ಸಿಎಂ ಬದಲಾವಣೆ ವಿಚಾರ; ಕಾಂಗ್ರೆಸ್ ಶಾಸಕರ ಅಚ್ಚರಿ ಹೇಳಿಕೆ!
ರಾಜ್ಯದಲ್ಲಿ ಆಗಾಗ್ಗೆ ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಆಗಾಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಹೈಕಮಾಂಡ್ ಖಡಕ್ ಸೂಚನೆ ಕೊಟ್ಟ ಬಳಿಕ ಸದ್ಯ ಕಾಂಗ್ರೆಸ್ ನಾಯಕರು ಸಿಎಂ ಬದಲಾವಣೆ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ್ದಾರೆ. ಇದೀಗ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸಿಎಂ ಬದಲಾವಣೆ ಬಗ್ಗೆ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಮಾತನಾಡಿರುವ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್, ಮಾಧ್ಯಮಗಳು ಕೇಳ್ತಾರೆ ನಾಯಕರು ಮಾತಾಡ್ತಾರೆ. ಚಟ ಇರೋರು ಮಾತ್ರ ಮಾತನಾಡುತ್ತಿರುತ್ತಾರೆ. ಸಿಎಂ ಬದಲಾವಣೆ ಬಗ್ಗೆ ಮಾತನಾಡೋಕೆ ನಮಗೆ ಯೋಗ್ಯತೆ ಇದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಎಸ್ ಆರ್ ಶ್ರೀನಿವಾಸ್, "ಮುಖ್ಯಮಂತ್ರಿಯನ್ನು ಅಥವಾ ಪಕ್ಷದ ರಾಜ್ಯಾಧ್ಯಕ್ಷರನ್ನು ಬದಲಾಯಿಸಲು ನಮಗೆ ಆಗುತ್ತದಾ? ನಮ್ಮಿಂದ ಏನಾಗುತ್ತೆ ಅದನ್ನು ಮಾತ್ರ ಕೇಳಬೇಕು, ಕೆಲಸ ಮಾಡಬೇಕು, ನಮ್ಮ ಕೈಲಿ ಏನಾಗುತ್ತೆ ಅದನ್ನು ಕೇಳಿ" ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರನ್ನು ದುರ್ಬಳಕೆ ಮಾಡಿಕೊಳ್ತಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಎಸ್ ಆರ್ ಶ್ರೀನಿವಾಸ್, ಯಾರು ಏನು ಮಾಡಿಕೊಳ್ಳುತ್ತಿದ್ದಾರೆ ಗೊತ್ತಿಲ್ಲ. ಆದರೆ ಈ ಬಗ್ಗೆ ಮಾಧ್ಯಮದಲ್ಲಿ ಪದೇ ಪದೇ ಮಾತನಾಡುವುದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ. ಇದು ಪಕ್ಷದ ದೃಷ್ಟಿಯಿಂದ ಒಳ್ಳೆಉ ಬೆಳವಣಿಗೆ ಅಲ್ಲ ಎಂದರು.
ಎಲ್ಲದಕ್ಕೂ ಒಂದು ಮಿತಿ ಇದೆ
ಯಾರ್ಯಾರು ಮಾತಾಡ್ತಾರೋ ಗೊತ್ತಿಲ್ಲ, ಆದರೆ ಎಲ್ಲದಕ್ಕೂ ಒಂದು ಮಿತಿ ಎನ್ನುವುದು ಇರುತ್ತದೆ. ಒಂದು ಹಂತದವರೆಗೂ ಎಲ್ಲರೂ ಸಹಿಸಿಕೊಳ್ಳುತ್ತಾರೆ. ಆಮೇಲೆ ಏನು ಕ್ರಮ ಕೈಗೊಳ್ಳಬೇಕೋ ಕೈಗೊಳ್ತಾರೆ ಎಲ್ಲವನ್ನೂ ತಪ್ಪಿಸಿಕೊಳ್ಳಲು ಆಗಲ್ಲ. ನಾವೆಲ್ಲ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡೋರು. ಯಾರಿಗೆ ಏನು ಜವಾಬ್ದಾರಿ ವಹಿಸಿರುತ್ತಾರೆ ಅದನ್ನು ಮಾಡಿಕೊಂಡು ಹೋಗಬೇಕು ಎಂದು ಹೇಳಿದರು.
ಡಾ. ಜಿ ಪರಮೇಶ್ವರ್ ದೆಹಲಿಗೆ ಭೇಟಿ ನೀಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪರಮೇಶ್ವರ್ ಯಾಕೆ ಹೋದರು ಎನ್ನುವ ಬಗ್ಗೆ ನನಗೆ ಮಾಹಿತಿ ಇಲ್ಲ. ದೇವರು ಅವರಿಗೆ ಒಳ್ಳೆಯದು ಮಾಡಲಿ, ನಾನು ಈ ಬಗ್ಗೆ ಏನೂ ಮಾತನಾಡಲ್ಲ ಎಂದರು. ನಮ್ಮಲ್ಲಿ ಯಾವುದೇ ಬಣಗಳಿಲ್ಲ, ಎಲ್ಲರೂ ಪಕ್ಷದ ಹೈಕಮಾಂಡ್ ಹೇಳಿದ್ದನ್ನು ಪಾಲಿಸಬೇಕು ಎಂದರು.












Click it and Unblock the Notifications