ತುಮಕೂರು ಮಠದ ಆನೆ ಕಿಡ್ನಾಪ್ ಯತ್ನ; ಏನಿದು ವೈರಲ್ ಸುದ್ದಿ!
ತುಮಕೂರು, ಜನವರಿ 03; 'ತುಮಕೂರಿನ ಕರಿಬಸವ ಸ್ವಾಮಿ ಮಠದ ಆನೆ ಲಕ್ಷ್ಮೀ ಅಪಹರಣ ಯತ್ನ' ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಸುದ್ದಿ ಇದು. ಆನೆ ಅಪಹರಣದ ಬಗ್ಗೆ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಆದರೆ ಕಿಡ್ನಾಪ್ ಮಾಡಲು ಪ್ರಯತ್ನ ನಡೆದಿರುವುದು ಸತ್ಯ.
ಡಿಸೆಂಬರ್ 31ರಂದು ಮಾವುತರ ಜೊತೆ ಸೌಮ್ಯ ಸ್ವಭಾವದ ಆನೆ ಲಕ್ಷ್ಮೀ ಲಾರಿ ಏರಿತ್ತು. ಆದರೆ ದಾಬಸ್ಪೇಟೆ ಬಳಿ ಲಾರಿಯಲ್ಲಿದ್ದ ಮಾವುತರ ಮೇಲೆ ಹಲ್ಲೆ ಮಾಡಿ ಆನೆಯನ್ನು ಅಪಹರಣ ಮಾಡಲು ಪ್ರಯತ್ನ ನಡೆಸಲಾಗಿದೆ.
ವಿಡಿಯೋ; ಶಾಲೆ ಆರಂಭ, ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ ಆನೆ
ಕುಣಿಗಲ್ ಬಳಿಯ ನಾರಸಂದ್ರ ಗ್ರಾಮದಲ್ಲಿ ಕರಿಬಸವ ಸ್ವಾಮಿ ಮಠದ ಆನೆ ಪತ್ತೆಯಾಗಿದೆ. ಆನೆಯನ್ನು ಭಕ್ತರ ಸಹಾಯದಿಂದ ಮಠಕ್ಕೆ ವಾಪಸ್ ಕರೆತರಲಾಗಿದ್ದು, ಈಗ ಅದು ಆರೋಗ್ಯವಾಗಿ ಸುರಕ್ಷಿತವಾಗಿದೆ.
ದುಬಾರೆಯ 'ಕುಶ' ಬಂಧ ಮುಕ್ತ; ಮತ್ತೆ ಕಾಡಿಗೆ ಹೋದ ಆನೆ!
ಏನಿದು ಘಟನೆ?; ತುಮಕೂರು ತಾಲೂಕಿನ ಕರಿಬಸವ ಸ್ವಾಮಿ ಮಠದ ಆನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಆನೆ ಬ್ರೋಕರ್ಗಳ ಜೊತೆ ಸೇರಿ ಗುಜರಾತ್ನ ಸರ್ಕಸ್ ಕಂಪನಿಗೆ ಮಾರಾಟ ಮಾಡಲು ಯತ್ನಿಸಿದ್ದಾರೆ ಎಂಬುದು ಆರೋಪ. ಇದಕ್ಕಾಗಿಯೇ ಆನೆಯನ್ನು ಅಪಹರಣ ಮಾಡಲು ಪ್ರಯತ್ನ ನಡೆಸಲಾಗಿದೆ.
ಕುಶ ಆನೆ ಮರಳಿ ಕಾಡಿಗೆ; ಸಚಿವ ಅರವಿಂದ ಲಿಂಬಾವಳಿ
ಕರಿಬಸವ ಸ್ವಾಮಿ ಮಠದ ಸೇರಿದಂತೆ ಉರವಕೊಂಡ ಮಠದ ಉತ್ತರಾಧಿಕಾರಿ ಕಲ್ಯಾಣ ಸ್ವಾಮೀಜಿ ಮಾಧ್ಯಮಗಳ ಜೊತೆ ಘಟನೆ ಬಗ್ಗೆ ಮಾತನಾಡಿದ್ದಾರೆ, "ಕಳೆದ ನಾಲ್ಕು ತಿಂಗಳಿನಿಂದ ಆನೆಯನ್ನು ಮಾರಾಟ ಮಾಡಲು ಹುನ್ನಾರ ನಡೆಸಲಾಗುತ್ತಿತ್ತು" ಎಂದು ಆರೋಪಿಸಿದ್ದಾರೆ.
"ಆನೆಯ ಬ್ರೋಕರ್ಗಳು ಆನೆಗೆ ಭಿಕ್ಷೆ ನೀಡುವ ರೀತಿ ಮಾಡಿ. ಅದರ ಫೋಟೋ ತೆಗೆದು ಪ್ರಾಣಿ ದಯಾ ಸಂಘದ ಮೂಲಕ ಅರಣ್ಯ ಇಲಾಖೆಗೆ ಸುಳ್ಳು ದೂರು ಕೊಡಿಸಿದ್ದಾರೆ. ಹಲವು ತಂತ್ರಗಳನ್ನು ಮಾಡಿ ಆನೆ ಮಾರಾಟಕ್ಕೆ ಪ್ರಯತ್ನ ಮಾಡಲಾಗಿದೆ" ಎಂದು ದೂರಿದ್ದಾರೆ.
