ವಾಹಿನಿ ವರದಿಗಾರನ ಸುದ್ದಿಗಾಗಿ ಕಾಸು ಡೀಲ್, ಆಡಿಯೋ ಬಹಿರಂಗ
ತುಮಕೂರು, ಏಪ್ರಿಲ್ 9: "ಖಾಸಗಿ ಚಾನಲ್ ನ ವರದಿಗಾರ ಹಣಕ್ಕಾಗಿ ಬೇಡಿಕೆಯಿಟ್ಟು, ಆ ಚಾನಲ್ ನಲ್ಲಿ ನನ್ನ ಪರವಾಗಿ ಕಾರ್ಯಕ್ರಮ ಮಾಡಿಕೊಡುವುದಾಗಿ ಹೇಳಿದ್ದ. ಆದರೆ ಯಾವಾಗ ಹಣ ನೀಡುವುದಿಲ್ಲ ಅಂತ ಹೇಳಿದೆನೋ ಆ ವಾಹಿನಿಯಲ್ಲಿ ನನ್ನ ವಿರುದ್ಧವಾಗಿ ಕಾರ್ಯಕ್ರಮ ಪ್ರಸಾರವಾಗಿದೆ. ಆದ್ದರಿಂದ ಚುನಾವಣೆ ಆಯೋಗ ಹಾಗೂ ಪತ್ರಕರ್ತರ ಸಂಘಕ್ಕೆ ದೂರು ನೀಡಲು ತೀರ್ಮಾನಿಸಿದ್ದೇನೆ".
- ಹೀಗೆ ಆರೋಪಿಸಿ, ಪತ್ರಿಕಾಗೋಷ್ಠಿ ನಡೆಸಿದವರು ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.ಸುರೇಶ್ ಬಾಬು. ಖಾಸಗಿ ಸುದ್ದಿ ವಾಹಿನಿಯೊಂದರ ತುಮಕೂರು ಜಿಲ್ಲೆ ವರದಿಗಾರ ಶಾಸಕರಿಗೆ ಕರೆ ಮಾಡಿ, ತಮ್ಮ ಚಾನಲ್ ನಲ್ಲಿ ನಡೆಯುವ ರಾಜಕೀಯ ಕಾರ್ಯಕ್ರಮದಲ್ಲಿ ನಿಮ್ಮ ಪರವಾಗಿ ಸುದ್ದಿ ಮಾಡ್ತೀವಿ. ಅದು ಪ್ಯಾಕೇಜ್. ಮೂರು ಲಕ್ಷ ರುಪಾಯಿ ಕೊಟ್ಟರೆ ನೀವು ಹೇಳಿದ ವಿಷಯಗಳೆಲ್ಲ ನಮ್ಮ ಪದಗಳಲ್ಲಿ ಹೇಳಿ, ಪ್ರಚಾರ ನೀಡುತ್ತೇವೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ತುಮಕೂರಿನಲ್ಲಿ ಯಾರ ಹತ್ತಿರ ವಿಚಾರಿಸಬೇಕು ಎಂಬ ಬಗ್ಗೆ ನಮ್ಮ ವಾಹಿನಿಯ ಮುಖ್ಯಸ್ಥರು ಪಟ್ಟಿ ಕೊಟ್ಟಿದ್ದಾರೆ. ಅದರಲ್ಲಿ ನಿಮ್ಮ ಹೆಸರು ಇದೆ. ಈಗಾಗಲೇ ಗುಬ್ಬಿಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಪರವಾಗಿ ಅವರಿಗೆ ಬೇಕಾದಂತೆ ವರದಿ ಮಾಡಿದ್ದೇವೆ. ಅದರಲ್ಲಿ ಹೀಗೆಲ್ಲ ಹೊಗಳಿದ್ದೇವೆ ಎಂದು ವರದಿಯನ್ನು ಓದಿ ಹೇಳಿದ್ದಾರೆ.
ವರದಿಗಾರ ಹಾಗೂ ಶಾಸಕರ ಮಧ್ಯದ ಹದಿನಾರು ನಿಮಿಷದ ಮಾತುಕತೆಯಲ್ಲಿ ಬಹುತೇಕ ವಾಹಿನಿಯ ವರದಿಗಾರ ಹೆಚ್ಚು ಮಾತನಾಡಿದ್ದಾರೆ. ಜಿಲ್ಲೆಯ ಇತರ ಮುಖಂಡರ ಹೆಸರು ಸಹ ಪ್ರಸ್ತಾವ ಆಗಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ.ಸಿ.ಗೌರಿಶಂಕರ್ ಇದೇ ವಿಚಾರಕ್ಕೆ ನನ್ನ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಮಾತು ಕೂಡ ಆಡ್ತಿಲ್ಲ ಎಂದು ವರದಿಗಾರ ಹೇಳಿರುವುದು ಕೂಡ ದಾಖಲಾಗಿದೆ.
ಸುಳ್ಳು ಸುದ್ದಿ ಮಾಡುವ ಪತ್ರಕರ್ತರ ಮಾನ್ಯತಾ ಪತ್ರ ರದ್ದು
ಮತದಾನಕ್ಕೆ ಇನ್ನು ಇಪ್ಪತ್ನಾಲ್ಕು ಗಂಟೆ ಇರುವವರೆಗೆ ನಿಮ್ಮ ಪರವಾಗಿ ಸುದ್ದಿ ಮಾಡುತ್ತೇವೆ. ಇತರ ಚಾನಲ್ ಗಳಲ್ಲಿ ನಿಮ್ಮ ವಿರುದ್ಧ ಕಾರ್ಯಕ್ರಮ ಪ್ರಸಾರ ಆದರೆ, ಅದು ತಣ್ಣಗಾಗುವಂತೆ ನಮ್ಮ ಚಾನಲ್ ನಲ್ಲಿ ಕಾರ್ಯಕ್ರಮ ಮಾಡ್ತೀವಿ. ನೀವು ಕೊಡುವ ಹಣಕ್ಕೆ ನೂರು ಪಟ್ಟು ಪ್ರತಿಫಲ ಸಿಗುತ್ತದೆ ಎಂಬ ಭರವಸೆ ನಾನು ಕೊಡ್ತೀನಿ ಎಂದು ವಾಹಿನಿಯ ವರದಿಗಾರ ಹೇಳಿದ್ದಾರೆ.
ಈ ಮಾತುಕತೆಯ ಆಡಿಯೋವನ್ನು ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.ಸುರೇಶ್ ಬಾಬು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.