ತುಮಕೂರು ಬಳಿ ಬಸ್ ನಲ್ಲಿ ಸಾಗಿಸುತ್ತಿದ್ದ 3 ಕೋಟಿ ರೂ. ಜಪ್ತಿ
Recommended Video

ತುಮಕೂರು, ಮೇ 7: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹಣದ ಹರಿವು ನಿಂತಿಲ್ಲ. ಭಾನುವಾರ ತಡ ರಾತ್ರಿ 1.30 ಸುಮಾರಿಗೆ ಖಾಸಗಿ ಬಸ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 3 ಕೋಟಿ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಬಸ್ ನಲ್ಲಿ ಹಣವನ್ನು ಸಾಗಿಸಲಾಗುತ್ತಿತ್ತು. ಈ ಸಂಬಂಧ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತುಮಕೂರಿನ ಕ್ಯಾತ್ಸಂದ್ರ ಟೋಲ್ ಬಳಿ ಬಸ್ ನಿಲ್ಲಿಸಿ ಹಣವನ್ನು ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ಬಸ್ ನಲ್ಲಿ ಇದ್ದವರನ್ನು ವಿಚಾರಣೆ ಮಾಡಲಾಗಿದೆ. ಆಗ ಅವರೆಲ್ಲರೂ ಈ ಹಣ ನಮ್ಮದಲ್ಲ ಎಂದಿದ್ದಾರೆ. ಹೀಗಾಗಿ ಹಣ ಯಾರಿಗೆ ಸೇರಿದ್ದು ಎಂಬುದು ತಿಳಿದು ಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಜನರಿಗೆ ಹಂಚಲು ಹಣವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದು ಮಾಮೂಲಿ. ಇದು ಕೂಡ ಅಭ್ಯರ್ಥಿಯೊಬ್ಬರಿಗೆ ಸೇರಿದ ಹಣವಾಗಿರಬಹುದು ಮತ್ತು ಜನರಿಗೆ ಹಂಚಲು ಕೊಂಡೊಯ್ಯುತ್ತಿರಬಹುದು ಎಂದುಕೊಳ್ಳಲಾಗಿದೆ.












Click it and Unblock the Notifications