ಸಿದ್ದರಾಮಯ್ಯಗೆ ಮೂಲೆಗುಂಪಾಗುವ ಭಯವಿದೆ: ನಳಿನ್ ಕುಮಾರ್ ಕಟೀಲ್
ತುಮಕೂರು, ನವೆಂಬರ್ 8: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ಸಿನಲ್ಲಿ ಕಳೆದುಹೋಗುವ ಭಯವಿದ್ದು, ಕಾಂಗ್ರೆಸ್ಸಿನಲ್ಲಿ ಅವರ ನಾಯಕತ್ವಕ್ಕೆ ಬೆಲೆಯಿಲ್ಲ. ಅದಕ್ಕಾಗಿ ಸಿಎಂ ಮೇಲೆ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.
ತುಮಕೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, ಶಿರಾ ಹಾಗೂ ಆರ್.ಆರ್ ನಗರ ಕ್ಷೇತ್ರ ಸೇರಿದಂತೆ ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ.
ಶಿರಾದಲ್ಲಿ 25 ಸಾವಿರ, ಆರ್.ಆರ್ ನಗರದಲ್ಲಿ 40 ಸಾವಿರ ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಶಿರಾದಲ್ಲಿ ವಿಜಯೇಂದ್ರ, ಸುರೇಶ್ ಗೌಡ, ರವಿಕುಮಾರ್, ಎಸ್.ಆರ್ ಗೌಡ, ಬಿ.ಕೆ ಮಂಜುನಾಥ್ ಇವರ ಸಾಮೂಹಿಕ ಹೋರಾಟದಲ್ಲಿ ಗೆಲ್ಲುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ತಿಳಿಸಿದರು.

ಆರ್.ಆರ್ ನಗರದಲ್ಲಿ ಆರ್ ಅಶೋಕ್, ಅರವಿಂದ ಲಿಂಬಾವಳಿ ಸೇರಿದಂತೆ ಸಾಮೂಹಿಕ ಪ್ರಯತ್ನದಿಂದ ಗೆಲುವಾಗಲಿದೆ. ಸಿಎಂ ಈ ಭಾಗದಲ್ಲಿ ಪ್ರಚಾರ ನಡೆಸಿರುವುದು ಸಾಕಷ್ಟು ಪ್ರಭಾವ ಬೀರಿದೆ. ಕಾಂಗ್ರೆಸ್ಸಿನ ಒಳಜಗಳ ಬಿಜೆಪಿ ಗೆಲುವಿಗೂ ಕಾರಣವಾಗಲಿದೆ ಎಂದರು.
ರಾಜರಾಜೇಶ್ವರಿ ನಗರವನ್ನ ಡಿಕೆ ಶಿವಕುಮಾರ್ ಉಸ್ತುವಾರಿ ವಹಿಸಿಕೊಂಡಿದ್ದರು. ಶಿರಾವನ್ನು ಸಿದ್ದರಾಮಯ್ಯ ಉಸ್ತುವಾರಿ ವಹಿಸಿಕೊಂಡಿದ್ದರು. ಶಿರಾದಲ್ಲಿ ಕಾಂಗ್ರೆಸ್ ಸೋಲಿಸುವುದಕ್ಕೆ ಡಿ.ಕೆ ಶಿವಕುಮಾರ್ ತಲೆಬಿಸಿ ಮಾಡಿಕೊಂಡಿದ್ದರು. ಆರ್ಆರ್ ನಗರದಲ್ಲಿ ಕಾಂಗ್ರೆಸ್ ಸೋಲಿಸುವುದಕ್ಕೆ ಸಿದ್ದರಾಮಯ್ಯ ತಲೆಬಿಸಿ ಮಾಡಿಕೊಂಡಿದ್ದರು. ಕಾಂಗ್ರೆಸ್ಸಿನ ಆಂತರಿಕ ಜಗಳ ಈಗ ಬೀದಿಜಗಳವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ಸಿನವರಿಗೆ ಯಾವಾಗ ಸೋಲಾಗುತ್ತದೋ, ಆಗ ಇವಿಎಂ ಮೇಲೆ ಅನುಮಾನ ಪಡುತ್ತಾರೆ. ಗೆದ್ದಾಗ ಇವಿಎಂ ಸರಿ ಇರಲ್ವಾ? ಇದರಿಂದ ಕಾಂಗ್ರೆಸ್ಸಿನವರಿಗೆ ನಾವು ಸೋಲುತ್ತೇವಿ ಅಂತ ಗೊತ್ತಾಗಿದೆ. ಇವಿಎಂ ದೋಷವಿದ್ದರೆ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಅವರನ್ನು ಗೆಲ್ಲುವುದಕ್ಕೆ ನಾವು ಬಿಡ್ತಿದ್ವಾ ಎಂದು ಪ್ರಶ್ನಿಸಿದರು.












Click it and Unblock the Notifications