ಸಮವಸ್ತ್ರದಲ್ಲಿ ಮದ್ಯ ಸೇವನೆ; ಮೂವರು ಪೊಲೀಸರು ಅಮಾನತು
ತುಮಕೂರು, ಡಿಸೆಂಬರ್ 24: ಸಮವಸ್ತ್ರದಲ್ಲಿದ್ದಾಗಲೇ ಮದ್ಯ ಸೇವನೆ ಮಾಡಿದ ಮೂವರು ಪೊಲೀಸರನ್ನು ಅಮಾನತು ಮಾಡಿ ತುಮಕೂರು ಎಸ್ಪಿ ಡಾ. ಕೆ. ವಂಶಿಕೃಷ್ಣ ಆದೇಶ ಹೊರಡಿಸಿದ್ದಾರೆ. ಪೊಲೀಸರು ಮದ್ಯ ಸೇವನೆ ಮಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಚಿಕ್ಕನಾಯಕನಹಳ್ಳಿ ಠಾಣೆ ಎಎಸ್ಐ ಶ್ರೀನಿವಾಸ್, ತುರುವೇಕೆರೆ ತಾಲೂಕು ದಂಡಿನಶಿವರ ಠಾಣೆ ಕಾನ್ಸ್ಟೇಬಲ್ ಪರಮೇಶ್ ಮತ್ತು ಸಂತೋಷ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತುಗೊಳಿಸಿದ್ದಾರೆ.
ಕುಣಿಗಲ್ ತಾಲೂಕಿನಲ್ಲಿ ಈ ಮೂವರು ಗ್ರಾಮ ಪಂಚಾಯಿತಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಚುನಾವಣಾ ಕೆಲಸ ಮುಗಿಸಿ ಮನೆಗೆ ಹೊರಟಿದ್ದರು. ಆಗ ಹೊಯ್ಸಳ ವಾಹನದಲ್ಲಿಯೇ ಕುಳಿತು ಮದ್ಯ ಸೇವಿಸಿದ್ದರು.

ಈ ವೇಳೆ ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯ ಯುವ ಘಟಕದ ಅಧ್ಯಕ್ಷ ರಘು ಜಾಣಗೆರೆ ನೋಡಿದ್ದರು. ಇದನ್ನು ಪ್ರಶ್ನಿಸಿದಾಗ ರಘು ಮತ್ತು ಪೊಲೀಸ್ ಸಿಬ್ಭಂದಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಪೊಲೀಸರ ನಡೆ ಕುರಿತು ವಿಡಿಯೋ ಮಾಡಿ ರಘು ಜಾಣಗೆರೆ ಸಾಮಾಜಿಕ ತಾಲತಾಣದಲ್ಲಿ ಹಾಕಿದ್ದರು. ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದರು. ರಘು ಅವರನ್ನು ಈ ಕುರಿತು ವಿಚಾರಣೆ ನಡೆಸಲು ಕುಣಿಗಲ್ ಪೊಲೀಸ್ ಠಾಣೆಗೆ ಕರೆದುಕೊಂಡು ಬರಲಾಗಿತ್ತು.
ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆಗ ಪೊಲೀಸರು ಮತ್ತು ಕರ್ನಾಟಕ ರಾಷ್ಟ್ರ ಸಮಿತಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿತ್ತು.












Click it and Unblock the Notifications