ತುಮಕೂರು : ಆಂಬ್ಯುಲೆನ್ಸ್ ಬರಲಿಲ್ಲ, ಆಟೋದಲ್ಲೇ ಶವ ಸಾಗಣೆ
ತುಮಕೂರು, ಅ.16 : ಆಟೋದಲ್ಲಿಯೇ ಶವವನ್ನು ಸಾಗಣೆ ಮಾಡಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಆದರೆ, ತುಮಕೂರು ಜಿಲ್ಲಾಸ್ಪತ್ರೆಯ ಸಿಬ್ಬಂದಿ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಸೋಮವಾರ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶವವನ್ನು ಸಾಗಿಸಲು ಆಂಬ್ಯುಲೆನ್ಸ್ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ, ಮೂರು ಗಂಟೆ ಕಳೆದರೂ ಆಂಬ್ಯುಲೆನ್ಸ್ ಬಂದಿಲ್ಲ. ಹಾಗಾಗಿ ಆಟೋದಲ್ಲಿಯೇ ಶವವನ್ನು ಸಾಗಣೆ ಮಾಡಲಾಗಿದೆ.

ಆಟೋ ಚಾಲಕರಾದ ಶಿವಕುಮಾರ್ ಹೃದಯಾಘಾತದಿಂದ ಆಟೋದಲ್ಲಿಯೇ ಸಾವನ್ನಪ್ಪಿದ್ದರು. ಇತರ ಆಟೋ ಚಾಲಕರು ಜಿಲ್ಲಾಸ್ಪತ್ರೆಗೆ ಶವವನ್ನು ಸಾಗಣೆ ಮಾಡಲು ಆಂಬ್ಯುಲೆನ್ಸ್ಗಾಗಿ ಮನವಿ ಮಾಡಿದ್ದರು. ಎಷ್ಟು ಹೊತ್ತು ಕಾದರೂ ಆಂಬ್ಯುಲೆನ್ಸ್ ಬಂದಿಲ್ಲ.
ಆದ್ದರಿಂದ, ಆಟೋ ಚಾಲಕರು ಕುಳಿತ ಸ್ಥಿತಿಯಲ್ಲಿಯೇ ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ತಂದಿದ್ದಾರೆ. ಆದರೆ, ಜಿಲ್ಲಾಸ್ಪತ್ರೆ ಸಿಬ್ಬಂದಿ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಶವ ಸಾಗಣೆ ವಾಹನ ಕಳಿಸಲಾಗಿತ್ತು. ಆದರೆ, ಸಂಬಂಧಿಕರು ಆತುರದಿಂದ ಶವವನ್ನು ಆಟೋದಲ್ಲಿ ಸಾಗಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications