just in: ರಾಷ್ಟ್ರಧ್ಜಜಕ್ಕೆ ಅವಮಾನ: ಬಿ.ಸಿ ನಾಗೇಶ್ ವಿರುದ್ಧ ದೂರು
ತುಮಕೂರು, ಆಗಸ್ಟ್ 12: ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿರಂಗ ಯಾತ್ರೆಯಲ್ಲಿ ತ್ರಿವರ್ಣ ಧ್ವಜಕ್ಕಿಂತ ಎಬಿವಿಪಿ ಧ್ವಜವನ್ನು ಎತ್ತರದಲ್ಲಿ ಹಿಡಿದು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಯುವ ಕಾಂಗ್ರೆಸ್ ತಿಪಟೂರಿನಲ್ಲಿ ದೂರು ದಾಖಲಿಸಿದೆ.
75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಗುರುವಾರ ತಿಪಟೂರಿನಲ್ಲಿ 'ತಿರಂಗ ಯಾತ್ರೆ' ಹಮ್ಮಿಕೊಂಡಿತ್ತು. ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ಬಿ.ಸಿ. ನಾಗೇಶ್ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ನಡೆಸಿದ್ದಾರೆ. ಇದೇ ಯಾತ್ರೆಯಲ್ಲಿ ತ್ರಿವರ್ಣ ಧ್ವಜಕ್ಕಿಂತಲೂ ಎತ್ತರವಾಗಿ ಎಬಿವಿಪಿ ಧ್ವಜ ಹಾರಿಸಿರುವ ಫೋಟೋ ವೈರಲ್ ಆಗಿದೆ.
ಧ್ಜಜ ಸಂಹಿತೆ ಉಲ್ಲಂಘನೆ: ಬಿ. ಸಿ. ನಾಗೇಶ್ ವಿರುದ್ಧ ಅಸಮಾಧಾನ
ತುಮಕೂರು ಜಿಲ್ಲೆಯ ತಿಪಟೂರು ಡಿವೈಎಸ್ಪಿ ಕಚೇರಿಗೆ ಯುವ ಕಾಂಗ್ರೆಸ್ ಮುಖಂಡ ಬಿ.ವಿ. ಹರಿಪ್ರಸಾದ್ ದೂರು ನೀಡಿದ್ದಾರೆ.
ದೂರಿನಲ್ಲಿ "ಶಿಕ್ಷಣ ಸಚಿವರು ಹಾಗೂ ಶಾಸಕರು ಬಿ.ಸಿ. ನಾಗೇಶ್, ಶಾಲಾ ಸಿಬ್ಬಂದಿ ವರ್ಗ ಮತ್ತು ಮಕ್ಕಳನ್ನು ಬಳಸಿಕೊಂಡು ತ್ರಿವರ್ಣ ಧ್ವಜ ಅಂದರೆ ರಾಷ್ಟ್ರಧ್ವಜದ ಮೇಲೆ ಎಬಿವಿಪಿ ಧ್ವಜ ಹಾರಿಸಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುತ್ತಾರೆ. ಇದು ರಾಷ್ಟ್ರದ್ರೋಹಕ್ಕೆ ಸಮಾನವಾಗಿದೆ. ಶಾಲಾ ಮಕ್ಕಳನ್ನು ಇಂತಹ ದೇಶವಿರೋಧಿ ಚಟುವಟಿಕೆಗೆ ಬಳಸಿಕೊಳ್ಳಲಾಗಿದೆ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ" ಎಂದು ತಿಳಿಸಲಾಗಿದೆ.
ಘಟನೆಯನ್ನು ವಿಧಾನಪರಿಷತ್ ಪ್ರತಿಪ್ರಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಕೂಡ ಖಂಡಿಸಿ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.
"ತ್ರಿವರ್ಣ ಧ್ವಜದ ಮೇಲೆ ಭಾಗವಧ್ವಜ ಹಾರಿಸುವ ಮೂಲಕ ಧ್ವಜ ಸಂಹಿತೆಯನ್ನು ಉಲ್ಲಂಘನೆ ಮಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಕಾಲ ಖಾತೆ ಸಚಿವ ಬಿ. ಸಿ. ನಾಗೇಶ್ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು" ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ. ಕೆ. ಹರಿಪ್ರಸಾದ್ ಆಗ್ರಹಿಸಿದ್ದರು.
ಇದು ಆರ್ಎಸ್ಎಸ್ ಮನಸ್ಥಿತಿ ಎಂತದ್ದು ಎಂಬುದನ್ನು ತೋರಿಸುತ್ತದೆ ಎಂದಿದ್ದ ಅವರು, ತಪ್ಪು ಯಾರೇ ಮಾಡಿದರು ತಪ್ಪೆ. ಆದ್ದರಿಂದ ಧ್ಜಜ ಸಂಹಿತೆ ಉಲ್ಲಂಘನೆಯಡಿ ಸಚಿವ ಬಿ. ಸಿ. ನಾಗೇಶ್ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಅವರು ಒತ್ತಾಯಿಸಿದ್ದರು.