ತುಮಕೂರು : ಮಠದ ಭಕ್ತನನ್ನು ಕೊಲೆ ಮಾಡಿದ್ದವ ಸಿಕ್ಕಿಬಿದ್ದ
ತುಮಕೂರು, ಫೆ. 24 : ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಆವರಣದಲ್ಲಿ ನಡೆದ ಕೊಲೆಯ ರಹಸ್ಯ ಬಯಲಾಗಿದೆ. ಹಣ ಮತ್ತು ಮೊಬೈಲ್ ಆಸೆಗಾಗಿ ಮಲಗಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚಾಮರಾಜನಗರ ಮೂಲದ ಚಿಕ್ಕಮಾದಪ್ಪ (23) ಎಂಬುವವರನ್ನು ಫೆ.9ರಂದು ಸಿದ್ದಗಂಗಾ ಮಠದ ಆವರಣದಲ್ಲಿರುವ ಶಾಲೆಯ ಕೊಠಡಿಯಲ್ಲಿ ಕೊಲೆ ಮಾಡಲಾಗಿತ್ತು. ಸದ್ಯ, ಕ್ಯಾತಸಂದ್ರದ ಪೊಲೀಸರು ಕೊಲೆ ಮಾಡಿದ ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. [ತುಮಕೂರು ಮಠದ ಆವರಣದಲ್ಲಿ ವ್ಯಕ್ತಿ ಕೊಲೆ]

ಬಂಧಿತ ಆರೋಪಿಯನ್ನು ಅನಂತಪುರ ಜಿಲ್ಲೆಯ ನಿವಾಸಿ ಕುಮಾರ್ (41) ಎಂದು ಗುರುತಿಸಲಾಗಿದೆ. ತುಮಕೂರಿನ ಹೋಟೆಲ್ನಲ್ಲಿ ಈತ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಚಿಕ್ಕಮಾದಪ್ಪನ ಬಳಿ ಇದ್ದ ಹಣ ಮತ್ತು ಮೊಬೈಲ್ ದೋಚುವ ಸಂದರ್ಭದಲ್ಲಿ ಅವನು ಕೂಗಿಕೊಂಡಿದ್ದರಿಂದ ಅವನನ್ನು ಕೊಲೆ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಮಠದಲ್ಲಿ ಜಾತ್ರೆಗಾಗಿ ಬಂದಿದ್ದ ಪ್ರವಾಸಿಗರ ಮಾಹಿತಿ ಕಲೆಹಾಕುತ್ತಿದ್ದ ಕುಮಾರ್ ಅವರಿಗೆ ಚಿಕ್ಕಮಾದಪ್ಪನ ಪರಿಚಯವಾಗಿತ್ತು. ವಿಕಲಚೇತನರಾದ ಅವರ ಬಳಿ ಹಣ ಮತ್ತು ಮೊಬೈಲ್ ಇರುವುದನ್ನು ಅರಿತಿದ್ದ ಕುಮಾರ್ ಅದನ್ನು ದೋಚಲು ಸಂಚು ರೂಪಿಸಿದ್ದ.
ಫೆ.8ರಂದು ರಾತ್ರಿ ಚಿಕ್ಕಮಾದಪ್ಪ ಮಲಗಿದ್ದ ಶಾಲೆಯ ಕೊಠಡಿಗೆ ತೆರಳಿದ್ದ ಆತ ಹಣ ಮತ್ತು ಮೊಬೈಲ್ ದೋಚಲು ಯತ್ನಿಸಿದ್ದ ಈ ಸಂದರ್ಭದಲ್ಲಿ ಆತ ಕೂಗಿಕೊಂಡಿದ್ದರಿಂದ ಕೋಪಗೊಂಡ ಆತ, ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ.
ಚಿಕ್ಕಮಾದಪ್ಪ ಪರ್ಸ್ ಮತ್ತು ಮೊಬೈಲ್ ಅನ್ನು ದೋಚಿ ಅಲ್ಲಿಂದ ಪರಾರಿಯಾಗಿದ್ದ. ತುಮಕೂರು ನಗರದಲ್ಲಿ ಅಮೀರ್ ಎಂಬುವರಿಗೆ 500 ರೂ.ಗೆ ಮೊಬೈಲ್ ಮಾರಾಟ ಮಾಡಿ, ಅಲ್ಲಿಂದ ಬಳ್ಳಾರಿಗೆ ಪರಾರಿಯಾಗಿದ್ದ. ಕ್ಯಾತಸಂದ್ರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications