ರವಿ ಸಾರ್ ಜಿಂದಾಬಾದ್, ದಕ್ಷ ಅಧಿಕಾರಿಗೆ ಕಂಬನಿ ವಿದಾಯ
ತುಮಕೂರು, ಮಾ. 18 : 'ರವಿ ಸಾರ್ ಜಿಂದಾಬಾದ್, ರವಿ ಸಾರ್ ಜಿಂದಾಬಾದ್' ಎಂಬ ಘೋಷಣೆಯೊಂದಿಗೆ ದಕ್ಷ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಅಂತ್ಯ ಸಂಸ್ಕಾರ ದೊಡ್ಡಕೊಪ್ಪಲಿನಲ್ಲಿ ಮಂಗಳವಾರ ರಾತ್ರಿ ನಡೆಯಿತು. ಸಾವಿರಾರು ಜನರು ಖಡಕ್ ಅಧಿಕಾರಿಗೆ ಕಣ್ಣೀರಿನ ವಿದಾಯ ಹೇಳಿದರು. [ಈ ಸಾವು ನ್ಯಾಯವೇ ಮತ ಹಾಕಿ]
ಕೋರಮಂಗಲ ಬಳಿಯ 'ಸೇಂಟ್ ಜಾನ್ಸ್ವುಡ್ ಅಪಾರ್ಟ್ಮೆಂಟ್'ನಲ್ಲಿ ಸೋಮವಾರ ಸಂಜೆ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಡಿ.ಕೆ.ರವಿ ಅವರ ಅಂತ್ಯಕ್ರಿಯೆ ಸ್ವಗ್ರಾಮವಾದ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ದೊಡ್ಡಕೊಪ್ಪಲಿನಲ್ಲಿ ಮಂಗಳವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. [ಮಂಗಳವಾರ ನಡೆದ ಪ್ರಮುಖ ಘಟನಾವಳಿಗಳು]

ಡಿಕೆ ರವಿ ಅವರ ಅಣ್ಣನ ಮಗ ರೋಹನ್ ಗೌಡ ಅಂತ್ಯಕ್ರಿಯೆಯ ಅಂತಿಮ ವಿಧಿಗಳನ್ನು ಪೂರೈಸಿದರು. ಸರ್ಕಾರದ ಪರವಾಗಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಹಾಗೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. [ಡಿಕೆ ರವಿ ಊರು ದೊಡ್ಡಕೊಪ್ಪಲು ಗ್ರಾಮಕ್ಕೆ ದಾರಿ]
ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಹಲವು ಶಾಸಕರು ಮತ್ತು ಸಾವಿರಾರು ಜನರು ದಕ್ಷ ಅಧಿಕಾರಿಗೆ ಅಂತಿಮ ನಮನ ಸಲ್ಲಿಸಿದರು. ದೊಡ್ಡಕೊಪ್ಪಲಿನಲ್ಲಿ ಸೇರಿದ್ದ ಸಾವಿರಾರು ಜನರು ಖಡಕ್ ಅಧಿಕಾರಿಗೆ ಕಂಬನಿಯ ವಿದಾಯ ಹೇಳಿದರು. [ಅತಿಯಾದ ವೇಗವೇ ರವಿ ಸಾವಿಗೆ ಕಾರಣವಾಯಿತೆ?]
ಬೆಂಗಳೂರಿನಿಂದ ಮಂಗಳವಾರ ಮಧ್ಯಾಹ್ನ ಹೊರಟಿದ್ದ ಡಿಕೆ ರವಿ ಅವರ ಪಾರ್ಥಿವ ಶರೀರ ಹುಟ್ಟೂರು ದೊಡ್ಡಕೊಪ್ಪಲಿಗೆ ಸಂಜೆ 7 ಗಂಟೆ ಸುಮಾರಿಗೆ ಆಗಮಿಸಿತು. ಸುಮಾರು 5 ಕಿ.ಮೀ.ಉದ್ದದ ಜನರ ಸಾಲು ರವಿ ಅವರ ಅಂತಿಮ ದರ್ಶನಕ್ಕಾಗಿ ಕಾದು ಕುಳಿತಿತ್ತು.

ಹುಟ್ಟೂರು ದೊಡ್ಡಕೊಪ್ಪಲಿನಲ್ಲಿ ತುಮಕೂರು ಎಸ್ಪಿ ಕಾರ್ತೀಕ್ ರೆಡ್ಡಿ ಅವರ ನೇತೃತ್ವದಲ್ಲಿ ಅಗತ್ಯ ಪೊಲೀಸ್ ಬಂದೋ ಬಸ್ತ್ ಕೈಗೊಳ್ಳಲಾಗಿತ್ತು. ಅಂತ್ಯಕ್ರಿಯೆಗೆ ಯಾವುದೇ ತೊಂದರೆ ಆಗದಂತೆ ಸ್ವತಃ ಎಸ್ಪಿ ಸ್ಥಳದಲ್ಲೇ ಮೊಕ್ಕಾಂ ಹೂಡಿ ಭದ್ರತೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದರು.












Click it and Unblock the Notifications