ಸಿದ್ದಗಂಗಾ ಶ್ರೀಗಳಿಗೆ ಅನಾರೋಗ್ಯ; ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ರವಾನೆ
Recommended Video

ತುಮಕೂರು, ಸೆಪ್ಟೆಂಬರ್ 21: 'ನಡೆದಾಡುವ ದೇವರು' ಎಂದೇ ಖ್ಯಾತಿ ಗಳಿಸಿರುವ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಸೆ. 20ರ ರಾತ್ರಿ ಅಲ್ಪ ಏರುಪೇರು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಸೆ. 20ರ ರಾತ್ರಿಯೇ ಅನಾರೋಗ್ಯದಿಂದಾಗಿ ಶ್ರೀಗಳು ಬಳಲಿದ ಹಿನ್ನೆಲೆಯಲ್ಲಿ, ವೈದ್ಯರ ತಂಡವೊಂದು ರಾತ್ರಿಯೇ ಮಠಕ್ಕೆ ಆಗಮಿಸಿ ಶ್ರೀಗಳಿಗೆ ಚಿಕಿತ್ಸೆ ನೀಡಿದೆ. ಸೆ. 21ರ ಬೆಳಗ್ಗೆ ಹೊತ್ತಿಗೆ ಶ್ರೀಗಳು ಚೇತರಿಸಿಕೊಂಡಿದ್ದರು.

ಆದರೂ, ಮುನ್ನೆಚ್ಚರಿಕೆ ಕ್ರಮವಾಗಿ, ಸೆ. 21ರಂದು ಹೆಚ್ಚಿನ ತಪಾಸಣೆಗಾಗಿ ಶ್ರೀಗಳನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಅಗತ್ಯ ಬಿದ್ದಲ್ಲಿ ಶ್ರೀಗಳಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುವುದು ಎಂದು ಹೇಳಲಾಗಿದೆ.
ಇತ್ತೀಚೆಗೆ, ಶೀತ ಬಾಧೆಗೆ ಒಳಗಾಗಿದ್ದ ಶ್ರೀ ಶಿವಕುಮಾರ ಸ್ವಾಮಿಗಳು ಸೆ. 20ರ ರಾತ್ರಿ ಗಂಟಲು ನೋವು ಹಾಗೂ ಅಜೀರ್ಣದಿಂದ ಬಳಲಾರಂಭಿಸಿದರು. ಶ್ರೀಗಳ ಪರಿಚಾರಕರು ಇದನ್ನು ತಕ್ಷಣವೇ ಕಿರಿಯ ಶ್ರೀಗಳು ಹಾಗೂ ವ್ಯವಸ್ಥಾಪಕ ಮಂಡಳಿಗೆ ವಿಷಯ ತಿಳಿಸಿದ್ದರು.

ಮಠದಿಂದ ಕರೆ ಬಂದ ತಕ್ಷಣ ಡಾ. ಪರಮೇಶ್ವರ್ ಅವರ ನೇತೃತ್ವದ ಮೂವರು ವೈದ್ಯರ ತಂಡವೊಂದು ಮಠಕ್ಕೆ ತೆರಳಿ, ಶ್ರೀಗಳಿಗೆ ಗ್ಲೂಕೋಸ್ ಡ್ರಿಪ್ ಹಾಗೂ ಇನ್ನಿತರ ಚಿಕಿತ್ಸೆ ನೀಡಿತ್ತು.
ಶ್ರೀಗಳಿಗೆ ಅನಾರೋಗ್ಯ ಕಾಡಿದ ಹಿನ್ನೆಲೆಯಲ್ಲಿ, ಮಠಕ್ಕೆ ತುಮಕೂರು ಜಿಲ್ಲಾಧಿಕಾರಿ ಕೆ.ಪಿ. ಮೋಹನ್ ರಾಜ್, ಪೊಲೀಸ್ ವರಿಷ್ಠಾಧಿಕಾರಿ ಡಾ. ದಿವ್ಯಾ ಗೋಪಿನಾಥ್ ಭೇಟಿ ನೀಡಿ ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದರು.












Click it and Unblock the Notifications