ಜನವರಿ 2ರಂದು ಸಿದ್ದಗಂಗಾ ಮಠಕ್ಕೆ ನರೇಂದ್ರ ಮೋದಿ ಭೇಟಿ
ತುಮಕೂರು, ಡಿಸೆಂಬರ್ 27: ಹೊಸ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಜನವರಿ 2 ಮತ್ತು 3ರಂದು ಭೇಟಿ ನೀಡಲಿರುವ ಮೋದಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಜನವರಿ 2ರ ಗುರುವಾರ ಬೆಂಗಳೂರಿಗೆ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಬಳಿಕ ತುಮಕೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಸಿದ್ದಗಂಗಾ ಮಠಕ್ಕೆ ಅವರು ಭೇಟಿ ನೀಡಲಿದ್ದಾರೆ. ಬಳಿಕ ರೈತರ ಸಮಾವೇಶ ಉದ್ದೇಶಿಸಿ ತುಮಕೂರಿನಲ್ಲಿ ಮಾತನಾಡಲಿದ್ದಾರೆ.
ಬೆಂಗಳೂರಿಗೆ ವಾಪಸ್ ಆಗಲಿರುವ ಮೋದಿ ನಗರದಲ್ಲಿ ನಡೆಯಲಿರುವ ಡಿಆರ್ಡಿಓ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಜನವರಿ 3ರ ಶುಕ್ರವಾರ ಬೆಂಗಳೂರು ನಗರದ ಹೊರವಲಯದ ಜಿಕೆವಿಕೆಯಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ 107ನೇ ಅಧಿವೇಶನದ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಅಲ್ಲಿಂದ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಲಿದ್ದು, ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೊದಲ ಬಾರಿಗೆ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಅವರು ವಾಸ್ತವ್ಯ ಹೂಡುವುದರಿಂದ ಪಕ್ಷದ ನಾಯಕರ ಜೊತೆ ಸಭೆಯನ್ನು ಸಹ ನಡೆಸುವ ನಿರೀಕ್ಷೆ ಇದೆ.












Click it and Unblock the Notifications