ಗೋವಿಂದ! ಈ ಪಾಟಿ ಖರ್ಚು ಮಾಡಿದರೆ 'ನೀರು' ಕುಡಿಸೋದು ಗ್ಯಾರಂಟಿ!
ತುಮಕೂರು, ಫೆಬ್ರವರಿ 28: ವಿಧಾನಸಭೆ ಚುನಾವಣೆಗೆ ಆಕಾಂಕ್ಷಿಯೊಬ್ಬರು ಹೇಗೆ ತಯಾರಾಗುತ್ತಿದ್ದಾರೆ ಎಂಬುದನ್ನು ಈ ವರದಿ ಎಳೆಎಳೆಯಾಗಿ ನಿಮ್ಮ ಮುಂದಿಡುತ್ತದೆ. ಇಂಥವರು ಗೆದ್ದುಬಿಟ್ಟರೆ ಏನಾಗಬಹುದು ಎಂಬ ಊಹೆ ಆಲೋಚಿಸುವವರಿಗೆ ಬಿಟ್ಟದ್ದು. ಕ್ಷೇತ್ರ ಯಾವುದಪ್ಪಾ ಅಂದರೆ, ತುಮಕೂರು ನಗರ ವಿಧಾನಸಭಾ ಕ್ಷೇತ್ರ.
ಇಲ್ಲಿನ ಅಖಾಡದಲ್ಲಿ ಇಳಿಯುವುದು ಖಾತ್ರಿ ಆಗಿರುವ ಆ ರಾಜಕಾರಣಿ ಮತದಾರರನ್ನು ಹತ್ತಿರದ ದೇವಸ್ಥಾನ, ದರ್ಗಾಗಳಿಗೆ ಬಸ್ಸಿನಲ್ಲಿ ಕರೆದುಕೊಂಡು ಹೋಗುತ್ತಾರೆ. ಈ ರೀತಿ ಜನರನ್ನು ಗುಂಪು ಹಾಕಿಕೊಂಡು ಕರೆದುಕೊಂಡು ಬರುವ ಏಜೆಂಟನಿಗೆ ಐದು ಸಾವಿರ ರುಪಾಯಿ ಅಂತ ನಿಗದಿಯಾಗಿದೆ. ಜನರನ್ನು ಕರೆತಂದ ಮೇಲೆ ಬಸ್ಸಿನಲ್ಲಿ ತುಂಬಲಾಗುತ್ತದೆ.
ಸಿದ್ದರಾಮಯ್ಯ ಅವರದ್ದು ಪಿಕ್ ಪಾಕೆಟ್ ಸರ್ಕಾರ: ಎಚ್ಡಿಕೆ
ಹತ್ತಿರದ ಅಂದರೆ ಕೊರಟಗೆರೆ, ನಾಗವಲ್ಲಿ, ಶಿರಾ ಕಡೆಗೆ ಇರುವ ದೇವಸ್ಥಾನ- ದರ್ಗಾಗಳಿಗೆ ಕರೆದುಕೊಂಡು ಹೋಗಿ, ಒಂದು ರುಪಾಯಿ ನಾಣ್ಯ- ಹೂವನ್ನು ಹುಂಡಿಯಲ್ಲಿ ಹಾಕಿಸುತ್ತಾರೆ. ಇದು ನಮ್ಮ ಮತ ನಿಮಗೇ ಎಂದು ಪ್ರಾಮಿಸ್ ಮಾಡಿಸುವ ವಿಧಾನ. ಆ ನಂತರ ಒಂದು ಊಟದ ವ್ಯವಸ್ಥೆ ಮಾಡಿಸಲಾಗುತ್ತದೆ.
ಬಸ್ಸಿನಲ್ಲಿರುವ ಎಲ್ಲ ಮತದಾರ ಬಂಧುಗಳಿಂದ ವೋಟರ್ ಐಡಿ ಪಡೆದುಕೊಳ್ಳುತ್ತಾರೆ. ಆ ನಂತರ ಎಲ್ಲರ ಮೊಬೈಲ್ ಫೋನ್ ನಂಬರ್ ತೆಗೆದುಕೊಂಡು, ಏಜೆಂಟ್ ಮಹಾಶಯ ಕಾಲ್ ಮಾಡುತ್ತಾನೆ. ಆ ಕರೆಯನ್ನು ವೋಟರ್ ಐಡಿ ನೀಡಿದವರೇ ಸ್ವತಃ ಸ್ವೀಕರಿಸಿ, ಮಾತನಾಡಬೇಕು. ಹಾಗೆ ಖಾತ್ರಿ ಆದ ಮೇಲೆ ಒಬ್ಬೊಬ್ಬರಿಗೆ ಒಂದರಿಂದ ಎರಡು ಸಾವಿರ ರುಪಾಯಿ ಕೊಡಲಾಗುತ್ತದೆ.
