ಶಿರಾದಲ್ಲಿ ಬಿಜೆಪಿಯಿಂದ ಹಣ ಹಂಚಿಕೆ; ಆಯೋಗಕ್ಕೆ ಕಾಂಗ್ರೆಸ್ ದೂರು
ತುಮಕೂರು, ಅಕ್ಟೋಬರ್ 27: ತುಮಕೂರು ಜಿಲ್ಲೆಯ ಶಿರಾದಲ್ಲಿ ಬಿಜೆಪಿ ಮತದಾರರಿಗೆ ಹಣ ಹಂಚುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ನವೆಂಬರ್ 3ರಂದು ಶಿರಾ ಉಪ ಚುನಾವಣೆ ನಡೆಯಲಿದ್ದು, 10ರಂದು ಫಲಿತಾಂಶ ಪ್ರಕಟವಾಗಲಿದೆ.
ಮಂಗಳವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ನೇತೃತ್ವದ ನಿಯೋಗ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಶಿರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ಮತ್ತವರ ಬೆಂಬಲಿಗರ ಪರವಾಗಿ ಹಣ ಹಂಚಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದೆ.
ಶಿರಾ ಉಪ ಚುನಾವಣೆ; ಪಕ್ಷದ ಗೆಲುವಿಗೆ ವ್ಯೂಹ ರಚಿಸಿದ ದೇವೇಗೌಡರು!
ಹಾಸನದ ಶಾಸಕರಾದ ಪ್ರೀತಂಗೌಡ ಕಳುಹಿಸಿದ್ದಾರೆ ಎಂದು ಮತದಾರರಿಗೆ ಹಣ ವಿತರಿಸಿ, ಮುಂದೆಯೂ ಹಣ ನೀಡುತ್ತೇವೆ ಎಂದು ಆಮಿಷ ಒಡ್ಡಲಾಗಿದೆ ಎಂದು ದೂರಿನಲ್ಲಿ ಕಾಂಗ್ರೆಸ್ ಆರೋಪಿಸಿದೆ. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ.
ಶಿರಾ ಉಪ ಚುನಾವಣೆ; ಬಿಜೆಪಿ ಗೆಲುವು ಅಷ್ಟು ಸುಲಭವಲ್ಲ!
ಶಿರಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಬಿರುಸಿನಿಂದ ಪ್ರಚಾರ ನಡೆಸುತ್ತಿದೆ. ಕ್ಷೇತ್ರದಲ್ಲಿ ಹಣವನ್ನು ಹಂಚಲಾಗುತ್ತಿದೆ, ಹೆಚ್ಚುವರಿ ವೀಕ್ಷಕರನ್ನು ನೇಮಕ ಮಾಡಬೇಕು ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಅವರು ಮಂಗಳವಾರ ಒತ್ತಾಯಿಸಿದ್ದರು.
ಶಿರಾ ಉಪ ಚುನಾವಣೆ ಚಿತ್ರಣ ಬದಲಿಸಿದ ಬಿ. ವೈ. ವಿಜಯೇಂದ್ರ!
ನವೆಂಬರ್ 3ರಂದು ಶಿರಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಡಾ. ರಾಜೇಶ್ ಗೌಡ, ಕಾಂಗ್ರೆಸ್ನಿಂದ ಟಿ. ಬಿ. ಜಯಚಂದ್ರ, ಜೆಡಿಎಸ್ನಿಂದ ಅಮ್ಮಾಜಮ್ಮ ಅಭ್ಯರ್ಥಿಗಳು.
2018ರ ಚುನಾವಣೆಯಲ್ಲಿ ಶಿರಾದಲ್ಲಿ ಜೆಡಿಎಸ್ನ ಬಿ. ಸತ್ಯನಾರಾಯಣ ಆಯ್ಕೆಯಾಗಿದ್ದರು. ಅವರ ಅಕಾಲಿಕ ಮರಣದಿಂದಾಗಿ ಉಪ ಚುನಾವಣೆ ಎದುರಾಗಿದೆ. ಬಿಜೆಪಿ ಕ್ಷೇತ್ರದಲ್ಲಿ ಗೆಲ್ಲಬೇಕು ಎಂದು ಪಣತೊಟ್ಟಿದ್ದು, ಬಿರುಸಿನ ಪ್ರಚಾರ ನಡೆಸುತ್ತಿದೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ, ಬಿಜೆಪಿ ರಾಜ್ಯಾ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಕ್ಷೇತ್ರದಲ್ಲಿಯೇ ವಾಸ್ತವ್ಯ ಹೂಡಿ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಪ್ರಚಾರ ಸಹ ಮುಂದುವರೆದಿದೆ.