ತುಮಕೂರು ಬಿಜೆಪಿಯಲ್ಲಿ ಭುಗಿಲೆದ್ದ ಆಕ್ರೋಶ, ಟಿಕೆಟ್ ಮಾರಿಕೊಂಡ ಆರೋಪ
ತುಮಕೂರು, ಏಪ್ರಿಲ್ 25 : "ಜಿ.ಎಸ್.ಬಸವರಾಜು ಬಿಜೆಪಿ ಟಿಕೆಟ್ ಗಳನ್ನು ಮಾರಾಟ ಮಾಡಿಕೊಂಡಿದ್ದಾರೆ. ಬೇರೆ ಪಕ್ಷಗಳೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ನಾನು ಜಿಲ್ಲೆಯಲ್ಲಿ ಚುನಾವಣೆ ಪ್ರಚಾರಕ್ಕೆ ಹೋಗುವುದಿಲ್ಲ" ಎಂದು ಶಿರಾ ಕ್ಷೇತ್ರದ ಬಿಜೆಪಿ ಟಿಕೆಟ್ ನಿಂದ ಸ್ಪರ್ಧೆ ಮಾಡಲು ನಿರಾಕರಿಸಿದ ಬಿ.ಕೆ.ಮಂಜುನಾಥ್ ಬುಧವಾರ ಆಕ್ರೋಶ ಹೊರಹಾಕಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡನೇ ಪಟ್ಟಿಯಲ್ಲಿ ನನಗೆ ಟಿಕೆಟ್ ಘೋಷಣೆ ಮಾಡಿದರು. ಬಿ ಫಾರಂ ನೀಡಲು ಹಿಂದೇಟು ಹಾಕಿದರು. ಬೆಂಗಳೂರಿಗೆ ಅಲೆದರೂ ನನಗೆ ಬಿ ಫಾರಂ ನೀಡಲಿಲ್ಲ. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದಾಗ ಅವರು ಮೌನದಿಂದ ಇದ್ದರು ಎಂದು ಹೇಳಿದರು.
ಆಗ ನನ್ನ ಆತ್ಮೀಯರೊಂದಿಗೆ ಚರ್ಚೆ ಮಾಡಿದೆ. ನನ್ನ ವಿರುದ್ಧ ಎಸ್.ಆರ್.ಗೌಡ ಬೆಂಬಲಿಗರು ಪ್ರತಿಭಟನೆ ಮಾಡಿದರು. ಇದರಿಂದಾಗಿ ಕುಟುಂಬದವರು ಹಾಗೂ ಸ್ನೇಹಿತರು ಸ್ಪರ್ಧೆ ಮಾಡಬೇಡಿ ಎಂದು ಸೂಚಿಸಿದರು. ಈಗಲೂ ನಾನು ಬಿಜೆಪಿಯಲ್ಲಿದ್ದೇನೆ. ನಾನು ಜಿಲ್ಲೆಯ ಹಿಂದುಳಿದ ವರ್ಗದ ನಾಯಕ. ಕಷ್ಟಪಟ್ಟು ಪಕ್ಷ ಬೆಳೆಸಿದ್ದೇನೆ. ಆದರೆ ಜಿಲ್ಲೆಯ ನಾಯಕರು ನನಗೆ ತೊಂದರೆ ಕೊಡ್ತಿದ್ದಾರೆ ಎಂದು ಆರೋಪಿಸಿದರು.

ಕೆಲವರು ನಮ್ಮವರೇ ನಮ್ಮನ್ನು ಸೋಲಿಸಲು ಹುನ್ನಾರ ನಡೆಸಿದರು. ಶಿರಾದಲ್ಲಿ ಪ್ರಭಾವಿ ರಾಜಕಾರಣಿಗಳ ಮುಂದೆ ಸಾಕಷ್ಟು ಕಷ್ಟಪಟ್ಟು ಪಕ್ಷ ಬೆಳೆಸಿದ್ದೇನೆ. ನನಗೆ ಬಿ ಫಾರಂ ವಿಳಂಬ ಆಗಲು ಜಿಲ್ಲೆಯ ನಾಯಕರೇ ನೇರ ಕಾರಣ. ಜಿಲ್ಲೆಯಲ್ಲಿ ಕುರುಬ ಸಮಾಜವನ್ನು ಅವಮಾನಿಸಿದ್ದಾರೆ. ಹುಲಿನಾಯ್ಕರ್ ಅವರನ್ನೂ ಬಲಿ ಕೊಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ತಮ್ಮ ತೆವಲಿಗಾಗಿ ನಮ್ಮ ಸಮಾಜವನ್ನು ಹಾಗೂ ನಾಯಕರನ್ನು ಬಲಿ ಕೊಡುತ್ತಿದ್ದಾರೆ. ಇವರ ಪಾಪ ಕೃತ್ಯಗಳನ್ನು ಎಲ್ಲರ ಮುಂದೆ ಬಹಿರಂಗ ಪಡಿಸುತ್ತೇನೆ ಎಂದು ಬಿ.ಕೆ.ಮಂಜುನಾಥ್ ಆಕ್ರೋಶ ಹೊರಹಾಕಿದರು.












Click it and Unblock the Notifications