊಂಡು, ಮೈತ್ರಿ ಅಭ್ಯರ್ಥಿಗೆ ಎದುರಾಗಿರುವ ಸಂಕಟ ದೂರಮಾಡಲಿದ್ದಾರೆ ಎನ್ನಲಾಗಿದೆ.

ರಾಜಣ್ಣ ನಾಮಪತ್ರ ಹಿಂದಕ್ಕೆ
ಕಾಂಗ್ರೆಸ್ನ ಮತ್ತೊಬ್ಬ ಬಂಡಾಯ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಕೆ.ಎನ್. ರಾಜಣ್ಣ ಕೂಡ ತಮ್ಮ ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳಲು ಒಪ್ಪಿಕೊಂಡಿದ್ದಾರೆ. ಮಧುಗಿರಿ ಕ್ಷೇತ್ರ ಮಾಜಿ ಶಾಸಕರಾದ ರಾಜಣ್ಣ, ಪಕ್ಷದ ವಿರುದ್ಧ ಅಸಮಾಧಾನಗೊಂಡು ಕಣಕ್ಕೆ ಇಳಿದಿದ್ದರು. ಈಗ ದೇವೇಗೌಡರಿಗೆ ಇದ್ದ ಇಬ್ಬರು ಪ್ರಮುಖ ಎದುರಾಳಿಗಳು ಕಣದಿಂದ ಹಿಂದಕ್ಕೆ ಸರಿದಂತಾಗಿದೆ. ಬಿಜೆಪಿಯ ಜಿ.ಎಸ್. ಬಸವರಾಜ್ ಮತ್ತು ದೇವೇಗೌಡ ಅವರ ನಡುವೆ ಇಲ್ಲಿ ನೇರ ಹಣಾಹಣಿ ನಡೆಯಲಿದೆ.












Click it and Unblock the Notifications