ಚಿಕ್ಕನಾಯಕನಹಳ್ಳಿ: ಬಂಜಾರ ಸಮುದಾಯದ ಆಕ್ರೋಶ, ಮೂರನೇ ಸ್ಥಾನಕ್ಕೆ ಕುಸಿದ ಸಚಿವ ಜೆಸಿ ಮಾಧುಸ್ವಾಮಿ!
ತುಮಕೂರು, ಮೇ 13: ಬಿಜೆಪಿಯಲ್ಲಿದ್ದ ಕಿರಣ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಈ ಬಾರಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ ತ್ರಿಕೋನ ಪೈಪೋಟಿಗೆ ಸಾಕ್ಷಿಯಾಗಿತ್ತು. ಇದರ ಜೊತೆಗೆ ಹಾಲಿ ಸಚಿವ ಜೆಸಿ ಮಾಧುಸ್ವಾಮಿಗೆ ಕ್ಷೇತ್ರದಲ್ಲಿ ಬಂಜಾರ ಸಮುದಾಯದ ವಿರೋಧ ಕೂಡ ಹೆಚ್ಚಾಗಿತ್ತು. ಇದೇ ಕಾರಣಕ್ಕೆ ಮತ ಎಣಿಕೆಯಲ್ಲಿ ಮಾಧುಸ್ವಾಮಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಈವರೆಗೆ ಜೆಡಿಎಸ್ನ ಸುರೇಶ್ ಬಾಬು ಮತ್ತು ಬಿಜೆಪಿಯ ಜೆಸಿ ಮಾಧುಸ್ವಾಮಿ ನಡುವೆ ಇದ್ದ ಹಣಾಹಣಿ ಈ ಬಾರಿ ಕಿರಣ್ ಕುಮಾರ್ ಅವರನ್ನು ಒಳಗೊಂಡು ತ್ರಿಕೋನ ಸ್ಪರ್ಧೆಯಾಗಿತ್ತು. ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಹಾಲಿ ಶಾಸಕ ಮಾಧುಸ್ವಾಮಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಮೊದಲ ಸ್ಥಾನದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಕಿರಣ್ ಕುಮಾರ್ 33827 ಮತಗಳನ್ನು ಪಡೆದಿದ್ದಾರೆ.

ಎರಡನೇ ಸ್ಥಾನದಲ್ಲಿ ಜೆಡಿಎಸ್ನ ಸುರೇಶ್ ಬಾಬು 33619 ಮತಗಳನ್ನು ಪಡೆದಿದ್ದಾರೆ. ಹಾಲಿ ಶಾಸಕ ಮತ್ತು ಸಚಿವ ಮಾಧುಸ್ವಾಮಿ 31169 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಆರಂಭದಿಂದಲೂ ಮಾಧುಸ್ವಾಮಿ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಇದಕ್ಕೆ ಬಂಜಾರ ಸಮುದಾಯದ ಕಿಚ್ಚು ಕಾರಣ ಎನ್ನಲಾಗುತ್ತಿದೆ. ಒಳ ಮೀಸಲಾತಿ ನೀಡಿದ್ದ ಬಿಜೆಪಿ ಸರ್ಕಾರ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಸಮುದಾಯ ಕ್ಷೇತ್ರದಲ್ಲಿ ಭಾರಿ ಪ್ರತಿಭಟನೆ ನಡೆಸಿತ್ತು. ತಾಂಡಾಗಳಲ್ಲಿ ಮಾಧುಸ್ವಾಮಿ ಅವರನ್ನು ಪ್ರಚಾರಕ್ಕೂ ಬಿಟ್ಟುಕೊಂಡಿರಲಿಲ್ಲ.

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಜೆ. ಮಾಧುಸ್ವಾಮಿ ಜೆಡಿಎಸ್ನ ಸುರೇಶ್ ಬಾಬು ವಿರುದ್ಧ 10,277 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಮಾಧುಸ್ವಾಮಿ 69,612 ಮತಗಳನ್ನು ಪಡೆದಿದ್ದರೆ, ಸುರೇಶ್ ಬಾಬು 59,335 ಮತಗಳನ್ನು ಪಡೆದುಕೊಂಡಿದ್ದರು.












Click it and Unblock the Notifications