ಆನೆ ಮಾರಾಟದ ಪ್ರಯತ್ನದಿಂದ ಬೇಸತ್ತಿದ್ದ ಮಠದ ಹಿರಿಯ ಗುರುಗಳು ಆನೆಯನ್ನು ನಾಲ್ಕು ತಿಂಗಳ ಹಿಂದೆ ಬಳ್ಳಾರಿ ಬಳಿಯ ಕಲ್ಯಾಣ ಸ್ವಾಮಿ ಮಠಕ್ಕೆ ಕಳಿಸಿದ್ದರು. ಡಿಸೆಂಬರ್ 16ರಂದು ಅರಣ್ಯ ಇಲಾಖೆ ಸಿಬ್ಬಂದಿ ತುಮಕೂರಿನ ಮಠಕ್ಕೆ ಬಂದು ಆನೆಗೆ ಚಿಕಿತ್ಸೆ ನೀಡಲು ಬನ್ನೇರುಘಟ್ಟಕ್ಕೆ ಕರೆದುಕೊಂಡು ಹೋಗಬೇಕು. ವಾಪಸ್ ಕರೆಸಿ ಎಂದು ಹೇಳಿದ್ದರು.
ಮಠಕ್ಕೆ ಬಂದಿದ್ದ ಆನೆಯನ್ನು ಡಿಸೆಂಬರ್ 31ರಂದು ಲಾರಿಯಲ್ಲಿ ಮಾವುತರ ಜೊತೆ ಬನ್ನೇರುಘಟ್ಟಕ್ಕೆ ಕಳಿಸಲಾಗಿದೆ. ಆನೆಯ ಹೊಟ್ಟೆಯಲ್ಲಿ ಚಿಕ್ಕ ಗೆಡ್ಡೆ ಇದೆ, ಚಿಕಿತ್ಸೆ ಬಳಿಕ ವಾಪಸ್ ಕರೆತರುತ್ತೇವೆ ಎಂದು ಅರಣ್ಯ ಇಲಾಖೆ ಸಿಬ್ಬಂದಿಯೇ ಆನೆಯನ್ನು ಲಾರಿಗೆ ಹತ್ತಿಸಿದ್ದರು.
ದಾಬಸ್ಪೇಟೆ ಬಳಿ ಲಾರಿ ಹತ್ತಿದ ನಾಲ್ವರು ಮಾವುತರ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿ ಅವರನ್ನು ವಾಪಸ್ ಕಳಿಸಿ ಲಾರಿ ಮತ್ತು ಆನೆಯ ಜೊತೆ ಪರಾರಿಯಾಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಅನುಮಾನಗೊಂಡು ಬನ್ನೇರುಘಟ್ಟದಲ್ಲಿ ಪರಿಶೀಲಿಸಿದಾಗ ಅಲ್ಲಿ ಆನೆ ಇರಲಿಲ್ಲ. ಮತ್ತೊಂದು ಕಡೆ ಲಾರಿ ಚಾಲಕನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆಗ ಏಟು ತಿಂದ ಮಾವುತರು ಮಠಕ್ಕೆ ಬಂದರು. ಆಗ ಆನೆ ಅಪಹರಣ ಆಗಿದ್ದು ಖಚಿತವಾಯಿತು.
ಬಳಿಕ ಲಾರಿ ಚಾಲಕನೇ ಕುಣಿಗಲ್ನ ನಾರಸಂದ್ರ ಗ್ರಾಮದ ಬಳಿ ಲಾರಿ, ಆನೆ ಇದೆ ಎಂದು ಮಠಕ್ಕೆ ಕರೆ ಮಾಡಿದ್ದ. ಭಕ್ತರ ಸಹಾಯದಿಂದ ಸ್ಥಳಕ್ಕೆ ತೆರಳಿ ಆನೆಯನ್ನು ಮಠಕ್ಕೆ ವಾಪಸ್ ಕರೆತರಲಾಗಿದೆ. ಆದರೆ ಈ ಘಟನೆ ಕುರಿತು ಎಲ್ಲೂ ದೂರು ದಾಖಲಾಗಿಲ್ಲ.
ಆನೆಯನ್ನು ಖರೀದಿ ಮಾಡುತ್ತೇವೆ ಎಂದವರು ಕೈಕೊಟ್ಟಿದ್ದಾರೆ. ಮಾವುತರು ಇಲ್ಲದೇ ಆನೆಯನ್ನು ನಿಯಂತ್ರಿಸಲು ಸಾಧ್ಯವಾಗದೇ ಕುಣಿಗಲ್ ಬಳಿ ಅದನ್ನು ಬಿಟ್ಟು ಪರಾರಿಯಾಗಿದ್ದಾರೆ.
ಆನೆಯನ್ನು ಲಾರಿಯಿಂದ ಇಳಿಸಲು ಜೆಸಿಬಿ ಸಹಾಯದಿಂದ ದಬ್ಬಲಾಗಿದ್ದು, ಆನೆ ಮೈಮೇಲೆ ಚಿಕ್ಕಪುಟ್ಟ ಗಾಯಗಳಾಗಿವೆ. ಲಕ್ಷ್ಮೀ ಹೆಸರಿನ ಈ ಆನೆ ತೀರಾ ಸೌಮ್ಯ ಸ್ವಾಭವದ್ದು. ತುಮಕೂರು ನಗರದಲ್ಲಿ ಆಗಾಗ ವಾಹನ ಸವಾರರು ಈ ಆನೆಯನ್ನು ನೋಡಿರುತ್ತಾರೆ.