ಡಿ. ಕೆ. ಶಿವಕುಮಾರ್ ಅಭಿಮಾನಿ ನಾನು ಎಂದ ಜೆಡಿಎಸ್ ಶಾಸಕ
ತುಮಕೂರು, ಸೆಪ್ಟೆಂಬರ್ 4: "ಡಿ. ಕೆ. ಶಿವಕುಮಾರ್ ಅವರ ರಾಜಕೀಯ ಇತಿಹಾಸ, ಶೈಲಿಯನ್ನು ನಾನು ಫಾಲೋ ಮಾಡುತ್ತಿದ್ದೇನೆ. ಇಂತಹ ನಾಯಕನನ್ನು ಬಂಧಿಸಿರುವುದು ರಾಜ್ಯಕ್ಕೆ ನಷ್ಟ. ಈ ಬೆಳವಣಿಗೆಯು ಬಿಜೆಪಿಯ ದ್ವೇಷದ ರಾಜಕಾರಣವನ್ನು ಪ್ರತಿಬಿಂಬಿಸುತ್ತದೆ" ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ- ಜೆಡಿಎಸ್ ಮುಖಂಡ ಡಿ. ಸಿ. ಗೌರಿಶಂಕರ್ ಆಕ್ರೋಶ ಹೊರಹಾಕಿದ್ದಾರೆ.
ತುಮಕೂರಿನ ಅಗಳಗುಂಟೆ ಕೆರೆಯು ಹೇಮಾವತಿ ನೀರಿನಿಂದ ತುಂಬಿದ್ದು, ಬುಧವಾರ ಕೆರೆಗೆ ಬಾಗಿನ ಅರ್ಪಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ. ಕೆ. ಶಿವಕುಮಾರ್ ಅವರ ಅಭಿಮಾನಿ ನಾನು ಎಂದು ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ಗೆ ಜಾಮೀನಿಲ್ಲ, ಸೆ.13 ರವರೆಗೆ ಇಡಿ ವಶಕ್ಕೆ
ಇನ್ನು ಪಕ್ಷಭೇದ ಮರೆತು, ವರಿಷ್ಠರ ಆದೇಶದಂತೆ ಡಿ. ಕೆ. ಶಿವಕುಮಾರ್ ಅವರ ಬೆಂಬಲಕ್ಕೆ ನಿಂತಿದ್ದೇವೆ. ಬಿಜೆಪಿ ಧೋರಣೆ ಖಂಡಿಸಿ ಪ್ರತಿಭಟನೆ ಮಾಡಿದ್ದೇವೆ. ಅವರ ಬಂಧನವು ಒಕ್ಕಲಿಗ ಸಮುದಾಯವನ್ನು ತುಳಿಯುತ್ತಿರುವುದನ್ನು ತೋರಿಸುತ್ತದೆ. ದೇವೇಗೌಡರನ್ನು ಸೋಲಿಸಿದರು, ಕುಮಾರಸ್ವಾಮಿ ಅವರನ್ನು ಫೋನ್ ಕದ್ದಾಲಿಕೆಯಲ್ಲಿ ಸಿಲುಕಿಸಿದರು. ಈಗ ಡಿ.ಕೆ. ಶಿವಕುಮಾರ್ ಅವರ ಬಂಧನ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರನ್ನು ಇ. ಡಿ. ಅಧಿಕಾರಿಗಳು ಬಂಧಿಸಿದ್ದು, ರಾಜ್ಯಾದ್ಯಂತ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಇದನ್ನು ವಿರೋಧಿಸಿ, ಪ್ರತಿಭಟನೆ ನಡೆಸುತ್ತಿದ್ದಾರೆ.