ಎರಡು-ಮೂರು ತಿಂಗಳಿಂದ 'ಟೆಂಪಲ್ ರನ್'
ಹೀಗೆ ಕಳೆದ ಎರಡು- ಮೂರು ತಿಂಗಳಿಂದ 'ಟೆಂಪಲ್ ರನ್' ನಡೆಯುತ್ತಲೇ ಇದೆ. ಬಸ್ಸಿನಲ್ಲಿ ಮಹಿಳೆಯರನ್ನು ಕರೆದುಕೊಂಡು ಹೋಗಿ ಅರಿಶಿನ-ಕುಂಕುಮ ಕೊಟ್ಟು, ಸೀರೆ- ಕುಪ್ಪುಸದ ಕಣ, ಜತೆಗೆ ದಕ್ಷಿಣೆ ಕೊಡುವುದು ನಡೆದೇ ಇದೆ. ಒಮ್ಮೆ ಮಾಧ್ಯಮವೊಂದರಲ್ಲಿ ಈ ಬಗ್ಗೆ ವರದಿ ಆಗಿದ್ದರೂ ವೋಟರ್ ಐಡಿ ಕಸಿದುಕೊಳ್ಳುವ ಐನಾತಿ ಕೆಲಸ ಮುಂದುವರಿದೇ ಇದೆ.
ದೇವಸ್ಥಾನದಲ್ಲಿ ಪ್ರಮಾಣ ಮಾಡಿಸ್ತಾರೆ
ಹೆತ್ತೇನಹಳ್ಳಿ ಮಾರಮ್ಮ, ಸಿಗಂದೂರು ಕ್ಷೇತ್ರ, ಮಧುಗಿರಿ ದಂಡಿನಮಾರಮಾರಮ್ಮ, ಚಿಕ್ಕ ಕೊರಟಗೆರೆ ಕೆಂಪಮ್ಮ, ಹೆಬ್ಬೂರು ನೆಟ್ಟಿಕೆರೆ ದರ್ಗಾ, ಕೊರಟಗೆರೆ ರಾಂಪುರ ಬಳಿ ದರ್ಗಾ ಹೀಗೆ ಕೆಲವು ದೇಗುಲ- ದರ್ಗಾಗಳನ್ನು ಫಿಕ್ಸ್ ಮಾಡಿಕೊಂಡು, ಜೆಂಟ್ಸ್- ಲೇಡೀಸ್ ಎಲ್ಲರನ್ನೂ ಅಲ್ಲಿಗೆ ಕರೆದುಕೊಂಡು ಹೋಗಿ ಆಣೆ-ಪ್ರಮಾಣ ಮಾಡಿಸಿಕೊಳ್ಳುತ್ತಿರುವುದು ಇಂದಿಗೂ ಎಲ್ಲರಿಗೂ ಗೊತ್ತಾಗಿರುವ ಬ್ರಹ್ಮಾಂಡ ರಹಸ್ಯ.
ಮೂವರು ಹಾಲಿ ಶಾಸಕರ ಬೆಂಬಲ
ಇಂತಹ ಘನಂದಾರಿ ಕೆಲಸಕ್ಕೆ ಹಾಲಿ ಶಾಸಕರಾಗಿರುವ ಮೂವರ ಬೆಂಬಲ ಇದೆ ಎಂಬುದು ಕೂಡ ಜಗಜ್ಜಾಹೀರಾಗಿದೆ. 'ಸೈಟು- ಕಾರು, ಕಾಂಚಾಣ ತೆಗೆದುಕೊಂಡ ಋಣ ಮರೆಯಕ್ಕಾಗತ್ತಾ?' ಎಂದು ಅಂತರಂಗ ಗೊತ್ತಿರುವ ಕೆಲವು ಮರಿ ಪುಢಾರಿಗಳು ಬಹಿರಂಗವಾಗಿಯೇ ಮಾತನಾಡುತ್ತಾರೆ.
ತಪ್ಪು ಕಾಣಿಕೆ ಹಾಕಿ, ನಮಗ್ಯಾರು ಇಷ್ಟವೋ ಅವರಿಗೆ ವೋಟು ಹಾಕ್ತೀವಿ
ಆದರೆ, ಕೆಲವು ಮತದಾರ ಕಿಲಾಡಿಗಳು ಹೇಳುವ ಮಾತು ಕೇಳಿದರೆ ಅಬ್ಬಾ ಎನಿಸುತ್ತದೆ. "ದೇವರ ಮೇಲೆ ಆಣೆ ಮಾಡಿಸಿರಬಹುದು. ನಾವು ದಿನದ ಕೂಲಿ ಬಿಟ್ಟು ಅಲ್ಲಿಗೆ ಹೋಗಿರ್ತೀವಿ. ಒಂದು ಸಾವಿರವೋ ಎರಡು ಸಾವಿರವೋ ಅದಕ್ಕೆ ಸರಿ ಹೋಗುತ್ತೆ. ಎಲೆಕ್ಷನ್ ಟೈಮ್ ನಲ್ಲಿ ದೇವರಿಗೆ ನೂರೊಂದು ರುಪಾಯಿ ತಪ್ಪು ಕಾಣಿಕೆ ಹಾಕಿ, ನಮಗ್ಯಾರು ಇಷ್ಟವೋ ಅವರಿಗೆ ವೋಟು ಹಾಕ್ತೀವಿ" ಅಂತಾರೆ. ಅಲ್ಲಿಗೆ ಮತದಾರರಿಗೆ 'ನೀರು' ಕುಡಿಸಲು ಬಂದರೆ ನಿಮ್ಮ ಕತೆ 'ಗೋವಿಂದ ಗೋವಿಂದ' ಎಂಬುದನ್ನು ಹೇಳಿದ ಹಾಗೆ ಆಯ್ತಲ್ಲ?