ಆಧಾರ್ ಕಾರ್ಡ್ ಕಡ್ಡಾಯ, ತಿದ್ದುಪಡಿಗೆ ಜಾಗರಣೆಯೂ ಕಡ್ಡಾಯ
ತುಮಕೂರು, ಡಿಸೆಂಬರ್.16: ದೇಶದಲ್ಲಿ ಜನರಿಗೆ ಇದೀಗ ಎಲ್ಲದಕ್ಕೂ ಆಧಾರ್ ಕಾರ್ಡ್ ಕಡ್ಡಾಯ. ಸರ್ಕಾರಿ ಕಾರ್ಯಗಳಿಗಂತೂ ಆಧಾರ್ ಕಾರ್ಡ್ ಇಲ್ಲದಿದ್ದರೆ ನಡೆಯುವುದೇ ಇಲ್ಲ. ಇಂಥ ಪರಿಸ್ಥಿತಿ ನಿರ್ಮಿಸಿರುವ ಕೇಂದ್ರ ಸರ್ಕಾರ ಜನರ ಗೋಳನ್ನು ಮಾತ್ರ ಆಲಿಸುತ್ತಿಲ್ಲ. ರಾಜ್ಯದಲ್ಲೂ ಈಗದೇ ದುಸ್ಥಿತಿ ಎದುರಾಗಿದೆ.
ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ಆಧಾರ್ ಕಾರ್ಡ್ ತಿದ್ದುಪಡಿಗೆ ಜನರು ರಾತ್ರಿಯಿಡೀ ಮಕ್ಕಳನ್ನು ಕಟ್ಟಿಕೊಂಡು ಸಾಲುಗಟ್ಟಿ ನಿಲ್ಲುವಂತಾಗಿದೆ. ವಾರದಲ್ಲಿ ಒಂದೇ ದಿನ ಆಧಾರ್ ಕಾರ್ಡ್ ತಿದ್ದುಪಡಿಗೆ ಟೋಕನ್ ವಿತರಿಸುತ್ತಿದ್ದು, ಜನರನ್ನು ಚಿಂತಗೀಡು ಮಾಡಿದೆ.

ಕೊರಟಗೆರೆ ತಾಲೂಕು ಕಚೇರಿ ಬಳಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಚೇರಿಯಲ್ಲಿ ಪ್ರತಿ ಸೋಮವಾರ ಆಧಾರ್ ಕಾರ್ಡ್ ತಿದ್ದುಪಡಿಗೆ ಟೋಕನ್ ನೀಡಲಾಗುತ್ತಿದೆ. ಒಂದು ವಾರಕ್ಕೆ ಕೇವಲ 150 ಟೋಕನ್ ಗಳನ್ನು ನೀಡುತ್ತಿದ್ದು, ಅದಕ್ಕಾಗಿ ಜನರು ರಾತ್ರಿಯಿಡೀ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ಪ್ರತಿದಿನ 25 ಆಧಾರ್ ಕಾರ್ಡ್ ತಿದ್ದುಪಡಿ:
ಸೋಮವಾರ 150 ಟೋಕನ್ ಗಳನ್ನು ವಿತರಣೆ ಮಾಡಲಾಗುತ್ತಿದೆ. ವಾರದ ಆರು ದಿನಗಳಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಕೊಡಲಾಗುತ್ತಿದ್ದು, ಪ್ರತಿದಿನ ಕೇವಲ 25 ಮಂದಿಯ ಕಾರ್ಡ್ ಗಳನ್ನು ಮಾತ್ರ ತಿದ್ದುಪಡಿ ಮಾಡಲಾಗುತ್ತಿದೆ.

ದಿನವೊಂದಕ್ಕೆ 25 ಜನರ ಆಧಾರ್ ಕಾರ್ಡ್ ಗಳನ್ನಷ್ಟೇ ತಿದ್ದುಪಡಿ ಮಾಡುತ್ತಿರುವುದರಿಂದ ಸಾಕಷ್ಟು ಜನರಿಗೆ ಸೇವೆ ಸಿಗುತ್ತಿಲ್ಲ. ಈ ಬಗ್ಗೆ ಆದಷ್ಟು ಬೇಗ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಗಮನಹರಿಸಬೇಕು. ಜನರು ಎದುರಿಸುತ್ತಿರುವ ಸಮಸ್ಯೆಯನ್ನು ಬಗೆಹರಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.












Click it and Unblock the Notifications