ಜಮೀರ್ ಗೆ ಟಾಂಗ್ ಕೊಟ್ಟು, ಅಂಬಿ ನನ್ನ ದೊಡ್ಡ ಅಣ್ಣ ಎಂದ ಕುಮಾರಸ್ವಾಮಿ
ತುಮಕೂರು, ಏಪ್ರಿಲ್ 24: "ಅಂಬರೀಶ್ ಅವರು ಯಾವುದೇ ಪಕ್ಷದಲ್ಲಿದ್ದರೂ ದೇವೇಗೌಡರ ವಿಚಾರವಾಗಿ, ಅವರ ಹೋರಾಟದ ಬಗ್ಗೆ ಬಿಚ್ಚು ಮನಸ್ಸಿನಿಂದಲೇ ಮಾತನಾಡಿದ್ದಾರೆ. ಅದು ಹಲವಾರು ವರ್ಷದಿಂದ ಗಮನಿಸಬಹುದು. ತುಂಬು ಹೃದಯದಿಂದ ಚರ್ಚೆ ಮಾಡುವುದರಲ್ಲಿ ಅಂಬರೀಶ್ ಮೊದಲನೇ ವ್ಯಕ್ತಿ" ಎಂದಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ.
ಇಲ್ಲಿ ಮಾತನಾಡಿದ ಅವರು, ಅಂಬರೀಶ್ ನಮ್ಮ ಹಿರಿಯ ಸಹೋದರ. ಅವರು ಯಾವುದೇ ಪಕ್ಷದಲ್ಲಿದ್ದರೂ ಅಜಾತಶತ್ರು. ಎಲ್ಲರ ಜತೆಗೂ ಅಂಬರೀಶ್ ಉತ್ತಮ ಸಂಬಂಧ ಹೊಂದಿದ್ದಾರೆ. ಅವರು ನಮ್ಮನ್ನು ಬೆಂಬಲಿಸುವ ನಿರ್ಧಾರ ಮಾಡಿದರೆ ಸ್ವಾಗತಿಸುತ್ತೇನೆ. ಆದರೆ ನಾನು ಒತ್ತಾಯ ಮಾಡುವುದಿಲ್ಲ ಎಂದು ಅವರು ಹೇಳಿದರು.
ಸಮಾಜದ ಎಲ್ಲಾ ವಿಚಾರಗಳನ್ನು ಅವರು ಗಮನಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದ ಒಳಿತಿನ ದೃಷ್ಟಿಯಿಂದ ಅವರು ಸೂಕ್ತ ನಿರ್ಧಾರ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ಇನ್ನು ಕುಮಾರಸ್ವಾಮಿ ಪ್ಯಾಂಟ್ ನೊಳಗೆ ಇರುವುದು ಖಾಕಿ ಚಡ್ಡಿ (ಬಿಜೆಪಿ ಹಾಗೂ ಆರೆಸ್ಸೆಸ್ ಬಗೆಗಿನ ಒಲವು) ಎಂಬ ಜಮೀರ್ ಅಹ್ಮದ್ ಅವರು ಮಾಡಿದ ವ್ಯಂಗ್ಯದ ವಿಚಾರವಾಗಿ ಪ್ರತಿಕ್ರಿಯಿಸಿದ ಎಚ್ ಡಿಕೆ, ಜಮೀರ್ ಒಬ್ಬ ಅನಾಗರಿಕ. ಅವರ ವಿಚಾರಕ್ಕೆಲ್ಲ ನಾನು ಉತ್ತರ ಕೊಡಲ್ಲ. ಕೆಸರಿಗೆ ಕಲ್ಲು ಹಾಕಿ ಮುಖಕ್ಕೆ ಸಿಡಿಸಿಕೊಳ್ಳಲ್ಲ ಎಂದರು.
ಎಚ್.ನಿಂಗಪ್ಪ ಕಾಂಗ್ರೆಸ್ ಸೇರ್ಪಡೆ
ತುಮಕೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದ ಎಚ್. ನಿಂಗಪ್ಪ ಅವರು ತಮಗೆ ಟಿಕೆಟ್ ಸಿಗದ ಪರಿಣಾಮ ಜೆಡಿಎಸ್ ಸೇರ್ಪಡೆಗೊಂಡರು. ಸುಮಾರು 1 ಗಂಟೆಗಳ ಕಾಲ ಕುಮಾರಸ್ವಾಮಿ ನಡೆಸಿದ ಮಾತುಕತೆ ಯಶಸ್ವಿಯಾಯಿತು. ಆ ಮೂಲಕ ಜೆಡಿಎಸ್ ಗೆ ಕ್ಷೇತ್ರದಲ್ಲಿ ಮತ್ತಷ್ಟು ಶಕ್ತಿ ಬಂದಂತಾಗಿದೆ. ಈ ಕ್ಷೇತ್ರದಿಂದ ಡಿ.ಸಿ.ಗೌರಿಶಂಕರ್ ಜೆಡಿಎಸ್ ಅಭ್ಯರ್ಥಿ.
ಈ ಸಂದರ್ಭದಲ್ಲಿ ಎಂಟಿ.ಕೃಷ್ಣಪ್ಪ, ಸುರೇಶ್ ಬಾಬು, ಡಿ ನಾಗರಾಜಯ್ಯ, ಶ್ರೀನಿವಾಸು, ಗೌರಿಶಂಕರ್ ಮತ್ತಿತರ ಮುಖಂಡರಿದ್ದರು.












Click it and Unblock the Notifications