ಕೊರಟಗೆರೆ: ಸಿದ್ಧರಬೆಟ್ಟದ ಮಠದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಕ್ತರಲ್ಲಿ ಆತಂಕ
ತುಮಕೂರು, ಅಕ್ಟೋಬರ್ 20: ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಸಿದ್ಧರ ತಪೋಭೂಮಿಯಾದ ಸಿದ್ಧರಬೆಟ್ಟದ ಮಠದಲ್ಲಿ ಚಿರತೆ ಪ್ರತ್ಯಕ್ಷವಾಗಿ ಮಂಗಳವಾರ ಸಂಜೆ 7 ಗಂಟೆ ಸಮಯದಲ್ಲಿ ಹಸುವನ್ನು ಕೊಂದಿರುವ ಘಟನೆ ನಡೆದಿದೆ.
ಮಠದಲ್ಲಿ ಚಿರತೆ ಕಂಡು ಮಠದ ಆಡಳಿತ ವರ್ಗದವರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು. ಆದರೆ ಇದುವರೆಗೂ ಯಾವುದೇ ಅರಣ್ಯ ಅಧಿಕಾರಿಗಳಾಗಲಿ ಅವರ ಸಿಬ್ಬಂದಿಗಳಾಗಲಿ ಇಲ್ಲಿಗೆ ಬಂದಿಲ್ಲ. ಇದು ಅರಣ್ಯ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತಿದೆ.
ಈಗಾಗಲೇ ಎರಡು ದಿನದ ಹಿಂದೆ ಅಷ್ಟೇ ಎರಡು ನಾಯಿಮರಿಗಳನ್ನು ಹೊತ್ತೊಯ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಠಕ್ಕೆ ಬರುವ ಭಕ್ತಾದಿಗಳು ಹಾಗೂ ಮಠದಲ್ಲಿರುವ ಜನರಿಗೆ ಏನಾದರೂ ಹೆಚ್ಚು ಕಡಿಮೆಯಾದಲ್ಲಿ ಯಾರು ಹೊಣೆ. ಅರಣ್ಯ ಅಧಿಕಾರಿಗಳು ಮಠದಲ್ಲಿ ಇರುವ ಜನರ ಪ್ರಾಣದ ಜೊತೆ ಆಟವಾಡುತ್ತಾ ನಿರ್ಲಕ್ಷ್ಯ ವಹಿಸುತ್ತಿರುವುದು ಏಕೆ ಎಂದು ಮಠದ ಆಡಳಿತ ಮತ್ತು ಸಿಬ್ಬಂದಿ ವರ್ಗ ಆತಂಕ ತೋಡಿಕೊಂಡಿದ್ದಾರೆ.

ಇನ್ನಾದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಮಠದ ಕಡೆ ಗಮನಹರಿಸಬೇಕು. ಚಿರತೆ ಹಿಡಿಯಲು ಬೇಕಾದ ಸಲಕರಣೆಗಳನ್ನು ಮಠದ ಸುತ್ತಮುತ್ತಲು ಇಟ್ಟು ಚಿರತೆ ಹಿಡಿಯಬೇಕು ಎಂದು ಶ್ರೀಮಠದ ಆಡಳಿತ ಮತ್ತು ಸಿಬ್ಬಂದಿ ವರ್ಗ ತಿಳಿಸಿದರು.

ಸತ್ತ ಕರುವಿನ ಮುಂದೆ ತಾಯಿ ಹಸುವಿನ ಆಕ್ರಂದನ ಕಂಡ ಮಠದ ಸಿಬ್ಬಂದಿಯ ಕಣ್ಣಲ್ಲಿ ನೀರು ಮೂಡಿದೆ. ಈ ಮೂಕ ಪ್ರಾಣಿಯ ಆಕ್ರಂದನ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕೇಳಬಾರದೆ ಎಂದು ಮಠದ ಸಿಬ್ಬಂದಿ ತಮ್ಮ ಅಸಮಧಾನ ಹೊರಹಾಕಿದರು .












Click it and Unblock the Notifications